‘ಪಂಚರತ್ನ’ ಕನಸುಗಳನ್ನು ಬಿತ್ತಿ ಪ್ರಾದೇಶಿಕ ಅಸ್ಮಿತೆ ಮೂಲಕ ರಾಷ್ಟ್ರೀಯ ಪಕ್ಷಗಳಿಗೆ ಸಡ್ಡು ಹೊಡೆಯುವ ಉತ್ಸಾಹದಲ್ಲಿದ್ದ ಜೆಡಿಎಸ್ಗೆ ಅಂತಃಕಲಹದ ತಲೆನೋವು ತೀವ್ರಗೊಂಡಿದೆ. ಹಾಸನ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ದೇವೇಗೌಡರ ಕುಟುಂಬದೊಳಗಿನ ಮುಸುಕಿನ ಗುದ್ದಾಟಕ್ಕೆ ಮದ್ದು ಸಿಗದಿರುವುದು ಪಕ್ಷದ ಕಾರ್ಯಕರ್ತರ ಉತ್ಸಾಹಕ್ಕೆ ಭಂಗ ತಂದಿದೆ.ಹಾಸನ ಕ್ಷೇತ್ರವನ್ನು ‘ಕಮಲ’ದ ಹಿಡಿತದಿಂದ ಮರಳಿ ಪಡೆಯುವ ಉತ್ಸಾಹದೊಂದಿಗೆ ಅಖಾಡ ಪ್ರವೇಶಿಸಿರುವ ಭವಾನಿ ರೇವಣ್ಣ ಅವರು ಹಿಂದೆ ಸರಿಯುವ ಸೂಚನೆ ಗೋಚರಿಸುತ್ತಿಲ್ಲ. ಕ್ಷೇತ್ರದ ಹಿರಿಯ ಮುಖಂಡರು ಮತ್ತು ಕಾರ್ಯಕರ್ತರನ್ನು ಕರೆಸಿಕೊಂಡು ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳುವಂತೆ ‘ಆಫರ್’ ನೀಡಲು ಎಚ್.ಡಿ.ಕುಮಾರಸ್ವಾಮಿ ತಂತ್ರಗಾರಿಕೆ ಹೆಣೆದಿದ್ದರು. ಆದರೆ, ಪಕ್ಷದ ಕೇಂದ್ರ ಕಚೇರಿಯಲ್ಲಿ ಭಾನುವಾರ ನಿಗದಿಯಾಗಿದ್ದ ಈ ಸಭೆಯನ್ನು ಶನಿವಾರ ರಾತ್ರಿ ದಿಢೀರ್ ರದ್ದುಗೊಳಿಸುವಲ್ಲಿಎಚ್.ಡಿ.ರೇವಣ್ಣ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.ಈ ಬೆಳವಣಿಗೆಯಿಂದಾಗಿ ಹಾಸನ ಟಿಕೆಟ್ ಗೊಂದಲ ಭಾನುವಾರ ಕ್ಲೈಮಾಕ್ಸ್ ಹಂತ ತಲುಪುವ ನಿರೀಕ್ಷೆ ಹುಸಿಯಾಗಿದೆ. ಭವಾನಿ ರೇವಣ್ಣ ಉಮೇದುವಾರಿಕೆ ಕುರಿತಾದ ಕುತೂಹಲ ಮುಂದುವರಿದಿದ್ದು, ಗೌಡರ ಕುಟುಂಬದೊಳಗಿನ ಕಲಹ ಮಗ್ಗಲು ಬದಲಿಸಿದೆ. ಹಾಸನದಲ್ಲೇ ಸಭೆ ನಡೆಸಿ ಗೊಂದಲ ಬಗೆಹರಿಸಬೇಕು ಎಂಬ ವಾದ ಮುನ್ನೆಲೆಗೆ ಬಂದಿದ್ದು, ದೇವೇಗೌಡರ ಮಧ್ಯಪ್ರವೇಶದ ಅನಿವಾರ್ಯತೆ ಸೃಷ್ಟಿಯಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada