ಸಾವಿತ್ರಿ ಚಲನಚಿತ್ರರಂಗ ಕಂಡ ಅತ್ಯದ್ಭುತ ಕಲಾವಿದೆ. ಆಕೆ ಪ್ರತಿಭೆ ಮತ್ತು ಶೋಭೆಗಳ ಅಪೂರ್ವ ಸಂಗಮದಂತಿದ್ದವರು. ನಟಿಯಾಗಿ ಮಾತ್ರವಲ್ಲದೆ ಗಾಯಕಿಯಾಗಿ, ನಿರ್ದೇಶಕಿಯಾಗಿ ಮತ್ತು ನಿರ್ಮಾಪಕಿಯಾಗಿಯೂ ಆಕೆ ಕಾರ್ಯನಿರ್ವಹಿಸಿದ್ದರು. ಮಾಯಾ ಬಜಾರ್ ಅಂತಹ ಪ್ರಸಿದ್ಧ ಚಿತ್ರಗಳಲ್ಲಿನ ಅವರ ಅಭಿನಯ ಮರೆಯಲಾಗದ್ದು.
ಸಾವಿತ್ರಿ 1936ರ ಡಿಸೆಂಬರ್ 6ರಂದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಚಿರ್ರವೂರು ಎಂಬಲ್ಲಿ ಜನಿಸಿದರು. ತಂದೆ ನಿಸ್ಸಂಕರ ಗುರುವಯ್ಯ. ತಾಯಿ ಸುಭದ್ರಮ್ಮ. ಸಾವಿತ್ರಿಗೆ ಇನ್ನೂ 6 ವರ್ಷ ಇದ್ದಾಗಲೇ ತಂದೆ ನಿಧನರಾದರು. ತಾಯಿ, ಸಾವಿತ್ರಿ ಮತ್ತು ಹಿರಿಯ ಮಗ ಮಾರುತಿಯನ್ನು ತನ್ನ ಬಂಧುಗಳ ಮನೆಯಲ್ಲಿರಲು ಕರೆದೊಯ್ದಳು. ಶಾಲೆಯಲ್ಲಿ ಸಾವಿತ್ರಿ ನೃತ್ಯದಲ್ಲಿ ಚುರುಕಾಗಿದ್ದಳು.
ಸಾವಿತ್ರಿ ನೃತ್ಯನಾಟಕಗಳಲ್ಲಿ ಅಭಿನಯಿಸ ತೊಡಗಿದರು. ಕೊಂಗರ ಜೊಗ್ಗಯ್ಯ ನಾಟಕ ಕಂಪನಿಯಲ್ಲಿ ಸ್ವಲ್ಪ ಕಾಲ ಕೆಲಸ ಮಾಡಿದರು. 1948ರ ಸಮಯದಲ್ಲಿ ಸಿನಿಮಾದಲ್ಲಿ ನಟಿಸಲು ತಮ್ಮ 12ನೆಯ ವಯಸ್ಸಿನಲ್ಲಿ ಮದ್ರಾಸಿಗೆ ಹೋದಾಗ ನಾಯಕಿ ಪಾತ್ರಕ್ಕೆ ಸೂಕ್ತ ವಯಸ್ಸಾಗಿಲ್ಲದ ಕಾರಣ ಆಕೆಗೆ ಅವಕಾಶ ಸಿಗಲಿಲ್ಲ. 1950ರಲ್ಲಿ ‘ಸಂಸಾರಂ’ ಚಿತ್ರದಲ್ಲಿ ನಾಯಕಿಯಾಗಿ ಪಾತ್ರ ಸಿಕ್ಕಿತಾದರೂ ಅನುಭವ ಸಾಲದಿದ್ದ ಆಕೆಯ ನಟನೆಯನ್ನು ತೆಗೆದು ಬದಲಿಗೆ ಬೇರೊಬ್ಬರನ್ನು ಬಳಸಲಾಯಿತು. ಮುಂದೆ ‘ರೂಪವತಿ’ ಮತ್ತು ‘ಪಾತಾಳ ಭೈರವಿ’ ಚಿತ್ರಗಳಲ್ಲಿ ಪುಟ್ಟ ಪಾತ್ರಗಳು ದೊರೆತವು. ‘ಪೆಳ್ಲಿ ಚೇಸಿ ಚೂಡು’ ಚಿತ್ರದಲ್ಲಿ ಎರಡನೇ ನಾಯಕಿ ಪಾತ್ರ ದೊರಕಿತು.
1953ರಲ್ಲಿ ಪ್ರಸಿದ್ಧ ‘ದೇವದಾಸು’ ಚಿತ್ರ ಬಂತು. ಮುಂದೆ ದೊಂಗ ರಾಮುಡು, ಮಾಯಾ ಬಜಾರ್, ನರ್ತನಶಾಲಾ, ಮಿಸ್ಸಮ್ಮ, ಅರ್ಧಾಂಗಿ, ತೋಡಿ ಕೊಡಲ್ಲು, ಮಾಂಗಲ್ಯ ಬಲಂ, ಆರಾಧನಾ, ಗುಂಡಮ್ಮ ಕಥಾ, ಡಾಕ್ಟರ್ ಚಕ್ರವರ್ತಿ, ಸುಮಂಗಲಿ, ದೇವತಾ ಮುಂತಾದ ಪ್ರಸಿದ್ಧ ತೆಲುಗು ಚಿತ್ರಗಳಲ್ಲಿ ಅವರ ಅಧಿಪತ್ಯ 1965ರವರೆಗೆ ನಿರಂತರವಾಗಿತ್ತು. ಇದೇ ಅವಧಿಯಲ್ಲಿ ಅವರು ನಟಿಸಿದ ಪ್ರಸಿದ್ಧ ತಮಿಳು ಚಿತ್ರಗಳಲ್ಲಿ ಕಲತ್ತೂರ್ ಕಣ್ಣಮ್ಮ, ಪಾಸಮಲರ್, ಪಾವ ಮನ್ನಿಪ್ಪು, ಪಾರ್ತಾಲ್ ಪಸಿ ತೀರುಮ್, ಕರ್ಪಗಮ್, ಕರ್ಣನ್, ಕೈ ಕುಡತ್ತ ದೈವಂ, ನವರಾತ್ರಿ ಮತ್ತು ತಿರುವಿಳೈಯಾಡಲ್ ಮುಂತಾದವು ಸೇರಿದ್ದವು.
1960ರಲ್ಲಿ ಸಾವಿತ್ರಿ ಅವರಿಗೆ ‘ಚಿವರಾಕು ಮಿಗಿಲೇದಿ’ ಚಿತ್ರದ ಅಭಿನಯಕ್ಕೆ ರಾಷ್ಟ್ರಪತಿಗಳ ಪಾರಿತೋಷಕ ಸಂದಿತು. 1968ರಲ್ಲಿ ಅವರು ‘ಚಿನ್ನಾರಿ ಪಾಪುಲು’ ಎಂಬ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿ ನಂದಿ ಪ್ರಶಸ್ತಿ ಗಳಿಸಿದರು. ಮಹಾನಟಿ ಎಂಬ ಗೌರವ ಅವರಿಗೆ ಸಂದಿತ್ತು.
Please follow and like us: