ಪಂಡಿತ ಡಾ. ಪುಟ್ಟರಾಜ ಗವಾಯಿಗಳು ಸಂಗೀತ ಲೋಕಕ್ಕೆ ಅಪಾರ ಕೊಡುಗೆ ನೀಡಿ, ಭಕ್ತರ ಪಾಲಿಗೆ ನಡೆದಾಡುವ ದೇವರು ಎಂದೆನಿಸಿದ್ದವರು.ಪುಟ್ಟರಾಜ ಗವಾಯಿಗಳು 1914ರ ಮಾರ್ಚ್ 3ರಂದು ಹಾವೇರಿ ಜಿಲ್ಲೆಯ ಹಾನಗಲ್ನ ದೇವರ ಹೊಸಕೋಟೆಯಲ್ಲಿ ಜನಿಸಿದರು. ತಂದೆ ರೇವಣ್ಣಯ್ಯ ಮತ್ತು ತಾಯಿ ಸಿದ್ಧಮ್ಮನವರು. ಇವರ ಮೂಲ ಹೆಸರು ಪುಟ್ಟಯ್ಯಜ್ಜ ಎಂಬುದಾಗಿತ್ತು. ಹುಟ್ಟಿದ ಆರು ತಿಂಗಳಲ್ಲಿಯೇ ಸಿಡುಬಿನ ತೊಂದರೆಯಿಂದಾಗಿ ಬಾಲಕ ಪುಟ್ಟಯ್ಯಜ್ಜ ಅಂಧನಾಗಿದ್ದ. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡ ಅಂಧ ಪುಟ್ಟಯ್ಯಜ್ಜನ ಜೀವನದ ಹೊಣೆಗಾರಿಕೆಯನ್ನು ಹೊತ್ತಿದ್ದ ಮಾವ ಚಂದ್ರಶೇಖರರು ಪುಟ್ಟಯ್ಯಜ್ಜನಿಗೆ ಸಂಗೀತ ಶಿಕ್ಷಣ ನೀಡುವಂತೆ ಪಂಡಿತ ಪಂಚಾಕ್ಷರಿ ಗವಾಯಿಗಳ ಆಶ್ರಮಕ್ಕೆ ಸೇರಿಸಿದ್ದರು.ತಮ್ಮ ಗುರುಗಳಲ್ಲಿ ಭಕ್ತಿ ಶ್ರದ್ಧೆಗಳ ತಪಸ್ಸಿನಿಂದ ಅಂಧ ಪುಟ್ಟಯ್ಯಜ್ಜ ಹಿಂದೂಸ್ತಾನಿ, ಕರ್ನಾಟಕ ಸಂಗೀತ, ಹಾರ್ಮೋನಿಯಂ ಕಲಿಯುವ ಮೂಲಕ ಪುಟ್ಟರಾಜರು ಸಂಗೀತ ಸಾಮ್ರಾಟ್ ಎಂಬ ಕೀರ್ತಿಗೆ ಭಾಜನರಾದರು. ಗಾಯನವಷ್ಟೇ ಅಲ್ಲದೆ ಸಂಗೀತ ಲೋಕದ ಬಹುತೇಕ ವಾದ್ಯಗಾರಿಕೆಯಲ್ಲೂ ಅವರಿಗೆ ಅಪ್ರತಿಮ ಸಾಧನೆಯಿತ್ತು. ಗುರುಗಳಂತೆಯೇ ಬ್ರಹ್ಮಚರ್ಯ, ನೇಮನಿಷ್ಠೆ, ಆಚಾರಗಳಿಂದೊಡಗೂಡಿದ ಜೀವನವನ್ನು ನಿರಂತರ ನಡೆಸಿಕೊಂಡು ಬಂದ ಪುಟ್ಟರಾಜ ಗವಾಯಿಗಳು 1944ರಲ್ಲಿ ವೀರೇಶ್ವರ ಆಶ್ರಮದ ಪೀಠಾಧಿಪತಿಗಳಾಗಿ ಹೊಣೆಗಾರಿಕೆ ವಹಿಸಿಕೊಂಡರು. ಐದು ದಶಕಗಳಿಗೂ ಹೆಚ್ಚು ಕಾಲ ಸಾವಿರಾರು ಅಂಧರಿಗೆ ಶಿಕ್ಷಣ ನೀಡುವ ಮೂಲಕ ಅಂಧರ ಪಾಲಿನ ದೇವರೇ ಆಗಿದ್ದರು. ತಾವು ಕಲಿತ ವಿದ್ಯೆಯನ್ನು ಶಿಷ್ಯರಿಗೆ ಕಲಿಸಲು ಗುರುಗಳಿಂದ ಸ್ಥಾಪಿತವಾದ ಶ್ರೀ ಕುಮಾರೇಶ್ವರ ಕೃಪಾಪೋಷಿತ ಧರ್ಮಾರ್ಥ ಸಂಚಾರಕ ಸಂಗೀತ ಮಹಾವಿದ್ಯಾಲಯದ ಜವಾಬ್ದಾರಿ ಹೊತ್ತು ನೂರಾರು ಅಂಧರು, ಅನಾಥರು, ವಿಕಲಚೇತನರಿಗೆ ಸಂಗೀತ ಶಿಕ್ಷಣ ದೊರಕುವಂತೆ ಮಾಡಿದರು.ಪುಟ್ಟರಾಜರು ತಾರುಣ್ಯದಲ್ಲೇ ಪಂಡಿತ, ಗವಾಯಿ ಬಿರುದು ಪಡೆದಿದ್ದರು. ಕನ್ನಡ, ಸಂಸ್ಕೃತ, ಹಿಂದಿಯಲ್ಲಿ ಕೃತಿ ರಚಿಸಿದ್ದ ಗವಾಯಿಗಳಿಗೆ ಸಂಗೀತವೆಂದರೆ ಪಂಚಪ್ರಾಣವಾಗಿತ್ತು.ಪುಟ್ಟರಾಜ ಗವಾಯಿಗಳ ಅಪಾರ ಸೇವೆಯನ್ನು ಪರಿಗಣಿಸಿ ಭಾರತ ಸರಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು. ಇದಲ್ಲದೆ 1975ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, 1993ರಲ್ಲಿ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ, 2000ನೇ ಇಸವಿಯಲ್ಲಿ ಬಸವಶ್ರೀ ಪ್ರಶಸ್ತಿ, ಚೌಡಯ್ಯ ಪ್ರಶಸ್ತಿ, ನಾಡೋಜ ಗೌರವ, ಕನಕ ಪುರಂದರ ಪ್ರಶಸ್ತಿ, ಶ್ರೀ ಜಯಚಾಮರಾಜ ಒಡೆಯರ್ ಅವರಿಂದ ಸನ್ಮಾನ, ಮೈಸೂರು ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯ ಪಾಲ್ ಹ್ಯಾರಿಸ್ ಪ್ರಶಸ್ತಿ, ಭಾರತ ಸರಕಾರದ ಮಾನವ ಸಂಪನ್ಮೂಲ ಇಲಾಖೆಯ ಫೆಲೊಷಿಪ್, ಕಾಳಿದಾಸ ಸಮ್ಮಾನ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಪಂಡಿತ ಪುಟ್ಟರಾಜ ಗವಾಯಿ ಅವರನ್ನು ಅರಸಿ ಬಂದಿದ್ದವು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: