ಚಾಮರಾಜನಗರ: ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿದ ವೇಳೆ ಬಾಗಿಲು ಮುಚ್ಚಿದ್ದರಿಂದ ತುಂಬು ಗರ್ಭಿಣಿ ಆರೋಗ್ಯ ಕೇಂದ್ರದ ಎದುರೇ ಹೆರಿಗೆಯಾದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕೂಡ್ಲೂರು ಗ್ರಾಮದಲ್ಲಿ ನಡೆದಿದೆ.ಸೂಳೆಕೋಬೆ ಗ್ರಾಮದ ಕುಮಾರ್ ಪತ್ನಿ ಕವಿತಾ ಆಸ್ಪತ್ರೆ ಎದುರು ಹೆರಿಗೆಯಾದವರು. ಇವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಪತಿ ಕುಮಾರ್ ತಕ್ಷಣ ಅವರನ್ನು ಬೈಕ್ ನಲ್ಲಿಯೇ 4ರಿಂದ 5 ಕಿಮೀ ದೂರವಿರುವ ಕೂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ಸಿಬ್ಬಂದಿ ಯಾರೂ ಇಲ್ಲದೇ ಆಸ್ಪತ್ರೆ ಬಾಗಿಲಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಹಿಡಿದುಕೊಳ್ಳುವುದೋ, ಪತ್ನಿಯನ್ನು ಸಂತೈಸುವುದೋ ಎಂದು ತೋಚದೇ ಪತಿ ಕುಮಾರ್ ಆಸ್ಪತ್ರೆ ಮುಂಭಾಗವೇ ಪರದಾಡಿದ್ದಾರೆ. ಈ ವೇಳೆ ಸ್ಥಳೀಯರ ಸಹಕಾರದಿಂದ ಹೆರಿಗೆ ಮಾಡಿಸಿದ್ದು ಈಗ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ.ಇನ್ನಾದರೂ ಗ್ರಾಮೀಣ ಪ್ರದೇಶದಲ್ಲಿರುವ ಆರೋಗ್ಯ ಕೇಂದ್ರಗಳತ್ತ ಸರ್ಕಾರ ಗಮನಹರಿಸಿ ಅವುಗಳು ರಾತ್ರಿ ಹಗಲು ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada