ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಗಲಿ 9 ತಿಂಗಳುಗಳಾಗಿವೆ. ಕಳೆದ ಎಂಟು-ಒಂಬತ್ತು ತಿಂಗಳಿನಿಂದ ಪುನೀತ್ ಅಭಿಮಾನಿಗಳು ಅವರ ನೆನಪಿನಲ್ಲಿ ಸಮಾಜಮುಖಿ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅಪ್ಪು ಹೆಸರನ್ನು ಅಜರಾಮರಾ ಮಾಡಲು ಮುಂದಾಗಿದ್ದಾರೆ.
ಕೆಲವು ದಿನಗಳ ಹಿಂದೆ ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಬೆಂಗಳೂರಿನ ಮಹಾಲಕ್ಷ್ಮಿ ಲೇ ಔಟ್ನ ವಾರ್ಡ್ಗೆ ಕರ್ನಾಟಕ ರತ್ನ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಹೆಸರನ್ನು ಇಡುವಂತೆ ಅಭಿಮಾನಿಗಳು ಮನವಿ ಮಾಡಿಕೊಂಡಿದ್ದರು.
ವಿಧಾನ ಸೌಧದಲ್ಲಿರುವ ನಗರಾಭಿವೃದ್ಧಿ ಇಲಾಖೆಗೆ ಜುಲೈ 05ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದ್ದರು. ಆ ಮನವಿಗೆ ಸಕರಾತ್ಮಕವಾಗಿ ಸ್ಪಂದಿಸಲಾಗಿದೆ.
ಮಹಾಲಕ್ಷ್ಮಿ ಲೇ ಔಟ್ನ 55ನೇ ವಾರ್ಡ್ಗೆ ಅಪ್ಪು ಹೆಸರು
ಬಿಬಿಎಂಪಿ ಕೆಲವು ದಿನಗಳಿಂದ ನೂತನ ವಾರ್ಡ್ಗಳನ್ನು ವಿಂಗಡಣೆ ಪ್ರಕ್ರಿಯೆಯನ್ನು ಆರಂಭಿಸಿತ್ತು. ಈ ಬೆನ್ನಲೇ ಬೆಂಗಳೂರು ನಗರದ ಮಹಾಲಕ್ಷ್ಮಿ ಲೇ ಔಟ್ನ 54 ಅಥವಾ 55ನೇ ವಾರ್ಡ್ಗೆ ಪುನೀತ್ ರಾಜ್ಕುಮಾರ್ ಹೆಸರಿಡಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದ್ದರು. ಆ ಮನವಿಗೆ ಬಿಬಿಎಂಪಿ ಸಕರಾತ್ಮಕವಾಗಿ ಸ್ಪಂದಿಸಿದೆ.
ಸುಮಾರು 243 ವಾರ್ಡ್ಗಳನ್ನೊಳಗೊಂಡ ಒಳಗೊಂಡ ನೂತನ ವಾರ್ಡ್ ಪಟ್ಟಿಗೆ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ನೂತನ ಹೆಸರುಗಳ ನಾಮರಣ ಕೂಡ ಮಾಡಿದೆ. ಮಹಾಲಕ್ಷ್ಮಿ ಲೇ ಔಟ್ನ ಕಾವೇರಿನಗರ ವಾರ್ಡ್ ನಂ 55ಕ್ಕೆ ಡಾ. ಪುನೀತ್ ರಾಜ್ಕುಮಾರ್ ವಾರ್ಡ್ ಎಂದು ನಾಮಕರಣ ಮಾಡಲು ಅನುಮತಿಯನ್ನು ನೀಡಿದೆ.
ಅಪ್ಪು ಅಭಿಮಾನಿಗಳು ಫುಲ್ ಖುಷ್
ವಾರ್ಡ್ ನಂ 55 ಕಾವೇರಿನಗರ ಈಗ ಡಾ.ಪುನೀತ್ ರಾಜ್ ಕುಮಾರ್ ವಾರ್ಡ್ ಆಗಿರುವ ಈ ಖುಷಿ ಅಭಿಮಾನಿಗಳಲ್ಲಿದೆ. ಈ ಸಂಬಂಧ ಇದೇ ಜುಲೈ 15 ರ ಮಧ್ಯಾಹ್ನ 3 ಗಂಟೆಗೆ ಅಭಿಮಾನಿಗಳಿಂದ ಡಾ.ಪುನೀತ್ ರಾಜ್ಕುಮಾರ್ ವಾರ್ಡ್ನಲ್ಲಿ ಮೆರವಣಿಗೆ ಹಾಗೂ ವಾರ್ಡ್ನ ಮುಖರಸ್ತೆಯಲ್ಲಿ ಸಿಹಿ ವಿತರಣೆ ಮಾಡಲು ಅಭಿಮಾನಿಗಳು ನಿರ್ಧರಿಸಿದ್ದಾರೆ.
ಮಹಾಲಕ್ಷ್ಮಿ ವಿಧಾನಸಭಾ ಕ್ಷೇತ್ರ ಅಪ್ಪು ಅಭಿಮಾನಿಗಳಿಗೆ ವಿಶೇಷ. ಅದಕ್ಕೆ ಕಾರಣವೂ ಇದೆ. ಈ ವಿಧಾನ ಸಭಾ ಕ್ಷೇತ್ರದಲ್ಲಿಯೇ ಡಾ. ರಾಜ್ಕುಮಾರ್, ಡಾ. ಪಾರ್ವತಮ್ಮ ರಾಜ್ಕುಮಾರ್ ಹಾಗೂ ಡಾ. ಪುನೀತ್ ರಾಜ್ಕುಮಾರ್ ಪುಣ್ಯಭೂಮಿ ಇದೆ. ಹೀಗಾಗಿ ಈ ಕ್ಷೇತ್ರಕ್ಕೆ ಹೊಂದಿಕೊಂಡಂತಹ ಯಾವುದಾದರೂ ಒಂದು ವಾರ್ಡ್ಗೆ ಡಾ. ಪುನೀತ್ ರಾಜ್ಕುಮಾರ್ ವಾರ್ಡ್ ಎಂದು ಹೆಸರಿಡಬೇಕು ಎಂದು ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಮನವಿಯಾಗಿತ್ತು.
ಅಪ್ಪು ಅಭಿಮಾನಿಗಳ ಮನವಿಯನ್ನು ಸ್ವೀಕರಿಸಿದ ಬಳಿಕ ಜುಲೈ 8ರವರೆಗೆ ಯಾರಾದರೂ ಆಕ್ಷೇಪಣೆ ಸಲ್ಲಿಸುವವರಿದ್ದರೆ ಅವರಿಗೆ ಅವಕಾಶ ನೀಡಲಾಗಿತ್ತು. ಯಾರೂ ಆಕ್ಷೇಪಣೆ ಸಲ್ಲಿಸದೆ ಇರುವುದರಿಂದ 55ನೇ ವಾರ್ಡ್ಗೆ ಅಪ್ಪು ಹೆಸರು ಇಡಲು ತೀರ್ಮಾನಿಸಲಾಗಿದೆ. ಇದು ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿಮಾನಿಗಳ ಹರ್ಷಕ್ಕೆ ಕಾರಣವಾಗಿದೆ. ಪುನೀತ್ ಅಗಲಿದ ಬಳಿಕವೂ ಅವರನ್ನು ಜೀವಂತವಾಗಿಡುವ ಪ್ರಯತ್ನಕ್ಕೆ ಮತ್ತಷ್ಟು ಬಲ ಸಿಕ್ಕಂತಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: