ಬೆಂಗಳೂರು ಜುಲೈ 12: “ರಾಜ್ಯದ ಬರಹಗಾರರು, ಚಿಂತಕರು ಮತ್ತು ವಿರೋಧ ಪಕ್ಷಗಳ ಮುಖಂಡರುಗಳಿಗೆ ಬರುತ್ತಿರುವ ಜೀವ ಬೆದರಿಕೆ ಕರೆ ಹಾಗೂ ಪತ್ರಗಳನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸಬಾರದು” ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಂಗಳವಾರ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಸಿರುವ ಅವರು, “ರಾಜ್ಯದ ಬರಹಗಾರರು, ಚಿಂತಕರು ಮತ್ತು ವಿರೋಧ ಪಕ್ಷದ ನಾಯಕರುಗಳಿಗೆ ಪದೇ ಪದೇ ಜೀವ ಬೆದರಿಕೆಯ ಪತ್ರಗಳನ್ನು ದಾವಣಗೆರೆ, ಭದ್ರಾವತಿ, ಅಜ್ಜಂಪುರ ಮುಂತಾದ ಊರುಗಳಿಂದ ಪೋಸ್ಟ್ ಮಾಡಲಾಗುತ್ತಿದೆ” ಎಂದರು.
ಕಾದಂಬರಿಕಾರರು ಮತ್ತು ಸಾಹಿತಿಗಳಾದ ಕುಂ. ವೀರಭದ್ರಪ್ಪನವರಿಗೆ 6 ಪತ್ರ, ಬಂಜಗೆರೆ ಜಯಪ್ರಕಾಶ್ ಅವರಿಗೆ 5 ಪತ್ರ, ಮಾಜಿ ಸಚಿವೆ ಬಿ. ಟಿ. ಲಲಿತಾ ನಾಯಕ್, ಬಿ. ಎಲ್. ವೇಣು, ಚಂದ್ರಶೇಖರ್ ತಾಳ್ಯ ಅವರಿಗೆ ತಲಾ 2 ಪತ್ರ, ಎಸ್. ಜಿ. ಸಿದ್ಧರಾಮಯ್ಯ ಮತ್ತು ವಸುಂಧರ ಭೂಪತಿ ಅವರುಗಳಿಗೆ ಒಂದೊಂದು ಬೆದರಿಕೆ ಪತ್ರಗಳನ್ನು ಬರೆಯಲಾಗಿದೆ.
ಸಂವಿಧಾನದ ಆಶಯ ರಕ್ಷಿಸುವವರ ಪರ ನಿಲ್ಲಬೇಕುಇವರುಗಳೆಲ್ಲ ಪ್ರಜಾತಾಂತ್ರಿಕ ಮೌಲ್ಯಗಳನ್ನು, ಸಂವಿಧಾನದ ಆಶಯಗಳನ್ನು ರಕ್ಷಿಸುವ ಸಲುವಾಗಿ ಹೋರಾಡುತ್ತಿದ್ದಾರೆ. ಹೀಗಾಗಿ ಹಲವು ಬಾರಿ ಆಡಳಿತಾರೂಢ ಸರ್ಕಾರದ ವಿರುದ್ಧ ಮಾತನಾಡಲೇಬೇಕಾಗುತ್ತದೆ. ಇಷ್ಟು ಮಾತ್ರಕ್ಕೆ ಅಭಿಪ್ರಾಯ, ಹೇಳಿಕೆಗಳನ್ನು ಸಹಿಸದ ಕಿಡಿಗೇಡಿಗಳು ಜೀವ ಬೆದರಿಕೆಗಳನ್ನು ಒಡ್ಡುವ ಹೀನ ಕೆಲಸ ಮಾಡುತ್ತಿದ್ದಾರೆ. ಅನೇಕ ಸಾರಿ ನನ್ನ ಸೋಷಿಯಲ್ ಮೀಡಿಯಾ ಖಾತೆಗಳಿಗೂ ಬಂದು ಹೀನ ಮನೋವೃತ್ತಿ ತೋರುವವರೂ ಇದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಡಿಜಿ ಜತೆಗೆ ಬೆದರಿಕೆಗಳ ಕುರಿತು ಚರ್ಚೆ
ನನಗೂ (ಸಿದ್ದರಾಮಯ್ಯ) ಹಲವು ಬೆದರಿಕೆ ಪತ್ರಗಳು ಬಂದಿವೆ. ಸ್ವತಃ ರಾಜ್ಯ ಪೊಲೀಸ್ ಮಹಾ ನಿರ್ದೇಶಕ (ಡಿಜಿ) ಅವರೊಂದಿಗೆ ಬೆದರಿಕೆ ಕರೆ, ಪತ್ರಗಳ ಕುರಿತು ಮಾತನಾಡಿದ್ದೆ. ಇತ್ತೀಚೆಗೆ ಟಿವಿಯೊಂದರಲ್ಲಿ ವೀರೇಶ್ ಎಂಬಾತ ಕೆಪಿಸಿಸಿ ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್ ಮತ್ತು ನನಗೆ ಗುಂಡು ಹಾರಿಸಬೇಕೆಂದು ಹೇಳಿಕೆ ಕೊಟ್ಟಿದ್ದ. ಈ ಬೆದರಿಕೆಯ ಹೇಳಿಕೆ ಹಾಗೂ ಪತ್ರಗಳ ಕುರಿತು ದೂರು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಇಷ್ಟಾದರೂ ರಾಜ್ಯ ಸರ್ಕಾರ ಇದುವರೆಗೆ ಎಫ್ಐಆರ್ ದಾಖಲಿಸಿಲ್ಲ. ಇದೇ ವಿಷಯಕ್ಕೆ ಹಲವು ಬಾರಿ ದೂರು ದಾಖಲಿಸಿದರೂ ಎಫ್ಐಆರ್ ಮಾಡಿ ತನಿಖೆ ನಡೆಸದಿರುವುದು ಸರ್ಕಾರದ ಬೇಜವಾಬ್ದಾರಿಯುತವಾದ ನಡವಳಿಕೆಯೇ ಸರಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ನಾಡಿನ ಬರಹಗಾರಗಾರರು, ಚಿಂತಕರುಗಳಿಗೆ ಬಹಿರಂಗವಾಗಿ ಜೀವ ಬೆದರಿಕೆ ಪತ್ರಗಳನ್ನು ಬರೆದರೂ ಸರ್ಕಾರ ಸುಮ್ಮನಿದೆಯೆಂದರೆ ಭಿನ್ನಮತ ಮತ್ತು ಭಿನ್ನ ಧ್ವನಿಗಳನ್ನು ದಮನಿಸಲು ಪ್ರಯತ್ನಿಸಲಾಗುತ್ತಿದೆ ಅಥವಾ ಪೊಲೀಸ್ ವ್ಯವಸ್ಥೆ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದರ್ಥ.
ನಿಷ್ಕ್ರಿಯವಾದ ಸರ್ಕಾರ
ಅತ್ಯಂತ ಆಧುನಿಕ ವ್ಯವಸ್ಥೆ ಇದ್ದರೂ ದುರುಳರನ್ನು ಪತ್ತೆ ಹಚ್ಚದೆ ಸರ್ಕಾರ ನಿಷ್ಕ್ರಿಯವಾಗಿದೆ. ಈಗಾಗಲೇ ನಾಡಿನ ಪ್ರಖ್ಯಾತ ಚಿಂತಕರು ಹಾಗೂ ಬಸವತತ್ವದ ಅನುಯಾಯಿಗಳಾಗಿದ್ದ ಡಾ. ಎಂ. ಎಂ ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ ಅವರನ್ನು ಇದೇ ಗೋಡ್ಸೆ ಸಂತತಿಯವರು ಹಾಗೂ ಮನು ಸಂಸ್ಕೃತಿಯ ಪ್ರತಿಪಾದಕರುಗಳು ಗುಂಡಿಟ್ಟು ಕೊಂದರು. ಕೊಲೆಗಾರರಲ್ಲಿ ಬಹುತೇಕರು ಬಿಜೆಪಿಯನ್ನು ಬೆಂಬಲಿಸುವ ಸನಾತನ ಸಂಸ್ಕೃತಿಯೆಂಬ ಸಂಘಟನೆಯ ಸದಸ್ಯರುಗಳಾಗಿದ್ದಾರೆಂಬ ಮಾಹಿತಿ ಇದೆ. ಈಗಷ್ಟೇ ಆ ಇಬ್ಬರು ಹುತಾತ್ಮ ಚಿಂತಕರ ವಿಚಾರಣೆ ಪ್ರಾರಂಭವಾಗಿದೆ. ಈ ಪ್ರಕರಣಗಳನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸಬೇಕೆಂದು ಒತ್ತಾಯಿಸುತ್ತೇನೆ.
ಕಾನೂನು ಸುವ್ಯವಸ್ಥೆ ಕುಸಿಯುತ್ತಿದೆ
‘ಸರ್ವಜನಾಂಗದ ಶಾಂತಿಯ ತೋಟ’ ಎಂದು ಹೆಸರಾದ ಕನ್ನಡ ನಾಡಿನಲ್ಲಿ ಸಮರ್ಥವಾಗಿ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಭಾಯಿಸಬೇಕಾದ ತುರ್ತು ಅಗತ್ಯವಿದೆ. ಯಾಕೆಂದರೆ ನಾಡಿನಲ್ಲಿ ಪದೇ ಪದೇ ಕಾನೂನು ಸುವ್ಯವಸ್ಥೆ ಕುಸಿದು ಬೀಳುತ್ತಿದೆ ಎಂದು ದೂರಿದರು.
ಇನ್ನು ಮೇಲಾದರೂ ಸರ್ಕಾರ ಕ್ರಿಯಾಶೀಲವಾಗಬೇಕು. ಬೆದರಿಕೆ ಪತ್ರಗಳನ್ನು ಬರೆಯುತ್ತಿರುವ ದುರುಳರನ್ನು ಕೂಡಲೇ ಪತ್ತೆ ಹಚ್ಚಿ ತಕ್ಷಣವೇ ಕಠಿಣ ಶಿಕ್ಷೆ ವಿಧಿಸಿ ಪ್ರಜಾತಾಂತ್ರಿಕ ಮೌಲ್ಯಗಳನ್ನು ರಕ್ಷಿಸಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: