ಶ್ರೀ ಕೃಷ್ಣನ ಭೇಟಿ. ಮಾರ್ಕಂಡೇಯ ಮುನಿಗಳಿಂದ ಸೃಷ್ಟಿಯ ಆರಂಭದ ವರ್ಣನೆ.
ಪಾಂಡವರಿದ್ದ ಕಾಡು ಬರಿದಾಯಿತು. ಮತ್ತೆ ಕಾಮ್ಯಕವನಕ್ಕೆ ಬಂದರು. ಧರ್ಮಜನಿಗೆ ಶುಭಶಕುನಗಳಾದವು. ಅದಕ್ಕೆ ಪ್ರತಿಫಲವೋ ಎಂಬಂತೆ ಕೃಷ್ಣನ ಆಗಮನವಾಯಿತು. ಎಲ್ಲರೂ ಸಂತಸಪಟ್ಟರು. ಧರ್ಮಜನು ಕೃಷ್ಣನಿಗೆ ತಮ್ಮ ವನವಾಸಕಾಲದ ಬವಣೆಗಳನ್ನು, ಅರ್ಜುನನು ಪಾಶುಪತ ಗೆಲಿದದ್ದನ್ನು, ಇಂದ್ರನ ಲೋಕದಲ್ಲಿ ಅವನಿಗಾದ ಊರ್ವಶಿಯ ಶಾಪವನ್ನು, ಇಂದ್ರನ ಶತ್ರುಗಳನ್ನು ಸಂಹರಿಸಿದ ರೀತಿಯನ್ನು ಹೇಳಿದನು. ಭೀಮನ ಸಾಹಸಗಳನ್ನೂ ಹೇಳಿದನು.
ಆ ಸಮಯದಲ್ಲಿ ನಾರದರು ಮತ್ತು ಮಾರ್ಕಂಡೇಯ ಮುನಿಗಳು ಬಂದು ಇಳಿದರು. ಕೃಷ್ಣನನ್ನು ಕಂಡು ಸಂತಸದಿಂದ ಸ್ತುತಿಸಿದರು. ಇವನೇ ನಾರಾಯಣನು. ಇವನಿಂದ ನನಗೆ ಅಪಮೃತ್ಯು ತಪ್ಪಿತು ಎಂದು ನುಡಿದ ಮಾರ್ಕಂಡೇಯ ಋಷಿಯು ಸೃಷ್ಟಿಯು ಉಂಟಾದ ಬಗೆಯನ್ನು ವಿವರಿಸಿದನು.
ಪ್ರಳಯ ಕಾಲದಲ್ಲಿ ಎಲ್ಲವೂ ಜಲಮಯವಾದಾಗ ವಿಷ್ಣುವು ತನ್ನ ಲೀಲೆಯನ್ನು ತೋರಿಸಲು ಆಲದೆಲೆಯ ಮೇಲೆ ಪವಡಿಸಿದ್ದನು. ನಾನು ನನ್ನನ್ನು ರಕ್ಷಿಸೆಂದು ಮೊರೆಯಿಟ್ಟಾಗ ಪೊರೆದನು. ಇವನಿಂದ ವಿಧಾತನು ಅವತರಿಸಿದನು. ಹೊಕ್ಕಳಿನಿಂದ ಬಂದ ಕಾರಣ ನಳಿನಸಂಭವನೆಂಬ ಹೆಸರಾಯಿತು. ಹಾಗೆಯೇ ತ್ರಿಮೂರ್ತಿಗಳು ಸೃಷ್ಟಿ, ಸ್ಥಿತಿ ಮತ್ತು ಲಯಗಳ ಜವಾಬ್ದಾರಿ ಹೊತ್ತರು. ಸತ್ತ್ವ, ರಜ ಮತ್ತು ತಮಸ್ಸುಗಳಿಂದ ಜಗತ್ತಿನ ಉದಯವಾಯಿತು. ಹಲವಾರು ಋಷಿಮುನಿಗಳಿಂದ, ಅಗ್ನಿ ಮೊದಲಾದ ದೇವತೆಗಳಿಂದ ಇನ್ನಷ್ಟು ಬೆಳೆಯಿತು. ವರ್ಣಾಶ್ರಮ ಧರ್ಮವು ಜಾರಿಯಾಯಿತು. ಯುಗಗಳಲ್ಲಿ ಧರ್ಮದ ಸ್ಥಾನವು ನಿರ್ಧಾರವಾಯಿತು. ಆಯಾ ಯುಗಗಳಲ್ಲಿ ರಾಜರುಗಳು ಮತ್ತು ಇತರ ವರ್ಣಗಳವರು ಇದ್ದ ರೀತಿಯನ್ನು ವಿವರಿಸಿದನು. ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಯತಿ ಮುಂತಾದ ಧರ್ಮಗಳನ್ನು ವಿವರಿಸುತ್ತ ಮಾರ್ಕಂಡೇಯನು ಧರ್ಮವ್ಯಾಧನ ಕಥೆಯನ್ನು ಹೇಳುವೆನೆಂದನು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:https://plಇay.google.com/store/apps/details?id=com.speed.newskannada
Please follow and like us: