ಅವರು ವಾಗ್ಗೇಯಕಾರ ಮೈಸೂರು ವಾಸುದೇವಾಚಾರ್ಯರ ಹಿರಿಯ ಮೊಮ್ಮಗ. ಅವರ ತಂದೆ ಸುಬ್ರಹ್ಮಣ್ಯಂ ಮತ್ತು ತಾಯಿ ಪದ್ಮಾವತಮ್ಮ. ಇಂದು ಅವರ ಸಂಸ್ಮರಣೆ ದಿನ.
ನಾನು ಚಿಕ್ಕವನಿದ್ದಾಗಲಿಂದಲೂ ಕುತೂಹಲದಿಂದ ನೋಡುತ್ತಾ ಇದ್ದಿದ್ದು ನನ್ನ ತಂದೆಯವರ ಬಳಿ ಇದ್ದ ಪುಟ್ಟ ಚೀಲ, ಅದರಲ್ಲಿ ಅವರಿಗೆ ಪ್ರಿಯವಾದ ಕೆಲವು ಕೃತಿಗಳು ಇರುತ್ತಿದ್ದವು. ಅವುಗಳಲ್ಲಿ ನನ್ನ ಗಮನ ಸೆಳೆದಿದ್ದು ‘ಸಂಗೀತ ಸರಿತಾ’. ಅದನ್ನು ಅವರು ಮತ್ತೆ ಮತ್ತೆ ಓದುತ್ತಿದ್ದರು. ಈ ಪುಟ್ಟ ಕೃತಿಯನ್ನು ಅಷ್ಟು ಸಲ ಓದುವುದು ಏನಿದೆ ಎನ್ನುವುದು ನನ್ನ ಬಾಲ್ಯದ ಕುತೂಹಲ. ಒಮ್ಮೆ ಈ ಪ್ರಶ್ನೆ ಕೇಳಿದ್ದಾಗ ಅಪ್ಪ ಹೇಳಿದ್ದರು ‘ಇದು ಬರೀ ಪುಸ್ತಕವಲ್ಲ, ಸಂಗೀತದ ಕುರಿತು ವಿಶ್ವಕೋಶ’ ಮುಂದೆ ಓದಿದಾಗ ನನಗೂ ಈ ಮಾತು ಸತ್ಯ ಎಂದು ಅರಿವಾಯಿತು. (ಈಗಲೂ ಈ ಪುಸ್ತಕ ಪಿರ್ತಾರ್ಜಿತ ಆಸ್ತಿಯಂತೆ ನನ್ನ ಬಳಿ ಇದೆ. ಸಂಗೀತದ ಬಗ್ಗೆ ಅನುಮಾನ ಬಂದಾಗಲೆಲ್ಲ ಅದನ್ನುನೋಡುತ್ತೇನೆ) ಮುಂದೆ ನಾನು ಕನಸಿನಲ್ಲಿಯೂ ಎಣಿಸಿದ ಅದ್ಭುತ ನಡೆಯಿತು. ಬಾಲ್ಯ ಕಾಲದಲ್ಲಿ ನನಗೆ ಆಕರ್ಷಣೆ ಹುಟ್ಟಿಸಿದ್ದ ಎಸ್.ಕೃಷ್ಣಮೂರ್ತಿಯವರನ್ನು ಭೇಟಿ ಮಾಡುವ, ಅವರ ಜೊತೆ ಕೆಲಸ ಮಾಡುವ ಅವಕಾಶ ಕೂಡ ನನಗೆ ಸಿಕ್ಕಿತು. ಸಂಗೀತದ ಕುರಿತು ನನಗೆ ಏನಾದರೂ ಅಲ್ಪ ಸ್ವಲ್ಪ ತಿಳುವಳಿಕೆ ಇದ್ದರೆ ಅದಕ್ಕೆ ಕೃಷ್ಣಮೂರ್ತಿಯವರ ಆಶೀರ್ವಾದವೇ ಕಾರಣ.
ಕೃಷ್ಣಮೂರ್ತಿ ಅವರು 1922ರ ಜೂನ್ 21ರಂದು ಜನಿಸಿದರು. ಕೃಷ್ಣಮೂರ್ತಿಯವರದು ಬಾಲ ಪ್ರತಿಭೆ. ತಾತನ ಪರಂಪರೆಯ ಸಮರ್ಥ ವಾರಸುದಾರರಾದ ಅವರು ತಾತನ ಪ್ರಮುಖ ಶಿಷ್ಯರಾದ ಎನ್.ಚನ್ನಕೇಶವಯ್ಯನವರಲ್ಲಿ ಪ್ರಾಥಮಿಕ ಪಾಠವನ್ನು ಪಡೆದರು. ಮುಂದೆ ತಾತನವರಲ್ಲಿಯೇ ಉನ್ನತ ಶಿಕ್ಷಣ. ಒಂಬತ್ತು ವರ್ಷದ ಬಾಲಕನಾಗಿದ್ದಾಗಲೇ ಮೈಸೂರಿನ ಸಂತೇಪೇಟೆ ಶ್ರೀರಾಮಮಂದಿರದಲ್ಲಿ ಪ್ರಪ್ರಥಮ ಗಾಯನ ಕಛೇರಿ. ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗ ಜಲತರಂಗ ವಾದನದ ಅಭ್ಯಾಸ ಆರಂಭ. ಕಿರಿಯ ಸೋದರ ರಾಜಾರಾಂ ಅವರೊಂದಿಗೆ ಜೋಡಿ ಜಲತರಂಗ ಕಛೇರಿಗಳು. ನಾಲ್ವಡಿ ಕೃಷ್ಣರಾಜ ಒಡೆಯರ ಸಮ್ಮುಖದಲ್ಲಿ ಕಛೇರಿ ಮತ್ತು ಮಹಾರಾಜರ ಅಪಾರ ಮೆಚ್ಚುಗೆ. ಮೈಸೂರಿನ ವಿದ್ವದ್ಘೋಷ್ಟಿಗೆ ಸೇರ್ಪಡೆ ಆಯಿತು. ಅರಮನೆಯಲ್ಲಿ ಪಾಶ್ಚಾತ್ಯ ಸಂಗೀತದ ಶಿಕ್ಷಣವೂ ನಡೆಯಿತು.
ಸಂಗೀತದ ಜೊತೆಗೆ ಓದಿನಲ್ಲಿ ಕೂಡ ಸದಾ ಮುಂದಿದ್ದ ಕೃಷ್ಣಮೂರ್ತಿಯವರು 1943ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಅರ್ಥ ಶಾಸ್ತ್ರದಲ್ಲಿ ಎಂ.ಎ ಪದವಿ ಪಡೆದರು. ಮಹಾರಾಜರ ನಿರ್ಧಾರದಂತೆ ಇವರಿಗಾಗಿಯೇ ಮೈಸೂರು ಆಕಾಶವಾಣಿಯಲ್ಲಿ ಹುದ್ದೆಯೊಂದು ನಿರ್ಮಾಣಗೊಂಡಿತ್ತು. ಮುಂದೆ 33 ವರ್ಷಗಳ ಕಾಲ ಆಕಾಶ ವಾಣಿಯಲ್ಲಿ ಸೇವೆ ಸಲ್ಲಿಸಿದ ಅವರು 1980ರಲ್ಲಿ ಧಾರವಾಡ ಆಕಾಶವಾಣಿ ಕೇಂದ್ರದ ನಿಲಯ ನಿರ್ದೇಶಕರಾಗಿ ನಿವೃತ್ತರಾದರು.
Please follow and like us: