ರಂಗಕರ್ಮಿ ಯೋಗೇಶ್ ಮಾಸ್ಟರ್ ಮೊದಲಬಾರಿಗೆ 24 ಪಾತ್ರಗಳಲ್ಲಿ ಅಭಿನಯಿಸಿರುವ ಹಾಗೂ ಸಂತೋಷ್ ಕೊಡಂಕೇರಿ ನಿರ್ದೇಶನದ “ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು.
ನಿರ್ಮಾಪಕ & ನಿರ್ದೇಶಕ ರೋಹಿತ್ ಮಂಜ್ರೇಕರ್, ಸಾಮಾಜಿಕ ಹೋರಾಟಗಾರ ಚಿ.ನಾ.ರಾಮು ಮುಂತಾದ ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಕಳೆದ ಲಾಕ್ ಡೌನ್ ಸಮಯದಲ್ಲಿ ಈ ಚಿತ್ರ ನಿರ್ಮಾಣ ಮಾಡಿದ್ದೇವೆ. ರಂಗಕರ್ಮಿ ಯೋಗೇಶ್ ಮಾಸ್ಟರ್ ಈ ಚಿತ್ರದ 24 ಪಾತ್ರದಲ್ಲಿ ಅಭಿನಯಿಸಿದ್ದಾರೆ. ನನಗೆ ತಿಳಿದಿರುವ ಹಾಗೆ ಇಲ್ಲಿಯವರೆಗೂ ಯಾರು ಇಷ್ಟು ಪಾತ್ರಗಳಲ್ಲಿ ಅಭಿನಯ ಮಾಡಿಲ್ಲ. ಬೇರೆ ಭಾಷೆಯಲ್ಲಿ ಮಾಡಿದ್ದರೂ, ಅದರಲ್ಲಿ ಉಳಿದ ಕಲಾವಿದರು ಅಭಿನಯವಿರುತ್ತಿತ್ತು. ಆದರೆ ಈ ಚಿತ್ರದಲ್ಲಿ ಇವರೊಬ್ಬರೆ ಎಲ್ಲಾ ಪಾತ್ರ ನಿರ್ವಹಣೆ ಮಾಡಿದ್ದಾರೆ.ಇದೊಂದು ಪ್ರಯೋಗಾತ್ಮಕ ಚಿತ್ರ. ಅನೇಕ ಚಲನಚಿತ್ರೋತ್ಸವಗಳಲ್ಲಿ ನಮ್ಮ ಚಿತ್ರ ಪ್ರದರ್ಶನವಾಗಿದೆ. ಆದರೆ ಸ್ಥಳೀಯ ಚಲನಚಿತ್ರೋತ್ಸವದಲ್ಲಿ ನಮ್ಮ ಚಿತ್ರ ಆಯ್ಕೆಯಾಗಿಲ್ಲ ಎಂಬ ಕೊರಗಿದೆ. ಈಗ ಟ್ರೇಲರ್ ರಿಲೀಸ್ ಆಗಿದೆ. ಸದ್ಯದಲ್ಲೇ ಚಿತ್ರ ಕೂಡ ತೆರೆಗೆ ಬರಲಿದೆ ಎಂದರು ನಿರ್ದೇಶಕ ಹಾಗೂ ನಿರ್ಮಾಪಕ ಸಂತೋಷ್ ಕೊಡಂಕೇರಿ.
ಇದು ರವೀಂದ್ರನಾಥ್ ಠಾಕೂರ್ ಅವರ ಕಾದಂಬರಿ ಆಧಾರಿತ ಚಿತ್ರ. ಹಿಂದೆ ನಮ್ಮ ಅಜ್ಜಿಯರು ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ ಅಂತ ಕಥೆ ಶುರು ಮಾಡುತ್ತಿದ್ದರು. ನಮ್ಮ ಚಿತ್ರದಲ್ಲೂ ಹಾಗೆ ಅಜ್ಜಿ ಹೇಳುವ ಕಥೆಯಿಂದ ಈ ಚಿತ್ರ ಆರಂಭವಾಗುತ್ತದೆ. ಕಥೆ ಕೇಳುವ ಮೊಮ್ಮಗ, ತಾನೇ ಎಲ್ಲಾ ಪಾತ್ರಗಳಲ್ಲಿ ಜೀವಿಸುತ್ತಾ ಹೋಗುತ್ತಾನೆ. ಎಲ್ಲಾ ಪಾತ್ರಗಳಲ್ಲೂ ನಾನೇ ಕಾಣಿಸಿಕೊಂಡಿದ್ದೀನಿ. ಹಿಂದೆ ನಾಟಕ ಮಾಡಿದ್ದೆ. ಈಗ ಈ ಸಿನಿಮಾದಲ್ಲಿ ಅಭಿನಯಿಸಿದ್ದೇನೆ. ನಿಮ್ಮ ಬೆಂಬಲವಿರಲಿ ಎಂದರು ಯೋಗೇಶ್ ಮಾಸ್ಟರ್.
ಅತಿಥಿಗಳಾಗಿ ಆಗಮಿಸಿದ್ದ ರೋಹಿತ್ ಮಂಜ್ರೇಕರ್, ಚಿ.ನಾ.ರಾಮು, ಪುಟ್ಟರಾಜು ಮುಂತಾದವರು ತಮ್ಮ ಪ್ರೋತ್ಸಾದ ನುಡಿಗಳನ್ನಾಡಿದರು. ಅನೇಕರು ಈ ಸಂದರ್ಭದಲ್ಲಿ ಹಾಜರಿದ್ದರು.
ದೃಷ್ಟಿ ಮಿಡಿಯಾ ಮತ್ತು ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂತೋಷ್ ಕೊಡಂಕೇರಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ನಿರ್ದೇಶನ ಸಹ ಇವರದೆ. ಗೀತರಚನೆ, ಸಂಭಾಷಣೆಯನ್ನು ನಟ ಯೋಗೇಶ್ ಮಾಸ್ಟರ್ ಬರೆದಿದ್ದಾರೆ. ಹಿನ್ನೆಲೆ ಸಂಗೀತ ನೀಡಿರುವ ಚಿಂತನ್ ವಿಕಾಸ್, ಬಿ.ಆರ್ ಛಾಯಾ ಅವರೊಟ್ಟಿಗೆ ಹಾಡನ್ನು ಹಾಡಿದ್ದಾರೆ. ಜೀವನ್ ಗೌಡ ಛಾಯಾಗ್ರಹಣ ಹಾಗೂ ರಘು ಎಸ್ ಸಂಕಲನಕಾರರಾಗಿ ಹಾಗೂ ಆಡಿಯೋ ರೆಕಾರ್ಡಿಸ್ಟಾಗಿ ಕಾರ್ಯ ನಿರ್ವಹಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada