ಕಾರವಾರ ತಾಲ್ಲೂಕಾ 7ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ ದೊರೆತಿದ್ದು, ತಾಯಿ ಭುವನೇಶ್ವರಿದೇವಿ ಭಾವಚಿತ್ರ ಹಾಗೂ ಸಮ್ಮೇಳಾನಾಧ್ಯಕ್ಷ ಎಂ.ಎ.ಖತೀಬ್ ಅವರನ್ನು ತೆರೆದ ವಾಹನದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ನಗರದ ಮಿತ್ರಸಮಾಜ ಮೈದಾನದಿಂದ ಆರಂಭವಾದ ಮೆರವಣಿಗೆಗೆ ಬಿಇಓ ಶಾಂತೇಶ ನಾಯಕ ಚಾಲನೆ ನೀಡಿದರು. ಕನ್ನಡಾಂಬೆಯ ಭವ್ಯ ರಥದಲ್ಲಿ ತಾಯಿ ಭುವನೇಶ್ವರಿದೇವಿಯ ಭಾವಚಿತ್ರ ಇರಿಸಿದ್ದು, ಸಮ್ಮೇಳಾನಾಧ್ಯಕ್ಷ ಎಂ.ಎ ಖತೀಬ್ ಅವರನ್ನು ಮೆರವಣಿಗೆ ಮೂಲಕ ಕರೆತರಲಾಯಿತು. ಮೆರವಣಿಗೆಯು ಮಿತ್ರಸಮಾಜ ಮೈದಾನದಿಂದ ಸುಭಾಶ್ಚಂದ್ರ ವೃತ್ತ, ಸವಿತಾ ಸರ್ಕಲ್ ಮಾರ್ಗವಾಗಿ ಕೋಡಿಭಾಗ್ ರಸ್ತೆ ಮೂಲಕ ಸಂಚರಿಸಿ ನಗರದ ಮಾಲಾದೇವಿ ಮೈದಾನದಲ್ಲಿರುವ ಜಿಲ್ಲಾ ರಂಗಮಂದಿರಕ್ಕೆ ತಲುಪಿತು. ಈ ವೇಳೆ ಮೆರವಣಿಗೆಯಲ್ಲಿ ಡೋಲು ಕುಣಿತ, ಮುಂಡಳ್ಳಿಯ ಗೊಂಬೆ ಕುಣಿತಗಳು ಎಲ್ಲರ ಗಮನ ಸೆಳೆಯಿತು. ಅಲ್ಲದೇ ಇದೇ ವೇಳೆ ಹನುಮಾನ್ ವೇಷಧಾರಿಯು ಎಲ್ಲರ ಗಮನ ಸೆಳೆಯಿತು. ಇನ್ನು ಮೆರವಣಿಗೆಯಲ್ಲಿ ಸಾಹಿತಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಶಿಕ್ಷಕರು, ಕಾಲೇಜು ವಿದ್ಯಾರ್ಥಿಗಳು, ಆಟೋಚಾಲಕರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಕನ್ನಡಾಭಿಮಾನಿಗಳು ಮೆರವಣಿಗೆಯುದ್ದಕ್ಕೂ ಹೆಜ್ಜೆಹಾಕುವ ಮೂಲಕ ಮೆರಗು ನೀಡಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada