ರಮಾಕಾಂತ್ ಜೋಶಿ ಪ್ರಸಿದ್ದ ಮನೋಹರ ಗ್ರಂಥಮಾಲಾದ ಸಂಪಾದಕ, ಪ್ರಕಾಶಕ ಮತ್ತು ಉಪಾಧ್ಯಕ್ಷರಾಗಿ, ಪ್ರಾಧ್ಯಾಪಕರಾಗಿ, ರಂಗಕರ್ಮಿಯಾಗಿ ಮತ್ತು ಬರಹಗಾರರಾಗಿ ಹೆಸರಾದವರು. ತಂದೆ ಜಿ.ಬಿ. ಜೋಶಿಯವರು ಆರಂಭಿಸಿದ ಮನೋಹರ ಗ್ರಂಥಮಾಲೆ ಪ್ರಕಾಶನವನ್ನು ನಡೆಸಿಕೊಂಡು ಬಂದಿದ್ದಾರೆ.
ರಮಾಕಾಂತ್ ಜೋಶಿ 1936ರ ಡಿಸೆಂಬರ್ 23ರಂದು ಧಾರವಾಡದಲ್ಲಿ ಜನಿಸಿದರು. ತಂದೆ ಮಹಾನ್ ಸಾಹಿತಿ ಮತ್ತು ರಂಗಕರ್ಮಿ ಜಿ.ಬಿ. ಜೋಶಿ (ಜಡಭರತ) ಅವರು. ತಾಯಿ ಪದ್ಮಾವತಿ. ಗುಜರಾತಿನ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದ ರಮಾಕಾಂತರು, ಅದೇ ವಿಶ್ವವಿದ್ಯಾಲಯದಿಂದ “The use of myth in Indian English Drama” ಮಹಾಪ್ರಬಂಧಕ್ಕೆ ಪಿಎಚ್.ಡಿ ಗಳಿಸಿದರು. ಮುಂದೆ ಇಂಗ್ಲಿಷ್ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದಾರೆ.
ರಮಾಕಾಂತ್ ಜೋಶಿ ಅವರು ಪುಸ್ತಕ ಪ್ರಕಾಶನದ ಜೊತೆಗೆ ಲೇಖಕರಾಗಿಯೂ ಮಹತ್ವದ ಕೆಲಸ ಮಾಡಿದ್ದಾರೆ. ಸವಣೂರ ವಾಮನರಾವ್, ಗರುಡ ಸದಾಶಿವರಾವ್, ರಾಘವೇಂದ್ರ ಖಾಸನೀಸ, ದ.ಬಾ. ಕುಲಕರ್ಣಿ, ಎ.ಕೆ.ರಾಮಾನುಜನ್, ಒಂದಷ್ಟು ಹೊಸಕಥೆಗಳು ಸೇರಿದಂತೆ ಹಲವಾರು ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ. ಪುಸ್ತಕ ಪ್ರಕಾಶನ ಇವರ ಅನುವಾದಿತ ಕೃತಿ.
ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷರಾಗಿ ಸೇವೆಸಲ್ಲಿಸಿರುವ ರಮಾಕಾಂತ್ ಜೋಶಿ ಅವರಿಗೆ ‘ಪ್ರಕಾಶಕರ ಒಕ್ಕೂಟದ ವಿಶಿಷ್ಟ ಪ್ರಕಾಶಕ ಪ್ರಶಸ್ತಿ’, ‘ಸಂದೇಶ ವಿಶೇಷ ಗೌರವ ಪ್ರಶಸ್ತಿ’, ‘ಕನ್ನಡ ಪುಸ್ತಕ ಪ್ರಾಧಿಕಾರದ ಅತ್ಯುತ್ತಮ ಪ್ರಕಾಶಕ ಪ್ರಶಸ್ತಿ’, ಅಂಕಿತ ಅತ್ಯುತ್ತಮ ಪ್ರಕಾಶನ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ.
ನಾಡಿನ ಹಿರಿಯರಾದ ರಮಾಕಾಂತ್ ಜೋಶಿ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
Please follow and like us: