ಕೃಷ್ಣಕುಮಾರಿ ದಕ್ಷಿಣ ಭಾರತ ಚಲನಚಿತ್ರರಂಗದ ಸುಂದರ ಪ್ರತಿಭಾವಂತ ಕಲಾವಿದೆ. ಭಕ್ತ ಕನಕದಾಸ ಚಿತ್ರದ “ಸಿಂಗಾರ ಶೀಲ, ಸಂಗೀತ ಲೋಲ”, ಸ್ವರ್ಣಗೌರಿ ಚಿತ್ರದ “ನುಡಿಮನ ಶಿವಗುಣ ಸಂಕೀರ್ತನ” ಮತ್ತು “ಜಯ ಗೌರಿ ಜಗದಶ್ವರಿ” ಗೀತೆಗಳಲ್ಲಿನ ಅವರ ಸುಂದರ ನೃತ್ಯ ಮತ್ತು ಭಾವಾಭಿವ್ಯಕ್ತಿ ಸೌಂದರ್ಯಗಳು ತಕ್ಷಣ ಕಣ್ಮುಂದೆ ಬರುತ್ತವೆ.
ಕೃಷ್ಣಕುಮಾರಿ 1933ರ ಮಾರ್ಚ್ 6ರಂದು ಕೊಲ್ಕತ್ತಾ ಸಮೀಪದ ನೈಹಾತಿ ಎಂಬಲ್ಲಿ ಜನಿಸಿದರು. ಮತ್ತೋರ್ವ ಜನಪ್ರಿಯ ಕಲಾವಿದೆ ಸಾಹುಕಾರ್ ಜಾನಕಿ ಇವರ ಹಿರಿಯ ಸಹೋದರಿ.
ರೂಪವತಿಯಾಗಿದ್ದ ಕೃಷ್ಣಕುಮಾರಿ ತೆಲುಗಿನ ಪಾತಾಳ ಭೈರವಿ ಮತ್ತು ಕನ್ನಡದ ಗುಣಸಾಗರಿ ಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿ, 1951ರಲ್ಲಿ ತೆಲುಗಿನ ‘ನವ್ವಿತೆ ನವರತ್ನುಲು’ ಮೂಲಕ ನಾಯಕಿ ಪಾತ್ರಧಾರಿಯಾದರು.ಖ್ಯಾತ ನಟರಾದ ಡಾ.ರಾಜ್ ಕುಮಾರ್, ಶಿವಾಜಿ ಗಣೇಶನ್, ಎನ್. ಟಿ. ರಾಮರಾವ್, ಅಕ್ಕಿನೇನಿ ನಾಗೇಶ್ವರ್ ರಾವ್ ಮುಂತಾದವರು ಸೇರಿದಂತೆ ಎಲ್ಲ ಜನಪ್ರಿಯ ಕಲಾವಿದರೊಂದಿಗೆ ನಟಿಸಲು ಅಪಾರ ಬೇಡಿಕೆ ಹೊಂದಿದ್ದರು.
ಕೃಷ್ಣಕುಮಾರಿ ಅವರು ಉದ್ಯಮಿ ಅಜಯ್ ಮೋಹನ್ ಖೈತಾನ್ ಅವರನ್ನು ವರಿಸಿದ ನಂತರ ಅಭಿನಯದಿಂದ ದೂರ ಉಳಿದರೂ, ಕಡಿಮೆ ಅವಧಿಯಲ್ಲಿಯೇ ಸುಮಾರು 150 ತೆಲುಗು, 30 ಕನ್ನಡ, ತಮಿಳು ಹಾಗೂ ಕೆಲವು ಹಿಂದೀ, ಮಲಯಾಳಂ ಚಿತ್ರಗಳಲ್ಲಿಯೂ ನಟಿಸಿದ್ದರು.
ಕೃಷ್ಣಕುಮಾರಿ ಅವರು ದಶಾವತಾರ, ಭಕ್ತ ಕನಕದಾಸ, ಚಂದ್ರಕುಮಾರ, ಆಶಾ ಸುಂದರಿ, ಶ್ರೀಶೈಲಾ ಮಹಾತ್ಮೆ, ಸ್ವರ್ಣಗೌರಿ, ಭಕ್ತ ಕಬೀರಾ, ಜಲದುರ್ಗಾ ಮುಂತಾದ ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದರು. ಪಾತಳ ಭೈರವಿ, ಬಂಗಾರು ಪಾಪ, ದೀಪಾವಳಿ, ಪ್ರಿಯುರಾಲು, ವೀರ ಕಂಕಣಂ, ಪಿಚ್ಚಿ ಪುಲ್ಲಯ್ಯ, ಭಾರ್ಯ ಬರ್ತಲು, ಸಂಪೂರ್ಣ ರಾಮಾಯಣಂ ಅವರ ಪ್ರಸಿದ್ಧ ತೆಲುಗು ಚಿತ್ರಗಳು. ಪುದುಯುಗಂ, ವಿಡುತಲೈ, ತುಳಿ ವಿಷಂ, ತಿರುಂಬಿ ಪಾರ್, ಅಳಗಿ ಮಂತಾದವು ತಮಿಳು ಚಿತ್ರಗಳು.
ಬೆಂಗಳೂರಿನಲ್ಲಿ ನೆಲೆಸಿದ್ದ ಕೃಷ್ಣಕುಮಾರಿ ಅವರು 2018ರ ಜನವರಿ 24ರಂದು ಈ ಲೋಕವನ್ನಗಲಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ
Please follow and like us: