ಬಿಜೆಪಿಯ ಭದ್ರ ಕೋಟೆಯಾಗಿರುವ ಬೆಳಗಾವಿಯಲ್ಲಿ ಮುಂದಿನ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವತ್ತ ಗಮನ ಕೊಡಿ, ಭಿನ್ನಮತ ಇವುಗಳನ್ನೆಲ್ಲ ಸಹಿಸಲ್ಲ. ಮುಂದಿನ ಬಾರಿ ನಾನು ರಾಜ್ಯಕ್ಕೆ ಬರುವ ಹೊತ್ತಿಗೆ ಯಾವುದೇ ಭಿನ್ನಾಭಿಪ್ರಾಯಗಳು ಯಾರಲ್ಲೂ ಇರಬಾರದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಳಗಾವಿ ಜಿಲ್ಲಾ ಬಿಜೆಪಿ ನಾಯಕರುಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.ಬೆಳಗಾವಿ ಬಿಜೆಪಿ ನಾಯಕರಲ್ಲಿ ಭುಗಿಲೆದ್ದಿರುವ ಭಿನ್ನಮತ ಶಮನದ ಸಂಬಂಧ ನಿನ್ನೆ ಬೆಳಗಾವಿಯ ಖಾಸಗಿ ಹೋಟೆಲ್ನಲ್ಲಿ ಎಲ್ಲ ಮುಖಂಡರ ಜತೆ ಸಭೆ ನಡೆಸಿದ ಅಮಿತ್ ಶಾ ಅವರು, ಬೆಳಗಾವಿಯಲ್ಲಿ ಕಳೆದ ಚುನಾವಣೆಯಲ್ಲಿ ೧೮ ರಲ್ಲಿ ೧೩ ಸ್ಥಾನ ಗೆದ್ದಿದ್ದೇವೆ. ಈ ಬಾರಿ ಇನ್ನು ಹೆಚ್ಚಿನ ಸ್ಥಾನ ಗೆಲ್ಲಬೇಕು. ಆ ಬಗ್ಗೆ ಗಮನ ಕೊಡಿ. ವೈಯುಕ್ತಿಕವಾಗಿ ಕಚ್ಚಾಟ ಬಿಡಿ ಎಂದು ನಾಯಕರುಗಳಿಗೆ ಕಿವಿ ಮಾತು ಹೇಳಿದರು.ಪಕ್ಷ ಮುಖ್ಯ. ಹಾಗಾಗಿ ವೈಯುಕ್ತಿಕ ಪ್ರತಿಷ್ಠೆ, ಅಹಂಗಳನ್ನೆಲ್ಲ ಬಿಡಿ. ನಿಮ್ಮ ಹಿತವನ್ನು ಪಕ್ಷ ನೋಡಿಕೊಳ್ಳುತ್ತದೆ. ಮೊದಲು ಪಕ್ಷವನ್ನು ಅಧಿಕಾರಕ್ಕೆ ತನ್ನಿ ಎಂದು ಸೂಚಿಸಿದರು.ರಾಜ್ಯದಲ್ಲೆ ಅತಿ ಹೆಚ್ಚಿನ ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿಯಲ್ಲಿ ಬಿಜೆಪಿ ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಪ್ರಾಬಲ್ಯ ಸಾಧಿಸಲು ರೂಪಿಸಬೇಕಾದ ಚುನಾವಣಾ ರಣತಂತ್ರಗಳ ಬಗ್ಗೆ ಎಲ್ಲ ನಾಯಕರುಗಳೊಂದಿಗೆ ಸಮಾಲೋಚನೆ ನಡೆಸಿದ ಸಂದರ್ಭದಲ್ಲಿ ಅಮಿತ್ ಶಾ ಬೆಳಗಾವಿ ನಾಯಕರುಗಳಿಗೆ ಕೆಲ “ಹಿತ”ವಚನ ಹೇಳಿ, ನಯವಾಗಿಯೇ ಚಾಟಿ ಬೀಸಿದರು.ಬೆಳಗಾವಿಯ ಬಿಜೆಪಿಯಲ್ಲಿ ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿ ಹೊಳಿ, ಲಕ್ಷ್ಮಣ ಸವದಿ, ಶಶಿಕಲಾ ಜೊಲ್ಲೆ, ಅಭಯ ಪಾಟೀಲ್ ಇವರುಗಳ ನಡುವೆ ಶೀತಲ ಸಮರ ನಡೆದಿದ್ದು, ಇವರುಗಳ ನಡುವೆ ಹೊಂದಾಣಿಕೆಯೇ ಇಲ್ಲ. ಇದು ಜಿಲ್ಲಾ ರಾಜಕಾರಣದ ಮೇಲೂ ಪ್ರಭಾವ ಬೀರಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಅಮಿತ್ ಶಾ ಇವರೆಲ್ಲರ ಜತೆ ನಿನ್ನೆ ಸಭೆ ನಡೆಸಿ ಎಲ್ಲವನ್ನು ಸರಿಪಡಿಸುವ ಪ್ರಯತ್ನ ನಡೆಸಿದರು. ಈ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳೀನ್ಕುಮಾರ್ ಕಟೀಲ್, ಸಚಿವರಾದ ಶಶಿಕಲಾ ಜೊಲ್ಲೆ, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ರಮೇಶ್ ಜಾರಕಿಹೊಳಿ ಮತ್ತಿತರರ ನಾಯಕರುಗಳು ಭಾಗಿಯಾಗಿದ್ದರು.
https://play.google.com/store/apps/details?id=com.speed.newskannada