ನಮ್ಮ ಮಹಾನ್ ಕಲಾವಿದ ಕೆ. ಚಂದ್ರನಾಥ ಆಚಾರ್ಯರು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿರುವವರು.ಚಂದ್ರನಾಥ ಆಚಾರ್ಯರು, 1949ರ ಫೆಬ್ರವರಿ 28ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಜನಿಸಿದರು. ತಂದೆ ಮಹಾಲಿಂಗ ಆಚಾರ್ಯರು. ತಾಯಿ ಸುಶೀಲಮ್ಮ. ತಾವು ಬೆಳೆದು ಬಂದ ಪರಿಸರ ಮತ್ತು ತಾವು ಕಂಡ ತಾಯಿಯ ತಂದೆ ಮಧೂರ ಮಹಾಲಿಂಗಾಚಾರ್ಯ ಮತ್ತು ಶಿವರಾಮ ಕಾರಂತರಂತಹ ವ್ಯಕ್ತಿತ್ವಗಳಿಂದ ಚಂದ್ರನಾಥ ಆಚಾರ್ಯರು ಅಪಾರವಾಗಿ ಪ್ರಭಾವಿತರಾದವರು. ಕಾಲೇಜು ಶಿಕ್ಷಣದ ವೇಳೆಯ ಹೊತ್ತಿಗೆ ಅವರಲ್ಲಿ ಕಲಾವಿದನಾಗಬೇಕೆಂಬ ಆಶಯ ದೊಡ್ಡದಾಗಿ ಬೆಳೆದಿತ್ತು. ಹೊಟ್ಟೆಪಾಡಿಗಾಗಿ ಬೆಂಗಳೂರಿನ ‘ಮಲ್ಲಿಗೆ’ ಮಾಸಪತ್ರಿಕೆಗೆ ಕಲಾವಿದರಾಗಿ ಕೆಲಸ ಮಾಡುತ್ತಲೇ ಅನೇಕ ಪುಸ್ತಕಗಳಿಗೆ ಮುಖಚಿತ್ರಗಳನ್ನೂ ರಚಿಸುತ್ತಾ ಬಂದರು.ಮಹಾನ್ ಕಲಾವಿದ ಆರ್.ಎಂ. ಹಡಪದರ “ಕೆನ್ ಸ್ಕೂಲ್ ಆಫ್ ಆರ್ಟ್” ಸೇರಿದ್ದು ಅವರ ಬದುಕಿನ ಬಹು ಮುಖ್ಯ ಅಧ್ಯಾಯ. ಕಲಾ ಲೋಕದಲ್ಲಿ ಸೃಜನಶೀಲರಾಗಿ ಬೆಳೆಯುವಲ್ಲಿ ಇದೊಂದು ಪ್ರಮುಖ ಘಟ್ಟವಾಗಿ, ಆಚಾರ್ಯರು 1973 ವರ್ಷದಲ್ಲಿ, ಇಲ್ಲಿಂದ ಕಲಾ ಡಿಪ್ಲೊಮಾ ಪಡೆದರು.ಪ್ರಜಾವಾಣಿ ಪತ್ರಿಕೆ ಮತ್ತು ಅದರ ಬಳಗದ ನಿಯತಕಾಲಿಕೆಗಳಾದ ‘ಸುಧಾ’ ಮತ್ತು ‘ಮಯೂರ’ಗಳಲ್ಲಿನ ಚಿತ್ರಗಳಿಂದ ಚಂದ್ರನಾಥ ಆಚಾರ್ಯರು ಕನ್ನಡ ನಾಡಿನ ಮನೆಮಾತಾದರು. ಇಲ್ಲಿನ ಕತೆಗಳು ಆಚಾರ್ಯರ ಚಿತ್ರಗಳಿಂದ ತಮ್ಮ ಅರ್ಥ ವ್ಯಾಪ್ತಿ ಮತ್ತು ಆಕರ್ಷಣೀಯ ಗುಣಗಳನ್ನು ವೃದ್ಧಿಸಿಕೊಂಡವು. ಅವರ ಕಲೆ ನವ್ಯಕಲೆಯ ಚಿತ್ರರಂಗವನ್ನೂ ಆಕರ್ಷಿಸಿತು. ಲಂಕೇಶರ ‘ಪಲ್ಲವಿ’, ‘ಎಲ್ಲಿಂದಲೋ ಬಂದವರು’, ‘ಅನುರೂಪ’, ಮತ್ತು ಗಿರೀಶ್ ಕಾಸರವಳ್ಳಿ ಅವರ ‘ಘಟಶ್ರಾದ್ಧ’ ಮುಂತಾದ ಅನೇಕ ಚಿತ್ರಗಳಲ್ಲಿ ಚಂದ್ರನಾಥ ಆಚಾರ್ಯರ ಕಲಾ ನಿರ್ದೇಶನ ಶೋಭಿಸಿತು.1979ರ ವರ್ಷದಲ್ಲಿ ಮಹಾನ್ ಕಲಾವಿದರಾದ ಕೆ.ಕೆ. ಹೆಬ್ಬಾರ್ ಅವರು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಚಂದ್ರನಾಥ ಆಚಾರ್ಯರಿಗೆ ವಿದ್ವಾಂಸ ವೇತನ ಸಂದು, ಶಾಂತಿ ನಿಕೇತನದಲ್ಲಿ ಎರಡು ವರ್ಷದ ಗ್ರಾಫಿಕ್ಸ್ ಕಲಾ ಅಧ್ಯಯನಕ್ಕೆ ಸದವಕಾಶ ಕೂಡಿಬಂತು. 1981ರಲ್ಲಿ ಶಾಂತಿನಿಕೇತನದಿಂದ ಸ್ನಾತಕೋತ್ತರ ಪದವೀಧರರಾಗಿ ಹೊರಹೊಮ್ಮಿದ ಆಚಾರ್ಯರಿಗೆ, ಅಲ್ಲಿನ ಶ್ರದ್ಧಾಪೂರ್ಣ ಅಧ್ಯಯನ ಅವರ ಕಲೆಗಳಲ್ಲಿ ಮತ್ತಷ್ಟ್ರು ವಿಸ್ತೃತಿ ವೈವಿಧ್ಯಗಳನ್ನು ಹೊರಹೊಮ್ಮಿಸುವಲ್ಲಿ ಪ್ರಮುಖ ಘಟ್ಟವಾಯಿತು. ಅಲ್ಲಿಂದ ಪುನಃ 2003ರವರೆವಿಗೆ, ಪತ್ರಿಕಾಲೋಕದಲ್ಲಿ ತಮ್ಮ ಕಲೆಯನ್ನು ಬೆಳಗಿದ ಚಂದ್ರನಾಥ ಆಚಾರ್ಯರು, ತಮ್ಮ ಕಲೆಯನ್ನು ವಿಶಾಲ ಲೋಕದಲ್ಲಿ ತೆರೆದಿಡುವ ನಿಟ್ಟಿನಲ್ಲಿ ಅಲ್ಲಿಂದ ಹೊರಬಂದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: