ಮಹಾಶ್ವೇತಾ ದೇವಿ ಬಂಗಾಳಿ ಪ್ರಗತಿಶೀಲ ಸಾಹಿತ್ಯದ ಮಹತ್ವದ ಲೇಖಕಿ. ಸಾಹಿತಿಯಾಗಿಯಷ್ಟೇ ಅಲ್ಲದೆ, ಸಾಮಾಜಿಕ ಕಾರ್ಯಕರ್ತೆಯಾಗಿಯೂ ಅವರು ಪ್ರಖ್ಯಾತರಾಗಿದ್ದವರು. ಸಮಾಜದ ಕೆಳವರ್ಗದ ಶೋಷಿತರ ಹೋರಾಟದ ಬದುಕು ಮತ್ತು ವರ್ಗ ಸಂಘರ್ಷ ಅವರ ಸಾಹಿತ್ಯ ಕೃತಿಗಳ ಮೂಲವಸ್ತು.ಮಹಾಶ್ವೇತಾ ದೇವಿ 1926ರ ಜನವರಿ 14ರಂದು ಢಾಕಾದಲ್ಲಿ ಜನಿಸಿದರು. ಅವರದು ಕಲೆ, ಸಾಹಿತ್ಯಗಳಿಗೆ ಹೆಸರಾದ ಸುವಿಖ್ಯಾತ ಮನೆತನ. ತಂದೆ ಮನೀಶ್ ಘೋಷ್ ಬಂಗಾಳಿ ಸಾಹಿತ್ಯದಲ್ಲಿ ನವ್ಯಮಾರ್ಗದ ಅನ್ವೇಷಣೆಯಲ್ಲಿ ತೊಡಗಿದ್ದ ಕಲ್ಲೋಲ’ ಚಳವಳಿಯ ಸುಪ್ರಸಿದ್ಧ ಸಾಹಿತಿ. ಅಂತಾರಾಷ್ಟ್ರೀಯ ಖ್ಯಾತಿಯ ಚಲನಚಿತ್ರ ನಿರ್ದೇಶಕ ಋತ್ವಿಕ್ ಘಟಕ್ ಅವರ ಚಿಕ್ಕಪ್ಪ. ಶಾಂತಿ ನಿಕೇತನದಲ್ಲಿ ಉನ್ನತ ವ್ಯಾಸಂಗ ನಡೆಸುತ್ತಿದ್ದಾಗ ವಾಮಪಂಥೀಯ ನಾಟಕಕಾರ ಬಿಜೋನ್ ಭಟ್ಟಾಚಾರ್ಯರಲ್ಲಿ ಪ್ರೀತಿ ಅಂಕುರಿಸಿ ಅವರ ಬಾಳ ಸಂಗಾತಿಯಾದರು. ಬಿಜೋನ್ ಭಟ್ಟಾಚಾರ್ಯ ಭಾರತೀಯ ರಂಗಭೂಮಿಗೆ ಹೊಸ ದಿಕ್ಕುದಿಶೆ ತೋರಿದ ಇಂಡಿಯನ್ ಪೀಪಲ್ಸ್ ಥಿಯೇಟರ್ ಅಸೋಸಿಯೇಶನ್ನಿನ ಸಂಸ್ಥಾಪಕರಲ್ಲೊಬ್ಬರು.’ಝಾನ್ಸಿ ರಾಣಿ’ ಮಹಾಶ್ವೇತಾ ದೇವಿಯವರ ಪ್ರಕಟಿತ ಪ್ರಥಮ ಕೃತಿ. ರಾಣಿಯ ಜೀವನ ಚರಿತ್ರೆ ಬರೆಯುವ ಸಲುವಾಗಿ ಸಂಶೋಧನೆ ನಡೆಸಲು ಅವರು ಇಪ್ಪತ್ತೆಂಟನೆಯ ವಯಸ್ಸಿನಲ್ಲೇ ಒಂಟಿಯಾಗಿ ರಾಜಾಸ್ಥಾನದ ಉದ್ದಗಲ ಪರ್ಯಟನ ನಡೆಸಿದರು. ವೃತ್ತಿಯಿಂದ ಇಂಗ್ಲಿಷ್ ಸಾಹಿತ್ಯದ ಪ್ರೊಫೆಸರಾಗಿದ್ದ ಮಹಾಶ್ವೇತಾ ದೇವಿಯವರಿಗೆ ಪರ್ಯಟನ ಒಂದು ಹವ್ಯಾಸವಾಗಿತ್ತು. ಈ ಪರ್ಯಟನ ಅವರಿಗೆ ಬದುಕಿನ ವಿವಿಧ ವಿನ್ಯಾಸಗಳ ದರ್ಶನಮಾಡಿಸಿತು. ಆದಿವಾಸಿ ಜನರಿಗೆ ಹತ್ತಿರವಾಗಿಸಿತು. ಊರೂರು ಸುತ್ತುವಾಗ ಬಂಗಾಳದ ಪಲಮಾವು ಜೀತದಾಳುಗಳ ಶೋಷಿತ ಬದುಕನ್ನು ಸಮೀಪದಿಂದ ಕಂಡರು. ಮೇದಿನಿಪುರದ ಲೋ, ಪುರ್ಲಿಯಾದ ಸೇಡಿಯಾ ಶೋಭೋರ್, ಬೀರ್ಭೂಮ್ನ ಧಕಾರೋ ಮೊದಲಾದ ಶೋಷಿತ ಬುಡಕಟ್ಟು ಜನಾಂಗಗಳ ಶೋಚನೀಯ ಬದುಕನ್ನು ಕಂಡು ಮಮ್ಮಲ ಮರುಗಿದರು. ಬುಡಕಟ್ಟು ಜನರ ಬದುಕೇ ಅವರ ಸಾಹಿತ್ಯದ ವಸ್ತುವಾಯಿತು, ಸಾಮಾಜಿಕ ಕಾರ್ಯಕರ್ತೆಯಾಗಿ ದುಡಿಯಲು ಸ್ಫೂರ್ತಿ ನೀಡಿತು. ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಕಾದಂಬರಿ ‘ಅರಣ್ ಅಧಿಕಾರ್’, ಹಜಾರ್ ಚೌರಾಶಿ ಮಾ’ (1084ರ ತಾಯಿ), ‘ಸ್ತನ್ಯದಾಯಿನಿ’, ‘ಅಗ್ನಿಗರ್ಭ’, ‘ರುಡಾಲಿ’, ‘ದೌಪದಿ’, ‘ಶಿಶು’ ಮಹಾಶ್ವೇತಾ ದೇವಿಯವರ ಪ್ರಮುಖ ಕೃತಿಗಳು. ‘ಹಜಾರ್ ಚೌರಾಶಿ ಮಾ’ ಮತ್ತು ‘ಅಗ್ನಿ ಗರ್ಭ’ ನಕ್ಸಲೀಯ ಆಂದೋಲನವನ್ನು ಕೇಂದ್ರವಾಗುಳ್ಳ ಕಾದಂಬರಿಗಳು.ಹತ್ತೊಂಬತ್ತನೆ ಶತಮಾನದಲ್ಲಿ ಜಾರ್ಖಂಡ್ನ ಅರಣ್ಯವನ್ನು ಒತ್ತುವರಿ ಮಾಡಿಕೊಂಡ ಬ್ರಿಟಿಷರ ವಿರುದ್ಧ ಆದಿವಾಸಿ ನಾಯಕ ಬಿರ್ಸಾಮುಂಡ ನಡೆಸಿದ ಹೋರಾಟದ ಚಿತ್ರಣವೇ ‘ಅರಣ್ ಅಧಿಕಾರ್’. ಪಶ್ಚಿಮ ಬಂಗಾಳದಲ್ಲಿ ನಕ್ಸಲೀಯ ಆಂದೋಲನ ಪರಾಕಾಷ್ಠೆಯಲ್ಲಿದ್ದಾಗ (1970ರ ದಶಕ) ರಚಿಸಲಾದ ‘ಹಜಾರ್ ಚೌಕಾಶಿ ಮಾ’ ಮಗನನ್ನು ಬಲಿ ತೆಗೆದುಕೊಂಡ ಕ್ರಾಂತಿಕಾರಿ ಚಳವಳಿಯನ್ನು ಅರ್ಥಮಾಡಿಕೊಳ್ಳಲೆತ್ನಿಸುವ ತಾಯಿಯೊಬ್ಬಳ ಹೋರಾಟದ ಹೃದಯಸ್ಪರ್ಶಿ ಕಥಾನಕ.
https://play.google.com/store/apps/details?id=com.speed.newskannada