ಬೆಂಗಳೂರು: ತಮಗೆ ಸಿಕ್ಕಿರುವ ಪದ್ಮವಿಭೂಷಣ ಪ್ರಶಸ್ತಿಯನ್ನು 7 ಕೋಟಿ ಕನ್ನಡಿಗರಿಗೆ ಸಮರ್ಪಣೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹೇಳಿದ್ದಾರೆ.
ಭಾರತ ಸರ್ಕಾರ ನಿನ್ನೆ ಎಸ್.ಎಂ ಕೃಷ್ಣ ಅವರಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ಘೋಷಣೆ ಮಾಡಿದೆ.
ಈ ಕುರಿತು ಮಾತನಾಡಿದ ಅವರು, 6 ದಶಕಗಳ ಕಾಲ ನನಗೆ ಕನ್ನಡ ಜನ ಪೋಷಣೆ ಮಾಡಿದ್ದಾರೆ. 7 ಕೋಟಿ ಕನ್ನಡಿಗರಿಗೆ, ಭಾರತೀಯನಾಗಿ ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ. ಕಾಲಘಟ್ಟದಲ್ಲಿ ರಾಜಕಾರಣ ಬದಲಾಗ್ತಿರುತ್ತದೆ. ಅದರದ್ದೇ ಆದ ದಿಕ್ಕು-ದೆಶೆಯನ್ನ ಕಟ್ಟಿಕೊಂಡಿರುತ್ತದೆ. ಆಗಿನ ರಾಜಕಾರಣವೇ ಬೇರೆ, ಈಗಿನ ರಾಜಕಾರಣವೇ ಬೇರೆ. ಎಲ್ಲಾ ನಿರೀಕ್ಷೆಗಳನ್ನೂ ಬಿಟ್ಟು ಬಿಟ್ಟಿದ್ದೆ. ಇದು ಬಯಸದೇ ಬಂದ ಭಾಗ್ಯ ಎಂದರು.
ಪದ್ಮವಿಭೂಷಣ ಗೌರವ ನನಗೆ ಬಯಸದೆ ಬಂದ ಭಾಗ್ಯ. ಪ್ರಧಾನ ಮಂತ್ರಿಗಳು, ಗೃಹ ಸಚಿವರಿಗೆ ಅನಂತ ಧನ್ಯವಾದ ಸಮರ್ಪಣೆ ಮಾಡುವೆ. ಪ್ರಸಕ್ತ ವಿದ್ಯಮಾನಗಳ ಬಗ್ಗೆ ರಾಜಕಾರಣಿಗಳು ಚರ್ಚೆ ಮಾಡ್ತಾರೆ. ನಾನು ಸಕ್ರಿಯ ರಾಜಕಾರಣದಿಂದ ನಿವೃತ್ತನಾಗಿರುವ ಕಾರಣ ಅಂತಹ ಚರ್ಚೆಗಳಿಗೆ ಪ್ರಾಮುಖ್ಯತೆ ಕೊಡಲ್ಲ. ಪ್ರಸಕ್ತ ರಾಜಕಾರಣದ ಬಗ್ಗೆ ಆಡಳಿತ ನಡೆಸುವವರು ಗಮನ ಹರಿಸುತ್ತಾರೆ ಎಂದರು.
ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾದ ಪದ್ಮ ಪುರಸ್ಕಾರಗಳನ್ನು ಕೇಂದ್ರ ಸರ್ಕಾರ ನಿನ್ನೆ ಘೋಷಿಸಿದೆ. ಒಟ್ಟು 106 ಮಂದಿಗೆ ಪದ್ಮ ಪ್ರಶಸ್ತಿಗಳನ್ನು ಪ್ರದಾನ ಮಾಡಲು ರಾಷ್ಟ್ರಪತಿಗಳು ಅನುಮೋದಿಸಿದ್ದಾರೆ. ಇದರಲ್ಲಿ ಆರು ಪದ್ಮವಿಭೂಷಣ, ಒಂಭತ್ತು ಪದ್ಮಭೂಷಣ ಮತ್ತು 91ಪದ್ಮಶ್ರೀಗಳನ್ನು ಪ್ರಕಟಿಸಲಾಗಿದೆ.
https://play.google.com/store/apps/details?id=com.speed.newskannada