ಕಳೆದ ಹಲವಾರು ವರ್ಷಗಳಲ್ಲಿ ತಂಡವೆಂದರೆ ಹೀಗಿರಬೇಕು ಎಂದು ಭಾರತ ಕ್ರಿಕೆಟ್ ತಂಡದತ್ತ ಕೈ ಮಾಡಿ ತೋರಿಸುತ್ತಿದ್ದ ಹಲವಾರು ಕ್ರಿಕೆಟ್ ಪ್ರಿಯರು ಇದೀಗ ಹೇಗಿದ್ದ ಟೀಮ್ ಇಂಡಿಯಾ ಹೇಗಾಗಿ ಹೋಯ್ತು ಎಂದು ಬೇಸರವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಹೌದು, ಟೀಮ್ ಇಂಡಿಯಾ ಮೊದಲಿದ್ದ ಹಾಗೆ ಈಗ ಇಲ್ಲ ಎಂಬುದು ಪ್ರತಿಯೊಬ್ಬ ಕ್ರಿಕೆಟ್ ಅನುಯಾಯಿಗೂ ಕೂಡ ತಿಳಿದಿರುವ ವಿಷಯವೇ.
ಈ ಹಿಂದಿನಿಂದಲೂ ಟೀಮ್ ಇಂಡಿಯಾ ಆಟಗಾರರು ಮತ್ತು ಬಿಸಿಸಿಐ ನಡುವೆ ಎಲ್ಲವೂ ಸರಿಯಿಲ್ಲ ಮನಸ್ತಾಪಗಳಿವೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಹಿಂದೆ ಸಾಕಷ್ಟು ಕ್ರಿಕೆಟಿಗರು ಬಿಸಿಸಿಐ ಆಟಗಾರರ ಜೊತೆ ಯಾವುದೇ ಮಾಹಿತಿಗಳನ್ನು ಮುಕ್ತವಾಗಿ ಹಂಚಿಕೊಳ್ಳುವುದಿಲ್ಲ ಎಂಬ ಆರೋಪವನ್ನು ಕೂಡ ಮಾಡಿದ್ದರು. ಆದರೆ ಇದ್ಯಾವುದೂ ನಿಜವಲ್ಲ ಬಿಸಿಸಿಐ ಆಟಗಾರರ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿದೆ, ಎಲ್ಲಾ ಮಾಹಿತಿಗಳನ್ನು ಕೂಡ ಕಾಲಕಾಲಕ್ಕೆ ಹಂಚಿಕೊಳ್ಳುತ್ತಿದೆ ಎಂದು ಬಿಸಿಸಿಐ ತನ್ನ ವಿರುದ್ಧ ಇದ್ದ ಎಲ್ಲಾ ಆರೋಪಗಳನ್ನು ತಳ್ಳಿಹಾಕಿತ್ತು.
ಇನ್ನು ಯಾವುದೇ ಕ್ರಿಕೆಟರ್ ಕೂಡಾ ಬಿಸಿಸಿಐ ವಿರುದ್ಧ ಬಹಿರಂಗವಾಗಿ ಹೇಳಿಕೆಗಳನ್ನು ನೀಡುವ ಸಾಹಸಕ್ಕೆ ಕೈಹಾಕಿರಲಿಲ್ಲ. ಆದರೆ ಅಗ್ರೆಸಿವ್ ಆಟಗಾರ ಎಂಬ ಖ್ಯಾತಿಯನ್ನು ಹೊಂದಿರುವ ವಿರಾಟ್ ಕೊಹ್ಲಿ ಮಾತ್ರ ಬಿಸಿಸಿಐ ವಿರುದ್ಧ ಹೇಳಿಕೆಗಳನ್ನು ನೀಡುವುದರ ಮೂಲಕ ಆಟಗಾರರು ಮತ್ತು ಬಿಸಿಸಿಐ ನಡುವಿನ ಸಂಬಂಧ ಸರಿ ಇಲ್ಲ ಎಂಬುದನ್ನು ಬಹಿರಂಗಪಡಿಸಿಯೇ ಬಿಟ್ಟರು. ಹೌದು, ಕಳೆದ ವರ್ಷ ಬಿಸಿಸಿಐ ವಿರಾಟ್ ಕೊಹ್ಲಿಯನ್ನು ಭಾರತ ಏಕದಿನ ತಂಡದ ನಾಯಕತ್ವದಿಂದ ತೆಗೆದು ಹಾಕಿದ ನಂತರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ ತಾನು ನಾಯಕತ್ವಕ್ಕೆ ರಾಜಿನಾಮೆ ನೀಡಲು ಮುಂದಾದಾಗ ಬಿಸಿಸಿಐನಿಂದ ಯಾವುದೇ ರೀತಿಯ ವಿರೋಧ ವ್ಯಕ್ತವಾಗಲಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದರು.
ಆದರೆ ಇದಕ್ಕೂ ಮುನ್ನ ಮಾತನಾಡಿದ್ದ ಸೌರವ್ ಗಂಗೂಲಿ ವಿರಾಟ್ ಕೊಹ್ಲಿ ರಾಜೀನಾಮೆ ನೀಡಲು ಮುಂದಾದಾಗ ಸ್ವತಃ ನಾನೇ ವೈಯಕ್ತಿಕವಾಗಿ ರಾಜೀನಾಮೆ ನೀಡಬೇಡ ಎಂದು ಕೊಹ್ಲಿ ಬಳಿ ಮನವಿ ಮಾಡಿಕೊಂಡಿದ್ದೆ ಎಂಬ ಹೇಳಿಕೆಯನ್ನು ನೀಡಿದ್ದರು. ಆದರೆ ವಿರಾಟ್ ಕೊಹ್ಲಿ ಹೇಳಿಕೆ ನಂತರ ಸೌರವ್ ಗಂಗೂಲಿ ನೀಡಿದ ಹೇಳಿಕೆ ಸುಳ್ಳು ಎಂಬ ಅಭಿಪ್ರಾಯಗಳು ವ್ಯಕ್ತವಾದವು. ಹೀಗೆ ನೇರವಾದ ಹೇಳಿಕೆಗಳನ್ನು ನೀಡುವುದರ ಮೂಲಕ ಬಿಸಿಸಿಐಗೆ ಟಾಂಗ್ ಕೊಟ್ಟ ವಿರಾಟ್ ಕೊಹ್ಲಿ ಇತ್ತೀಚೆಗಷ್ಟೇ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. ಬಿಸಿಸಿಐ ಮತ್ತು ವಿರಾಟ್ ಕೊಹ್ಲಿ ನಡುವಿನ ಹಾವು ಮುಂಗುಸಿ ಆಟ ಇಂದಿಗೂ ಸಹ ಮುಂದುವರೆದಿದ್ದು, ಈ ಕುರಿತಾಗಿ 1983ರ ವಿಶ್ವಕಪ್ ಹೀರೋ ಕಪಿಲ್ ದೇವ್ ಮಾತನಾಡಿದ್ದು ಈ ಕೆಳಕಂಡಂತೆ ಹೇಳಿಕೆಗಳನ್ನು ನೀಡಿದ್ದಾರೆ.
ಇಬ್ಬರೂ ಮಾತಾಡಿಕೊಂಡು ಸಮಸ್ಯೆ ಬಗೆಹರಿಸಿಕೊಳ್ಳಿವಿರಾಟ್ ಕೊಹ್ಲಿ ಮತ್ತು ಬಿಸಿಸಿಐ ನಡುವಿನ ಬಿರುಕಿನ ಕುರಿತು ಮಾತನಾಡಿರುವ ಕಪಿಲ್ ದೇವ್ ಇಬ್ಬರೂ ಸಹ ತಮ್ಮ ನಡುವೆ ಇರುವ ಬಿರುಕನ್ನು ಆದಷ್ಟು ಬೇಗ ಸರಿಪಡಿಸಿಕೊಳ್ಳಬೇಕು ಎಂದಿದ್ದಾರೆ. ಮೊಬೈಲ್ ತೆಗೆದುಕೊಂಡು ಇಬ್ಬರು ಸಹ ಪರಸ್ಪರ ಮಾತನಾಡಿ ಬಗೆಹರಿಸಿಕೊಳ್ಳಿ, ನಾನು ಎಂಬುದನ್ನು ಪಕ್ಕಕ್ಕಿಟ್ಟು ದೇಶವನ್ನು ಮುಂದೆ ಇಟ್ಟು ಯೋಚಿಸಿ ಎಂದು ಕಪಿಲ್ ದೇವ್ ಸಲಹೆ ನೀಡಿದ್ದಾರೆ.
ಕೊಹ್ಲಿ ನಾಯಕತ್ವ ಬಿಟ್ಟದ್ದರ ಕುರಿತು ಕಪಿಲ್ ದೇವ್ ಹೇಳಿದ್ದಿಷ್ಟು
ಇನ್ನು ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವವನ್ನು ತ್ಯಜಿಸಿದ ಕುರಿತು ಮಾತನಾಡಿದ ಕಪಿಲ್ ದೇವ್ ವಿರಾಟ್ ಕೊಹ್ಲಿ ಏನಾದರೂ ಬಿಸಿಸಿಐ ಜೊತೆಗಿನ ಮನಸ್ತಾಪದಿಂದ ಭಾರತ ಟೆಸ್ಟ್ ತಂಡದ ನಾಯಕತ್ವಕ್ಕೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ ಎಂದಾದರೆ ಅದರ ಕುರಿತು ನಾನು ಏನನ್ನೂ ಹೇಳಲು ಇಚ್ಛಿಸುವುದಿಲ್ಲ ಎಂದು ಬೇಸರದಿಂದ ಪ್ರತಿಕ್ರಿಯಿಸಿದ್ದಾರೆ. ನಾಯಕನಾದ ಮೇಲೆ ಕೆಲವೊಮ್ಮೆ ಒಂದೊಂದು ನಮಗೆ ಲಭಿಸಲಿದೆ, ಒಂದೊಂದು ಬಾರಿ ಲಭಿಸುವುದಿಲ್ಲ ಎಂದು ಕಪಿಲ್ ದೇವ್ ಹೇಳಿಕೆ ನೀಡಿದ್ದಾರೆ.
ವಿರಾಟ್ ಕೊಹ್ಲಿ ಓರ್ವ ಅತ್ಯದ್ಭುತ ಆಟಗಾರ
ಇನ್ನೂ ಮುಂದುವರೆದು ವಿರಾಟ್ ಕೊಹ್ಲಿ ಪ್ರದರ್ಶನದ ಕುರಿತು ಮಾತನಾಡಿರುವ ಕಪಿಲ್ ದೇವ್ ಆತ ಓರ್ವ ಅತ್ಯದ್ಭುತ ಆಟಗಾರ ಎಂದು ಹೊಗಳಿದ್ದಾರೆ. ವಿರಾಟ್ ಕೊಹ್ಲಿ ಇನ್ನೂ ಹೆಚ್ಚಿನ ಪಂದ್ಯಗಳಲ್ಲಿ ಭಾಗವಹಿಸಿ ಹೆಚ್ಚು ರನ್ ಗಳಿಸುವುದನ್ನು ನೋಡಲು ಇಚ್ಛಿಸುತ್ತೇನೆ, ಅದರಲ್ಲಿಯೂ ಟೆಸ್ಟ್ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿಯ ಅಮೋಘ ಆಟವನ್ನು ನೋಡಲು ನಾನು ಸದಾ ಇಚ್ಛಿಸುತ್ತೇನೆ ಎಂದು ಕಪಿಲ್ ದೇವ್ ಹೇಳಿಕೊಂಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada