ಮುಂಬೈ: ಮೂರು ವರ್ಷಗಳ ಹಿಂದಿನವರೆಗೂ ಶತಕ ಸಿಡುವುದನ್ನು ಹವ್ಯಾಸ ಮಾಡಿಕೊಂಡಿದ್ದ ಭಾರತದ ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿಯ ಬ್ಯಾಟ್ ಮಂಕಾಗಿದೆ. 2019ರ ನವೆಂಬರ್ ಬಳಿಕ ವಿರಾಟ್ ಕೊಹ್ಲಿ ಒಂದೇ ಒಂದು ಶತಕ ಸಿಡಿಸಿಲ್ಲ. ವಿರಾಟ್ ಫಾರ್ಮ್ ಬಗ್ಗೆ ಇದುವರೆಗೆ ಏನೂ ಮಾತನಾಡದ ಬಿಸಿಸಿಐ ಈಗ ತಾಳ್ಮೆ ಕಳೆದುಕೊಂಡಿದೆ ಎನ್ನುತ್ತಿದೆ ವರದಿ.
ಇಂಗ್ಲೆಂಡ್ ನಲ್ಲಿ ಗುರುವಾರದಿಂದ ಪ್ರಾರಂಭವಾಗುವ ಟಿ20 ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಆಡಲಿದ್ದಾರೆ. ಆದರೆ ವಿರಾಟ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನ ಕೊನೆಯ ಸರಣಿಯಾಗುವ ಲಕ್ಷಣ ದಟ್ಟವಾಗಿದೆ. ವಿರಾಟ್ ಈ ಎರಡು ಪಂದ್ಯಗಳಲ್ಲಿ ಮಿಂಚಿದರೆ ಮಾತ್ರ ಅವರನ್ನು ಮುಂದೆ ಆಯ್ಕೆಗೆ ಪರಿಗಣಿಸಲಾಗುತ್ತದೆ ಎಂದು ಬಿಸಿಸಿಐ ಸ್ಪಷ್ಟವಾಗಿ ಹೇಳಿದೆ ಎನ್ನಲಾಗಿದೆ.
ವೆಸ್ಟ್ ಇಂಡೀಸ್ನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಭಾಗವಾಗಿರುವ ಆಟಗಾರರ ಹೆಸರನ್ನು ಬಿಸಿಸಿಐ ಬುಧವಾರ ಬಿಡುಗಡೆ ಮಾಡಿದೆ. ವಿರಾಟ್ ಸೇರಿದಂತೆ ಹಲವಾರು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಶಿಖರ್ ಧವನ್ ನಾಯಕನಾಗಿ ಮತ್ತು ರವೀಂದ್ರ ಜಡೇಜಾ ಉಪನಾಯಕನಾಗಿ ನೇಮಕಗೊಂಡಿದ್ದಾರೆ.
ವೆಸ್ಟ್ ಇಂಡೀಸ್ ನಲ್ಲಿ ನಡೆಯಲಿರುವ ಐದು ಪಂದ್ಯಗಳ ಟಿ20 ಸರಣಿಗೆ ತಂಡ ಪ್ರಕಟವಾಗಿಲ್ಲ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಆಟಗಾರರು (ಮುಖ್ಯವಾಗಿ ವಿರಾಟ್) ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದರ ಆಧಾರದ ಮೇಲೆ ಟಿ20 ತಂಡವನ್ನು ಆಯ್ಕೆ ಮಾಡಲಾಗುತ್ತದೆ ಎಂದು ಬಿಸಿಸಿಐ ಮೂಲಗಳು ತಿಳಿಸಿದೆ.
ರೋಹಿತ್, ಪಂತ್ ಮತ್ತು ಹಾರ್ದಿಕ್ ಪಾಂಡ್ಯ ವೆಸ್ಟ್ ಇಂಡೀಸ್ನಲ್ಲಿ ಟಿ20 ಸರಣಿ ಆಡುವ ಸಾಧ್ಯತೆಯಿದೆ. ವೇಗಿ ಬುಮ್ರಾ ಕೆರಿಬಿಯನ್ ಗೆ ಪ್ರಯಾಣಿಸುವ ಸಾಧ್ಯತೆ ಕಡಿಮೆ. ಕೊಹ್ಲಿಗೆ ಸಂಬಂಧಿಸಿದಂತೆ, ಟಿ20 ವಿಶ್ವಕಪ್ಗೆ ಏನು ಬೇಕು ಎಂಬುದರ ಕುರಿತು ತಂಡದ ಮ್ಯಾನೇಜ್ಮೆಂಟ್ ಏನು ನಿರ್ಧರಿಸುತ್ತದೆ ಎಂಬುದನ್ನು ನೋಡಬೇಕು. ಇಂಗ್ಲೆಂಡ್ ನಲ್ಲಿನ ಈ ಸೀಮಿತ ಓವರ್ಗಳ ಸರಣಿಯು ಕೊಹ್ಲಿಗೆ ಬಹಳ ನಿರ್ಣಾಯಕವಾಗಿದೆ” ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಕೆಲಸದ ಹೊರೆ ನಿರ್ವಹಣೆಯನ್ನು ಉಲ್ಲೇಖಿಸಿ ಸರಣಿಯಿಂದ ಆಗಾಗ್ಗೆ ವಿರಾಮವನ್ನು ಕೇಳುವ ಹಿರಿಯ ಆಟಗಾರರ ಬಗ್ಗೆ ತಂಡದ ಆಡಳಿತವು ಅಸಮಾಧಾನಗೊಂಡಿದೆ ಎಂದು ವರದಿಯಾಗಿದೆ.
“ಪ್ರತಿ ಆಯ್ಕೆ ಸಭೆಯಲ್ಲಿ, ಕೆಲಸದ ಹೊರೆ ನಿರ್ವಹಣೆಯ ಸಮಸ್ಯೆ ಬರುತ್ತದೆ. ರೋಹಿತ್, ಕೊಹ್ಲಿ, ಪಾಂಡ್ಯ, ಬುಮ್ರಾ ಮತ್ತು ಶಮಿಯಂತಹ ಆಟಗಾರರು ಯಾವಾಗಲೂ ವಿಶ್ರಾಂತಿಯ ಬಗ್ಗೆ ಮಾತನಾಡುತ್ತಾರೆ” ಎಂದು ಬಿಸಿಸಿಐ ಮೂಲವೊಂದು ಹೇಳಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada