ನವದೆಹಲಿ,ಏ.30- ಲೈಂಗಿಕ ಕಿರುಕುಳದ ನೀಡಿದ ಕುಸ್ತಿ ಫೆಡರೇಶನ್ ಮುಖ್ಯಸ್ಥರನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳ ವಿರುದ್ಧ ಧಮನಕಾರಿ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದು ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಆರೋಪಿಸಿದ್ದಾರೆ.
ಸಂಸದರೂ ಆಗಿರುವ ಬಿಜೆಪಿ ಮುಖಂಡನನ್ನು ಬಂಧಿಸುವ ಬದಲಿಗೆ ಆರೋಪ ಮಾಡಿದವರನ್ನೇ ಸಂಕಷ್ಟ ಹೆದರಿಸುವಂತೆ ಮಾಡಲಾಗುತ್ತಿದೆ. ಇದು ದಮನಕಾರಿ ತನಿಖೆಯೇ ಎಂದು ಕಿಡಿಕಾರಿದ್ದಾರೆ.
ಹಿರಿಯ ವಕೀಲರೂ ಆದ ಕಪಿಲ್ ಸಿಬಲ್ ಸುಪ್ರೀಂ ಕೋರ್ಟ್ನಲ್ಲಿ ಕುಸ್ತಿಪಟುಗಳ ಪರವಾಗಿ ವಾದಿಸುತ್ತಿದ್ದಾರೆ. ಟ್ವೀಟ್ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಅವರು, ಅಪ್ರಾಪ್ತ ವಯಸ್ಕರು ಸೇರಿ 6 ಮಂದಿ ಆಘಾತಕ್ಕೊಳಗಾಗಿದ್ದಾರೆ. ಕುಸ್ತಿ ಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಆರೋಪಿಯ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೌನವಾಗಿದ್ದಾರೆ. ಈವರೆಗೂ ಆರೋಪಿಯನ್ನು ಬಂಧಿಸಿಲ್ಲ. ಈ ವಾತಾವರಣದಲ್ಲಿ ನ್ಯಾಯಯುತ ತನಿಖೆ ನಡೆಯಲಿದೆಯೇ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಸಂಸದರಾದ ಬ್ರಿಜ್ ಭೂಷಣ್ ವಿರುದ್ಧ ಏಳು ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ಇದೇ ಕುಸ್ತಿ ಪಟುಗಳು ಪ್ರತಿಭಟನೆ ನಡೆಸಿದಾಗ ಪ್ರಧಾನಮಂತ್ರಿಯವರ ಸೂಚನೆ ಮೇರೆಗೆ ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಅನುರಾಗ್ಸಿಂಗ್ ಠಾಕೂರ್ ಸಂಧಾನ ಸಭೆ ನಡೆಸಿದ್ದರು. ಆರೋಪಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಲಾಗುವುದು. ಆವರೆಗೂ ಬ್ರಿಜ್ ಭೂಷಣ್ ಭಾರತೀಯ ಕುಸ್ತಿ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗಿತ್ತು.
ಆದರೆ ಅದ್ಯಾವುದೂ ಈಡೇರಲಿಲ್ಲ. ಕೊನೆಗೆ ಮತ್ತೆ ಕಳೆದ ವಾರದಿಂದ ದೆಹಲಿಯಲ್ಲಿ ಕುಸ್ತಿ ಪಟುಗಳು ಪ್ರತಿಭಟನೆ ಆರಂಭಿಸಿದ್ದಾರೆ. ಅವರಿಗೆ ಕುಡಿಯುವ ನೀರು ಸೇರಿದಂತೆ ಬೇರೆ ಯಾವುದೇ ಸೌಲಭ್ಯಗಳನ್ನು ಕಲ್ಪಿಸದೆ ಕಿರುಕೂಳ ನೀಡಲಾಯಿತು ಎಂಬ ಆರೋಪಗಳಿವೆ.
ಕ್ರಿಕೆಟ್, ಚಲನಚಿತ್ರದ ಹಲವು ಗಣ್ಯರು ಕುಸ್ತಿಪಟುಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕುಸ್ತಿಪಟುಗಳು ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ. ಅಲ್ಲಿ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರ ಪೀಠ ವಿಚಾರಣೆ ನಡೆಸಿತ್ತು, ದೆಹಲಿ ಪೊಲೀಸರನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಆರೋಪ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಹೇಳಿಕೆ ದಾಖಲಿಸಿದ್ದರು.
ಅದಾದ ಕೆಲವೇ ಗಂಟೆಗಳಲ್ಲಿ ಎರಡು ಎಫ್ಐಆರ್ಗಳನ್ನು ದಾಖಲಿಸಲಾಗಿದೆ. ಒಂದರಲ್ಲಿ ಅಪ್ರಾಪ್ತ ಕುಸ್ತಿಪಟುವಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದರೆ, ಎರಡನೆಯದು ಮಹಿಳೆಯರಿಗೆ ಕಿರುಕುಳ ನೀಡಿದ ಪ್ರಕರಣವಾಗಿದೆ.
ಕುಸ್ತಿ ಪಟುಗಳು ಒಲಿಂಪಿಕ್ ಹಾಗೂ ಪ್ಯಾರಾಲಿಂಪಿಕ್ನಲ್ಲಿ ಪದಕ ಗೆದ್ದಾಗ ಅವರನ್ನು ಪ್ರಧಾನಿ ಅವರು ಕರೆದು ತಮ್ಮ ಮನೆಯಲ್ಲಿ ಉಪಚರಿಸಿ, ಸಂಭಾಷಣೆ ನಡೆಸಿದರು. ಆ ವೇಳೆ ಇದು ಭಾರೀ ಪ್ರಚಾರ ಪಡೆದುಕೊಂಡಿತ್ತು. ಅದೇ ಕುಸ್ತಿಪಟುಗಳು ಇಂದು ದೆಹಲಿಯ ಬೀದಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರೂ ಪ್ರಧಾನಿ ಮೌನವಾಗಿದ್ದಾರೆ ಎಂಬ ಆರೋಪಗಳಿವೆ.
ಆರೋಪಿ ಬ್ರಿಜ್ ಭೂಷಣ್ರನ್ನು ಬಂಧಿಸುವವರೆಗೂ ಪ್ರತಿಭಟನಾ ಸ್ಥಳದಿಂದ ಹೊರಬರುವುದಿಲ್ಲ ಎಂದು ಕುಸ್ತಿಪಟುಗಳು ಪಟ್ಟು ಹಿಡಿದಿದ್ದಾರೆ. ಕಳೆದ ಭಾನುವಾರ ಧರಣಿಯನ್ನು ಪುನರಾರಂಭಿಸಿದ ಅವರು, ಈ ಮೊದಲು ತನಿಖೆ ನಡೆಸಿದ ಸಮಿತಿಯ ಸಂಶೋಧನೆಗಳನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
https://play.google.com/store/apps/details?id=com.speed.newskannada