ಎಂಇಎಸ್ ಹಾಗೂ ಶಿವಸೇನೆಯ ಪುಂಡರು ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟ ವಿಚಾರ ಕನ್ನಡಿಗರಲ್ಲಿ ತೀವ್ರ ಆಕ್ರೋಶ ಹುಟ್ಟುಹಾಕಿದೆ. ಕನ್ನಡ ಚಿತ್ರರಂಗದ ಹಲವು ನಟ-ನಟಿಯರು ಈ ಬಗ್ಗೆ ಈಗಾಗಲೇ ಆಕ್ರೋಶ ಹೊರಹಾಕಿದ್ದಾರೆ.
ಕನ್ನಡ ಚಿತ್ರಗಳಿಗೆ ಸಪೋರ್ಟ್ ಮಾಡಿ ಎಂದು ಮನವಿ ಮಾಡಿಕೊಂಡ ಶಿವಣ್ಣ
ಕನ್ನಡ ಧ್ವಜ ಸುಟ್ಟ ಘಟನೆಯನ್ನು ಖಂಡಿಸಿದ ಮೊದಲಿಗರಲ್ಲಿ ಒಬ್ಬರು ನಟ ಶಿವರಾಜ್ ಕುಮಾರ್, ನಿನ್ನೆ ಡಾಲಿ ಧನಂಜಯ್ ನಟನೆಯ ‘ಬಡವ ರಾಸ್ಕಲ್’ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಿವರಾಜ್ ಕುಮಾರ್ ಅವರು, ಕನ್ನಡ ಧ್ವಜ ಸುಟ್ಟ ವಿಚಾರವಾಗಿ ಆವೇಶಭರಿತರಾಗಿ ಮಾತನಾಡಿದರು.
”ಎಲ್ಲರಿಗೂ ಎಲ್ಲ ಭಾಷೆಯೂ ಮುಖ್ಯ. ನಾವೆಲ್ಲರೂ ಭಾರತೀಯರು. ನಾವೆಲ್ಲರೂ ಒಂದು. ನಾವೆಲ್ಲರೂ ಒಂದಾಗಿರಬೇಕೆಂದರೆ ಪರಸ್ಪರರ ಭಾಷೆಗೆ, ಸಂಸ್ಕೃತಿಗೆ ನಾವು ಗೌರವ ಕೊಡಬೇಕು. ಅದು ಎಲ್ಲರ ಧರ್ಮ. ಬೇರೆಯವರ ಧ್ವಜಕ್ಕೆ ಅಪಮಾನ ಮಾಡುವುದು ಬಹಳ ಹೇಯ. ಅಂಥಹಾ ಕೃತ್ಯ ಯಾರೂ ಮಾಡಬಾರದು. ಧ್ವಜ ಸುಡುವುದು ಎಂದರೆ ತಾಯಿಯನ್ನೇ ಸುಟ್ಟಂತೆ” ಎಂದು ಭಾವುಕವಾಗಿ ಹೇಳಿದರು ನಟ ಶಿವರಾಜ್ ಕುಮಾರ್.
”ನಾನು ಎಲ್ಲ ಭಾಷೆಗೆ ಗೌರವ ಕೊಡುತ್ತೀನಿ, ಆದರೆ ಕನ್ನಡವನ್ನು ಹೆಚ್ಚು ಪ್ರೀತಿಸುತ್ತೀನಿ”
”ನಾನು ಹುಟ್ಟಿದ್ದು ಚೆನ್ನೈನಲ್ಲಿ. ನಾನು ಮೂರನೇ ಭಾಷೆಯಾಗಿ ತಮಿಳು ಕಲಿತೆ, ಕಲಿಯಲೇ ಬೇಕಿತ್ತು. ನನಗೆ ತಮಿಳುನಾಡಿನಲ್ಲಿ ಗೆಳೆಯರಿದ್ದಾರೆ ಅವರೊಟ್ಟಿಗೆ ನಾನು ತಮಿಳಿನಲ್ಲಿ ಮಾತನಾಡುತ್ತೇನೆ. ನಾನು ಎಲ್ಲ ಭಾಷೆಯ ಸಿನಿಮಾ ನೋಡುತ್ತೇನೆ. ತಮಿಳು, ತೆಲುಗು, ಮಲಯಾಳಂ, ಮರಾಠಿ, ಹಿಂದಿ, ಇಂಗ್ಲೀಷ್ ಕೊನೆಗೆ ಗುಜರಾತಿ ಭಾಷೆಯ ಸಿನಿಮಾ ಸಹ ನೋಡ್ತೀನಿ. ಏಕೆಂದರೆ ನನಗೆ ಆ ಭಾಷೆಯ ಮೇಲಿರುವ ಗೌರವ ಅದು. ‘ಅಖಂಡ’ ಅಂಥಹಾ ಸಿನಿಮಾಕ್ಕೆ ನಾನು ಮೊದಲ ಶೋಗೆ ಹೋಗ್ತೀನಿ. ಬಾಲಕೃಷ್ಣ ಅವರ ಮೇಲೆ ನನಗಿರುವ ಗೌರವ ಅದು. ಎಲ್ಲ ಭಾಷೆಯ ಸಿನಿಮಾ ನೋಡೋಣ, ಎಲ್ಲ ಭಾಷೆಯನ್ನೂ ಗೌರವಿಸೋಣ. ಆದರೆ ಕನ್ನಡ ಭಾಷೆಯ ಸಿನಿಮಾ ಹೆಚ್ಚು ನೋಡೋಣ. ಕನ್ನಡ ಭಾಷೆಯನ್ನು ಹೆಚ್ಚು ಗೌರವಿಸೋಣ” ಎಂದರು ಶಿವಣ್ಣ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada