ಕ್ರಿ. ಶ. 350ರ ಕಾಲದ ಹಲ್ಮಿಡಿ ಕನ್ನಡ ಶಾಸನವನ್ನು ಗುರುತಿಸಿದವರು ಮಹಾನ್ ಪುರಾತತ್ವ ಶಾಸ್ತ್ರಜ್ಞ ಎಂ. ಎಚ್. ಕೃಷ್ಣ. ಇಂದು ಈ ಮಹನೀಯರ ಸಂಸ್ಮರಣಾ ದಿನ.
ಎಂ. ಎಚ್. ಕೃಷ್ಣ ಎಂದು ವಿಶ್ವಖ್ಯಾತರಾದ ಮೈಸೂರು ಹಟ್ಟಿ ಅಯ್ಯಂಗಾರ್ ಕೃಷ್ಣ ಅವರು 1892ರ ಆಗಸ್ಟ್ 19ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ರಂಗ ಅಯ್ಯಂಗಾರ್. ತಾಯಿ ಲಕ್ಷ್ಮಮ್ಮ. ಸಂಸ್ಕೃತ ವಿದ್ವಾಂಸರಾಗಿದ್ದ ರಂಗ ಅಯ್ಯಂಗಾರ್ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಗುರುಗಳೂ ಮತ್ತು ಅರಮನೆಯ ಕೋಶಾಧಿಕಾರಿಗಳೂ ಆಗಿದ್ದರು.
ಕೃಷ್ಣ ಅವರು ಮೈಸೂರಿನ ಜಯಾಚಾರ್ಯ ಪಾಠಶಾಲೆ ಮತ್ತು ವೆಸ್ಲಿಯನ್ ಶಾಲೆಯಲ್ಲಿ ಓದಿದರು. ಇಲ್ಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಇವರ ಸಮಕಾಲೀನರಾಗಿದ್ದರು. ಮುಂದೆ 1911ರಲ್ಲಿ ಕೃಷ್ಣ ಅವರು ಮಹಾರಾಜಾ ಕಾಲೇಜಿನಲ್ಲಿ ಬಿ.ಎ. ಪದವಿ ಹಾಗೂ 1917ರಲ್ಲಿ ಮದ್ರಾಸು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಗಳಿಸಿದರು.
ಕೃಷ್ಣ ಅವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿದ್ದು 1928ರ ಜೂನ್ 10ರಂದು ಪುರಾತತ್ತ್ವ ಇಲಾಖೆಯ ಮುಖ್ಯಸ್ಥರಾದರು. ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದಾಗಲೇ ಇಂಗ್ಲೆಂಡಿಗೆ ಹೋಗಿ ನಾಣ್ಯಶಾಸ್ತ್ರವನ್ನು ಅಧ್ಯಯನ ಮಾಡಿ ಪ್ರಾಚೀನ ದಖನಿನ ನಾಣ್ಯಗಳ ಮೇಲೆ ಉತ್ತಮವಾದ ಪ್ರಬಂಧ ರಚಿಸಿದರು. ಅವರಿಗೆ ಡಾಕ್ಟೊರಲ್ ಪದವಿ ಸಂದಿತು.
ಕೃಷ್ಣ ಅವರು ಕ್ರಿ. ಶ. 350ರ ಕಾಲದ ಹಲ್ಮಿಡಿ ಕನ್ನಡ ಶಾಸನವನ್ನು ಗುರುತಿಸಿದ ಕೀರ್ತಿಗೆ ವಂದ್ಯರೆನಿಸಿದ್ದಾರೆ.
ಕೃಷ್ಣ ಅವರು ಪುರಾತತ್ವ ಕ್ಷೇತ್ರದಲ್ಲಿ ಅನೇಕ ಮಹತ್ತ್ವಪೂರ್ಣ ಸಂಶೋಧನೆಗಳನ್ನು ಮಾಡಿದರು. ಚಿತ್ರದುರ್ಗದ ಬಳಿಯ ಚಂದ್ರವಳ್ಳಿಯಲ್ಲಿ ಇವರು ನಡೆಸಿದ ಭೂಶೋಧನೆ ಪ್ರಸಿದ್ಧವಾದ್ದು. ಚಂದ್ರವಳ್ಳಿ ಸಾತವಾಹನರ ಕಾಲದ ಪಟ್ಟಣವಾಗಿತ್ತೆಂದೂ ಅದು ಆಗಸ್ಟಸ್ ಮತ್ತು ಟೈಬೀರಿಯಸ್ (ಕ್ರಿ.ಶ. 1ನೆಯ ಶತಮಾನ) ಕಾಲದ ರೋಮನ್ ಚಕ್ರಾಧಿಪತ್ಯದೊಡನೆ ವ್ಯಾಪಾರ ಸಂಬಂಧ ಹೊಂದಿತ್ತೆಂದೂ ಸ್ಥಿರಪಡಿಸಿದರು.
ಅಶೋಕನ ಕಾಲದ ಪಟ್ಟಣವಾದ ಇಸಿಲ (ಈಗಿನ ಬ್ರಹ್ಮಗಿರಿ) ಬಳಿ ಇವರು ನಡೆಸಿದ ಭೂಶೋಧನೆಯಿಂದ ಅಲ್ಲಿ ಅಶೋಕನ ಕಾಲಕ್ಕಿಂತ ಹಳೆಯದಾದ ನವಶಿಲಾಯುಗದ ಸಂಸ್ಕೃತಿಯಿದ್ದುದು ಪತ್ತೆಯಾಯಿತು (1939-40).
ಕೃಷ್ಣ ಅವರು ಪ್ರಕಟಿಸಿದ ಪುರಾತತ್ವ ಇಲಾಖೆ ವರದಿಗಳೂ (1929-1945) ಮೈಸೂರು ಮತ್ತು ಹಾಸನಗಳ ಶಾಸನ ಗ್ರಂಥಗಳೂ ವಿದ್ವತ್ಪೂರ್ಣವಾಗಿಯೂ ಅತ್ಯಂತ ಉಪಯುಕ್ತವೂ ಅದಂಥವು. ಕೃಷ್ಣ ಅವರು ಸುಮಾರು 2000 ಶಾಸನಗಳನ್ನು ಶೋಧಿಸಿದ ಮಹತ್ಕಾರ್ಯ ಸಾಧಿಸಿದ್ದು ಮೇಲ್ಕಂಡ ದಾಖಲೆಗಳಲ್ಲಿ ಕಾಣಬರುತ್ತದೆ. ಇವೆಲ್ಲವನ್ನೂ ಎಪಿಗ್ರಾಫಿಯಾ ಕರ್ನಾಟಿಕಾದಲ್ಲಿ ದಾಖಲಿಸಲಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
Please follow and like us: