ನನಗೆ ಅವರ ಅನಾರೋಗ್ಯದ ಸುದ್ದಿ ಗೊತ್ತಾದಾಗ ಹೋಗಿ ನೋಡುವುದು ಕ್ಲೀಷೆಯ ಕಾಯಕವೆನಿಸಿದ್ದಕ್ಕಿಂತಲೂ ಹೆಚ್ಚಾಗಿ- ಅವರಿಗೆ ಕಾಯಿಲೆಯಾಗಿ ಮಲಗಿರುವಾಗ ಅವರನ್ನು ಮಾತನಾಡಿಸುವುದು- ಇವೆಲ್ಲ ಯಾವುದೋ ಅಸಹಜ ಯೋಚನೆಯೆನಿಸಿತು. ಅವರಿಗೆ ಕಾಯಿಲೆಯೇ ಆಗಿಲ್ಲವೆಂದು ನನ್ನ ಮನಸ್ಸನ್ನು ನಾನೇ ನಂಬಿಸಲು ಪ್ರಯತ್ನಿಸುತ್ತಿದ್ದೆ. ಸ್ನೇಹಿತರ ಬಳಿ ಮಾತಾಡುವಾಗ ವಿಷಯವನ್ನು ತೇಲಿಸಿಬಿಡುತ್ತಿದ್ದೆ. ಹೀಗೇ ನಡೆದು ಎಲ್ಲ ಸರಿ ಹೋಗಿ ಪಾರಾಗಿಬಿಡುತ್ತಾರೆಂದು ನಂಬಿದ್ದೆ. ಆದರೆ ಎಂ.ಡಿ.ಎನ್ ಫೆಬ್ರವರಿ 3, 2004ರ ಮುಂಜಾನೆ ಪ್ರೀತಿಯ ಮಗಳು ಚುಕ್ಕಿಯ ಹೆಸರು ಹೇಳುತ್ತಾ ಶಾಶ್ವತವಾಗಿ ಮಲಗಿಬಿಟ್ಟರಂತೆ.ಇದು ನನಗೆ ಅತ್ಯಂತ ತೀವ್ರವಾದ ಸ್ವಂತ ಸಾವಿನಂತೆ ತೋರತೊಡಗಿತು. ನನ್ನ ವ್ಯಕ್ತಿತ್ವದ ಒಂದು ಭಾಗವೇ ಕಳಚಿಬಿದ್ದಂತಾಯಿತು. ಅನೇಕರಿಗೆ ಹೀಗೆ ಆಗಿರುವುದು ನನಗೆ ಗೊತ್ತು. ಅದಕ್ಕೆ ಮುಖ್ಯ ಕಾರಣ, ತಾರುಣ್ಯದ ದಿನಗಳಲ್ಲಿ ನಾನು ಮತ್ತು ನನ್ನ ಓರಗೆಯ ಗೆಳೆಯರು ಅವರ ಪ್ರಭಾವಕ್ಕೆ ಒಳಗಾದದ್ದು.ಎಪ್ಪತ್ತರ ದಶಕವೇ ಹಾಗಿತ್ತು. ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಸ್ವಾತಂತ್ರ್ಯಾನಂತರದ ಭ್ರಮನಿರಸನಗಳಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಬೇಕಾದಂಥ ಕಾಲವಾಗಿತ್ತು. ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಹಲವು ವಿಚಾರಶೀಲರು ಮಾತು, ಬರವಣಿಗೆಗಳಲ್ಲಿ ತೊಡಗಿದ್ದರು. ಅದೇ ಹೊತ್ತಿಗೆ ಪೊಫೆಸರ್ ಎಂ.ಡಿ.ಎನ್ ಜರ್ಮನಿಯಲ್ಲಿ ಕಾನೂನು ವಿಷಯದಲ್ಲಿ ಉನ್ನತ ಶಿಕ್ಷಣ ಪಡೆದು ಬಂದಿದ್ದರು. ಮೈಸೂರಿನಲ್ಲಿ ‘ಸಮಾಜವಾದಿ ಯುವಜನ ಸಭಾ’ವನ್ನು ಹುಟ್ಟುಹಾಕಿ ಅದನ್ನು ಬೆಂಗಳೂರಿಗೆ ಹಬ್ಬಿಸಲು 1970ರಿಂದಲೇ ಪ್ರಯತ್ನಶೀಲರಾಗಿದ್ದರು. ಬೆಂಗಳೂರಿನಲ್ಲಿ ಅವರ ಪಟ್ಟಶಿಷ್ಯರಾದವರು ಡಾ.ಲಕ್ಷ್ಮೀಪತಿಬಾಬು ಮತ್ತು ಡಾ.ರಾ.ನ.ವೆಂಕಟಸ್ವಾಮಿ. ಇವರಿಬ್ಬರೂ ತಮ್ಮ ವೈದ್ಯಕೀಯ ಶಿಕ್ಷಣವನ್ನು ನಿರ್ಲಕ್ಷಿಸಿ ಸಮಾಜವಾದಿ ಚಳವಳಿಗೆ ತೊಡಗಿಸಿಕೊಳ್ಳುವಷ್ಟರ ಮಟ್ಟಿಗೆ ಎಂ.ಡಿ.ಎನ್ ಪ್ರಭಾವಶಾಲಿಯಾಗಿದ್ದರು. ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಆಗ ತಾನೇ ಓದು ಪ್ರಾರಂಭಿಸಿದ್ದ ನಮ್ಮ ಗುಂಪು ಸಹಜವಾಗಿಯೇ ಹಲವಾರು ಬಗೆಯ ಚಳುವಳಿಗಳಿಗೆ ಆಕರ್ಷಿತವಾಯಿತು. ನಮ್ಮ ಗುಂಪಿನಲ್ಲಿ ದಲಿತ ಕವಿ ಸಿದ್ಧಲಿಂಗಯ್ಯ, ಡಿ.ಆರ್. ನಾಗರಾಜ್, ಕಥೆಗಾರ ಕರಿಗೌಡ ಬೀಚನಹಳ್ಳಿ, ಕಲ್ಲೂರು ಮೇಘರಾಜ, ಗಂಗಣ್ಣ ಮುಂತಾದವರಿದ್ದೆವು. ನಮ್ಮಲ್ಲೂ ಬಣಗಳಿದ್ದವು! ಮಾರ್ಕ್ಸ್ವಾದಿಗಳದ್ದು, ಲೋಹಿಯಾವಾದಿಗಳದ್ದು, ಗಾಂಧಿವಾದಿಗಳದ್ದು… ಹೀಗೇ.ಎಪ್ಪತ್ತರ ದಶಕದಲ್ಲಿ ನಡೆದ ಚಳುವಳಿಗಳಿಗೆ ಲೆಕ್ಕವಿಲ್ಲ. ಸಮಾಜವಾದಿ ಯುವಜನ ಸಭಾದ ಪ್ರಾರಂಭ, ವಿದ್ಯಾರ್ಥಿ, ಕಾರ್ಮಿಕರ ಚಳುವಳಿಗಳು, ಜಾತಿವಿನಾಶ ಸಮ್ಮೇಳನ, ಬರಹಗಾರರ ಕಲಾವಿದರ ಒಕ್ಕೂಟ, ಪೆರಿಯಾರ್, ದಲಿತ-ಬಂಡಾಯ ಚಳುವಳಿ, ಕೋವೂರ್ ಆಗಮನ, ತುರ್ತು ಪರಿಸ್ಥಿತಿ, ಕೇಂದ್ರದಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ, ಬರೋಡ ಡೈನಮೈಟ್ ಪ್ರಕರಣ, ಆನಂತರ ಪ್ರಬಲವಾಗಿ ಬೆಳೆದ ರೈತ ಚಳವಳಿ ಇತ್ಯಾದಿ ನೂರಾರು. ಇವೆಲ್ಲ ಚಳುವಳಿಗಳ ಜೊತೆಗೆ ಜೆಪಿಯವರ ಸಂಪೂರ್ಣಕ್ರಾಂತಿ ದೇಶಾದ್ಯಂತ ಹಬ್ಬಿತು. ಕರ್ನಾಟಕದಲ್ಲಿ ನಾಟಕ ಕ್ಷೇತ್ರದ ‘ಸಮುದಾಯ’, ಹಾವನೂರು ಆಯೋಗ, ಭಾಷಾ ಚಳುವಳಿ ಇವೆಲ್ಲವುಗಳ ಪರಿಣಾಮವಾಗಿ ಪ್ರಥಮ ಕಾಂಗ್ರೆಸ್ಸೇತರ ಸರ್ಕಾರ ರಚನೆ- ಹೀಗೆ ಎಪ್ಪತ್ತರ ದಶಕ ಸಂಕ್ರಮಣ ಕಾಲವಾಗಿತ್ತು. ಇವೆಲ್ಲ ಚಳವಳಿಗಳ ಹಿಂದೆ ಒಂದಲ್ಲ ಒಂದು ರೀತಿಯಲ್ಲಿ ಪ್ರಚೋದಕ ಶಕ್ತಿಯಾಗಿದ್ದವರು ಪೊಫೆಸರ್ ನಂಜುಂಡಸ್ವಾಮಿ. ತಮ್ಮ ಪ್ರಖರ ವಿಚಾರ ಲಹರಿ, ಖಚಿತ ಅಂಕಿ ಅಂಶಗಳ ಭಾಷಣ, ಅದ್ಭುತ ಕನ್ನಡ ಭಾಷಾಬಳಕೆ, ಭಾರತದ ಜಾತಿ ವ್ಯವಸ್ಥೆ ಮತ್ತು ನ್ಯಾಯಾಂಗದ ಬಗೆಗೆ ಗಳಿಸಿದ್ದ ಪಾಂಡಿತ್ಯ, ಆಧುನಿಕ ಜೀವನ ಶೈಲಿಯ ಜೊತೆಗೆ ಲೋಹಿಯಾ ಹಾಗೂ ಗಾಂಧೀವಾದದ ಆಳವಡಿಕೆ ಮುಂತಾದುವುಗಳಿಂದ ಯುವಕ ಯುವತಿಯರನ್ನು ಸಮಾಜವಾದಿ ಆಂದೋಲನಕ್ಕೆ ಸೆಳೆಯುತ್ತಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada