ತೀರ್ಥಹಳ್ಳಿ:ಮನೆ ಮೇಲೆ ಅಥವಾ ಅವರ ಮನೆ ಬಳಿಯಿರುವ ಕಚೇರಿ ಮೇಲೆ ಯಾವುದೇ ತನಿಖಾ ಸಂಸ್ಥೆ ದಾಳಿ ನಡೆದಿಲ್ಲ. ಇದು ಬಿಜೆಪಿಯ ಕಪೋಲ ಕಲ್ಪಿತ ಸುದ್ದಿ ಎಂಬುದಾಗಿ ಕಾಂಗ್ರೆಸ್ ನ ಹಿರಿಯ ಮುಖಂಡ, ಮಾಜಿ ಸಚಿವ ಕಿಮ್ಮನೆ ರತ್ನಾಕರ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೊಪ್ಪುಗುಡ್ಡೆಯಲ್ಲಿರುವ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿರುವ ರಾಷ್ಟ್ರೀಯ ತನಿಖಾ ತಂಡ ( NIA) ಹಾಗೂ ಜಾರಿ ನಿರ್ದೇಶನಾಲಯದ ( ED) ಅಧಿಕಾರಿಗಳು ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಮಂತ್ರಿ ಕಿಮ್ಮನೆ ರತ್ನಾಕರ್ ಅವರನ್ನು ಕರೆಸಿ ಕಚೇರಿ ಬಾಡಿಗೆ ಕರಾರು ಪತ್ರದ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ. ಆದರೆ ಕಿಮ್ಮನೆ ರತ್ನಾಕರ್ ಅವರು ಮಾತ್ರ ತನ್ನ ಮನೆ ಮೇಲೆ ಅಥವಾ ಅವರ ಮನೆ ಬಳಿಯಿರುವ ಕಚೇರಿ ಮೇಲೆ ಯಾವುದೇ ದಾಳಿ ನಡೆದಿಲ್ಲ. ಇದು ಬಿಜೆಪಿಯ ಕಪೋಲಕಲ್ಪಿತ ಸುದ್ದಿ ಎಂದು ಆರೋಪಿಸಿದರು.ಈ ಬಗ್ಗೆ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ದಿನ ಬೆಳಗ್ಗೆ 9:00 ಗಂಟೆಗೆ ನಾನು ನನ್ನ ಮನೆಯ ಪಕ್ಕದಲ್ಲಿರುವ ಕಚೇರಿಯಲ್ಲಿ ಕುಳಿತಿದ್ದೆ .ಆಗ ಸೊಪ್ಪುಗುಡ್ಡೆಯಲ್ಲಿರುವ ಪಕ್ಷದ ಕಚೇರಿಯಿಂದ ನನಗೆ ದೂರವಾಣಿ ಕರೆ ಬಂತು. ಪಕ್ಷದ ಕಚೇರಿಗೆ ಸ್ವಲ್ಪ ಬರಬೇಕು ರಾಷ್ಟ್ರೀಯ ತನಿಖಾ ತಂಡದ ಅಧಿಕಾರಿಗಳು ಕಾಯುತ್ತಿದ್ದಾರೆ ಅನ್ನುವ ಮಾಹಿತಿ ಬಂತು. ನಾನು ಹೋದೆ ಆಧಿಕಾರಿಗಳು ನನ್ನನ್ನ ಕೇಳಿದ್ದು ಇಷ್ಟೆ, “ಪಕ್ಷದ ಕಚೇರಿ ಯಾವಾಗಿಂದ ಬಾಡಿಗೆಗೆ ಪಡೆದುಕೊಂಡಿದ್ದೀರಿ.? ಯಾರಿಂದ ಪಡೆದುಕೊಂಡಿದ್ದೀರಿ..?” ಎಂದರು.
ಕಟ್ಟಡ ಮಾಲೀಕನಿಗೆ ಪಕ್ಷದೊಂದಿಗೆ ಸಂಬಂಧವಿಲ್ಲ
ನಾನು ಅವರಿಗೆ ಉತ್ತರಿಸಿ, 10 ಲಕ್ಷ ಹಣವನ್ನು ಠೇವಣಿ ನೀಡಿ 2015ರಲ್ಲಿ ಈ ಕಚೇರಿಯನ್ನು ಬಾಡಿಗೆ ಪಡೆದುಕೊಂಡಿದ್ದೆ. ಇದರ ಮಾಲೀಕರು ಆಸಿಂ ಅಬ್ದುಲ್ ಮಜೀಂ ಎಂಟು ವರ್ಷದ ಕರಾರಿಗೆ ಸಹಿ ಹಾಕಿ ಕೊಟ್ಟಿದ್ದರು. ಪ್ರತಿ ತಿಂಗಳು ಸಾವಿರ ರೂಪಾಯಿ ಬಾಡಿಗೆ ನೀಡುತ್ತಿದ್ದಿವಿ. ಈ ತರಹ ಪ್ರತಿ ತಿಂಗಳು 1000 ರೂಪಾಯಿಯನ್ನು ಡಿಸೆಂಬರ್ ತಿಂಗಳವರೆಗೂ ಕಟ್ಟಿಕೊಂಡು ಬಂದಿದ್ದೇವೆ. ಯಾವಾಗ ಬಾಡಿಗೆ ಕರಾರು ಮುಕ್ತಾಯವಾಗುತ್ತೋ ಅಥವಾ ಬೇಡ ಅನಿಸುತ್ತೋ ಆಗ ನಾವು ನೀಡಿದ್ದ ಠೇವಣಿ ಮೊತ್ತ 10 ಲಕ್ಷ ರೂಪಾಯಿಂದ ವಾಪಸ್ ನೀಡಿ ಬಿಲ್ಡಿಂಗ್ ಪಡೆದುಕೊಳ್ಳಬಹುದು ಎಂದು ಕರಾರಿನಲ್ಲಿತ್ತು. ಆಸಿಂ ಹಾಗೂ ನಮಗೆ ಇರುವ ಸಂಬಂಧ ಬಾಡಿಗೆ ಮತ್ತು ಬಾಡಿಗೆದಾರನ ಸಂಬಂಧವೇ ಹೊರತು ಬೇರೇನು ಇಲ್ಲ ಪಕ್ಷಕ್ಕೂ ಅದಕ್ಕೂ ಆ ಸಂಬಂಧವು ಇಲ್ಲ..!ಮಾಧ್ಯಮಗಳಲ್ಲಿ ಪಕ್ಷದ ವಿಚಾರ, ನನ್ನ ವಿಚಾರ ಎಲ್ಲ ಮಾತನಾಡುತ್ತಿದ್ದಾರೆ. ಇದು ಬಿಜೆಪಿ ಕಪೋಲಕಲ್ಪಿತ. ಮನೆ ಮಾಲೀಕ ಅಥವಾ ಗೃಹ ಸಚಿವ ಆರಗ ಜ್ಞಾನೇಂದ್ರ ಗೆ ಏನಾದರೂ ಸಂಬಂಧ ಇದೆಯಾ ಗೊತ್ತಿಲ್ಲ. ಉಳಿದ ಮಾಹಿತಿ ಗೃಹ ಸಚಿವರ ಬಳಿಯೇ ಇದೆ. ತೀರ್ಥಹಳ್ಳಿಯಲ್ಲಿ ಕೋಮು ಗಲಭೆ ಸೃಷ್ಟಿಕರ್ತ ಅವರೇ ಆಗಿರೋದ್ರಿಂದ ಕೋಮುಗಲಭೆಯಲ್ಲಿ ಹಿಂದೆ ಅವರು ಆರೋಪಿಯೂ ಆಗಿದ್ದರಿಂದ ಈಗ ಮತ್ತೊಂದು ಏನಾದರೂ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಮಗೂ ಆಸಿಂಗೂ ಇರುವ ಸಂಬಂಧ ಬಾಡಿಗೆದಾರ ಮತ್ತು ಮಾಲೀಕನಿಗೂ ಇರುವ ಸಂಬಂಧ ಅಷ್ಟೇ. ಬಿಟ್ಟರೆ ಬೇರೇನು ಇಲ್ಲ ಎಂದರು.
https://play.google.com/store/apps/details?id=com.speed.newskannada