ಶ್ರೀ ರಾಘವೇಂದ್ರ ಗುರು ಸಾರ್ವಭೌಮರ 428 ನೇ ವರ್ಧಂತಿ. ಅವರು ಜನಿಸಿದ ಪುಣ್ಯದಿನ.16ನೇ ಶತಮಾನದಲ್ಲಿ ತಿಮ್ಮಣ್ಣ ಭಟ್ಟರು ಹಾಗೂ ಗೋಪಮ್ಮ ಎಂಬ ಸಾಧ್ವಿ ದಂಪತಿಗಳಿಗೆ ತಿರುಪತಿ ತಿಮ್ಮಪ್ಪನ ಅನುಗ್ರಹದಿಂದ ಜನಿಸಿದ ಶಿಶುವೇ ಗುರು ರಾಘವೇಂದ್ರತೀರ್ಥರು. ರಾಯರ ಪೂರ್ವಾಶ್ರಮದ ಹೆಸರು ವೆಂಕಟನಾಥ ಅಥವಾ ವೀಣಾ ವೆಂಕಣ್ಣಭಟ್ಟ. ಎಲ್ಲ ಮಕ್ಕಳಂತೆ ವೆಂಕಟನಾಥರೂ ತಮ್ಮ ಬಾಲ್ಯವನ್ನು ಕಳೆದರು. ಸಮಗ್ರ ಬ್ರಹ್ಮ ಮೀಮಾಂಸಾ ಶಾಸ್ತ್ರವನ್ನು ಅಭ್ಯಸಿಸಿ ಪ್ರಕಾಂಡ ಪಾಂಡಿತ್ಯ ಗಳಿಸಿದರು. ಶ್ರೀಸುಧೀಂದ್ರತೀರ್ಥರಿಂದ ಸರ್ವಜ್ಞಪೀಠವನ್ನು ಅಲಂಕರಿಸಿದ ಬಳಿಕ ಹಗಲಿರುಳು ಸಂಚರಿಸಿ ದೀನದಲಿತರ ಉದ್ಧಾರಕ್ಕೆ ಕಾರಣರಾದರು. ತಮ್ಮ ಅಪೂರ್ವ ತಪೋಬಲದಿಂದ ದೇಹೀ ಎಂದು ಬರುವ ಭಕ್ತರ ಮನೋಕಾಮನೆಯನ್ನು ಈಡೇರಿಸುವ ಕಲಿಯುಗದ ಕಾಮಧೇನು ಎಂದೆನಿಸಿ, ಶ್ರೀ ಗುರುರಾಘವೇಂದ್ರರಾದರು.ರಾಯರು ಕೇವಲ ಯತಿಗಳಷ್ಟೇ ಅಲ್ಲ. ಸಾಹಿತ್ಯ ಸರಸ್ವತಿ ಮತ್ತು ಸಂಗೀತ ಸರಸ್ವತಿಯ ವರಪುತ್ರರು. ಸಂಸ್ಕೃತದಲ್ಲಿ ‘ಪರಿಮಳ’, ‘ನ್ಯಾಯ ಮುಕ್ತಾವಳಿ’ , ‘ತತ್ವ ಮಂಜರಿ’, ‘ಸೂತ್ರಭಾಷ್ಯ’, ‘ಭಾರದೀಪ’, ‘ತಾತ್ಪರ್ಯ ನಿರ್ಣಯ’ವೇ ಮುಂತಾದ ಅಮೂಲ್ಯ ಕೃತಿಗಳನ್ನು ಬರೆದಿರುವ ಗುರು ರಾಘವೇಂದ್ರ ತೀರ್ಥರು ಮಹಾಭಾರತವೇ ಮೊದಲಾದ ಕೃತಿಗಳಿಗೆ ಅರ್ಥವಿವರಣೆ ಹಾಗೂ ಭಾಷ್ಯಗಳನ್ನೂ ಬರೆದಿದ್ದಾರೆ.ಗುರುರಾಯರು ಕನ್ನಡದಲ್ಲಿಯೂ ಅನೇಕ ಕೃತಿಗಳನ್ನು ರಚಿಸಿದ್ದಾರೆ ಎನ್ನಲಾಗಿದೆ. ಆದರೆ, ಈವರೆಗೆ ದೊರೆತಿರುವುದು ‘ಇಂದು ಎನಗೆ ಗೋವಿಂದ’ ಎಂಬ ಕೃತಿರತ್ನ ಮಾತ್ರ.
ಗುರುರಾಯರ ಕಾಲ ಕಾಲ ಕ್ರಿ.ಶ 1595-1671. ಗುರುರಾಯರು ಸಶರೀರದೊಂದಿಗೆ ಬೃಂದಾವನಸ್ಥರಾಗಿ ಮೂರೂವರೆವಶತಮಾನಗಳಿಗೂ ಹೆಚ್ಚು ಕಾಲ ಕಳೆದಿದೆ. ಕಲಿಯುಗದ ಕಾಮಧೇನು ಗುರುರಾಯರು ಬೃಂದಾವನದಲ್ಲಿಯೇ ಇದ್ದು ಸರ್ವರನ್ನೂ ಸಲಹುತ್ತಾರೆ ಎಂಬ ನಂಬಿಕೆ ಅವರ ಭಕ್ತರದು. ರಾಯರು ಬೃಂದಾವನವನ್ನು ಪ್ರವೇಶಿಸುವ ಮೊದಲು ತಾವು ಒಟ್ಟು 700 ವರ್ಷಗಳ ಕಾಲ ಸಶರೀರದೊಂದಿಗೆ ಬೃಂದಾವನದಲ್ಲಿದ್ದು, ಭಕ್ತರ ಸಂಕಷ್ಟ ಪರಿಹರಿಸುವುದಾಗಿ ವಚನವಿತ್ತಿದ್ದರಂತೆ.ಗುರು ರಾಘವೇಂದ್ರರನ್ನು, ಭಕ್ತ ಶ್ರೇಷ್ಠ ಪರಂಪರೆಗೆ ಸೇರಿದ ಪೌರಾಣಿಕ ಪ್ರಸಿದ್ಧ ಭಕ್ತ ವೃಂದಕ್ಕೆ ಸೇರಿದ ಪ್ರಹ್ಲಾದ ಪುನರಾವತಾರ ಎಂಬ ಚಿಂತನೆ ಕೂಡಾ ಜನಮನದಲ್ಲಿದೆ. ಹಲವಾರು ಪವಾಡ ಪ್ರಧಾನ ಚಿಂತನೆಗಳ ಸುತ್ತ ಕೂಡಾ ರಾಯರ ಬದುಕು ಪ್ರಸಿದ್ಧಗೊಂಡಿದೆ. ಗುರು ಪರಂಪರೆಯಲ್ಲಿ ಮೂಡಿ ಬಂದ ಆಚಾರ್ಯರಲ್ಲಿ ರಾಘವೇಂದ್ರ ಸ್ವಾಮಿಗಳಿಗೆ ಇರುವ ಅಸಂಖ್ಯಾತ ದೇವಸ್ಥಾನಗಳು ಅವರ ಕುರಿತಾದ ಭಕ್ತಿ ಶ್ರದ್ಧೆಗಳಿಗೆ ಸಾಕ್ಷಿ ಎಂಬಂತಿವೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: