ಚಿಕ್ಕಬಳ್ಳಾಪುರದಲ್ಲಿ ನಡೆಯುತ್ತಿರುವ ಚಿಕ್ಕಬಳ್ಳಾಪುರ ಉತ್ಸವ ಕಾರ್ಯಕ್ರಮ ದಿನದಿಂದ ದಿನಕ್ಕೆ ವಿವಾದಗಳನ್ನು ಸೃಷ್ಟಿ ಮಾಡಿಕೊಳ್ಳುತ್ತಾ ಸಾಗಿದೆ. ರಾಜ್ಯ ಸರ್ಕಾರದ ಪ್ರಾಯೋಜಕತ್ವ ಇರುವ ಈ ಕಾರ್ಯಕ್ರಮಕ್ಕೆ ತೆಲುಗು ರಾಜ್ಯದ ನಟರು ಹಾಗೂ ಕಲಾವಿದರನ್ನು ಆಹ್ವಾನಿಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರು ಕಿಡಿಕಾರಿದ್ದರು.
ಇದು ಕರ್ನಾಟಕದ ಕಾರ್ಯಕ್ರಮವೇ ಅಥವಾ ತೆಲುಗು ರಾಜ್ಯದ ಕಾರ್ಯಕ್ರಮವೇ ಎಂದು ಪ್ರಶ್ನೆಯನ್ನು ಇಟ್ಟಿದ್ದರು.
ಹೀಗೆ ಶುರುವಿನಲ್ಲಿಯೇ ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿದ್ದ ಈ ಕಾರ್ಯಕ್ರಮದಲ್ಲಿ ತೆಲುಗು ಹಾವಳಿ ಹೆಚ್ಚಾಗಿದೆ ಎಂದು ಪದೇ ಪದೇ ಆರೋಪಗಳು ಕೇಳಿಬರುತ್ತಿದ್ದವು. ಹೀಗೆ ಮೊದಲೇ ಕನ್ನಡಿಗರಲ್ಲಿ ಬೇಸರ ಮೂಡಿಸಿದ್ದ ಚಿಕ್ಕಬಳ್ಳಾಪುರ ಉತ್ಸವ ಕಾರ್ಯಕ್ರಮದಲ್ಲಿ ಗಾಯಕಿ ಮಂಗ್ಲಿ ನೀಡಿದ ಹೇಳಿಕೆಯೊಂದು ಇದೀಗ ಕನ್ನಡಿಗರನ್ನು ಕೆರಳಿಸಿದೆ.
ಹೌದು, ತೆಲುಗು ಗಾಯಕಿ ಮಂಗ್ಲಿ ಅವರನ್ನೂ ಸಹ ಈ ಕಾರ್ಯಕ್ರಮಕ್ಕೆ ಕರೆಸಲಾಗಿತ್ತು. ಕನ್ನಡದ ರಾಬರ್ಟ್ ಚಿತ್ರದ ತೆಲುಗು ಅವತರಣಿಕೆ ಚಿತ್ರದಲ್ಲಿನ ‘ಕಣ್ಣೆ ಅದರಿಂದಿ’ ಹಾಡಿನ ಮೂಲಕ ಫೇಮ್ ಪಡೆದುಕೊಂಡ ಮಂಗ್ಲಿ ಕರ್ನಾಟಕದಲ್ಲಿಯೂ ಖ್ಯಾತಿ ಪಡೆದಿದ್ದರು. ಅಷ್ಟೇ ಅಲ್ಲದೇ ಕನ್ನಡದಲ್ಲಿಯೂ ಹಾಡುಗಳನ್ನು ಹಾಡಿದ್ದ ಮಂಗ್ಲಿಗೆ ಕನ್ನಡದ ನಂಟಿದ್ದ ಕಾರಣಕ್ಕೆ ಈ ಕಾರ್ಯಕ್ರಮಕ್ಕೆ ಅತಿಥಿಯನ್ನಾಗಿ ಕರೆಸಲಾಗಿತ್ತು. ಆದರೆ ಕಾರ್ಯಕ್ರಮದಲ್ಲಿ ಮಂಗ್ಲಿ ಮೊದಲಿಗೆ ಕನ್ನಡ ಮಾತನಾಡದೇ ತೆಲುಗು ಸಾಕು ಎಂದು ಹೇಳಿಕೆ ನೀಡುವುದರ ಮೂಲಕ ಕನ್ನಡಿಗರು ಕೋಪಗೊಳ್ಳುವಂತೆ ಮಾಡಿದ್ದಾರೆ.ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಬಂದ ಮಂಗ್ಲಿ ಅವರನ್ನು ನಿರೂಪಕಿ ಅನುಶ್ರೀ ಸ್ವಾಗತಿಸಿದರು ಹಾಗೂ ನೆರೆದಿದ್ದ ಚಿಕ್ಕಬಳ್ಳಾಪುರ ಜನತೆಯ ಬಗ್ಗೆ ಮಾತನಾಡಲು ಹೇಳಿದರು. ಈ ವೇಳೆ ಮೈಕ್ ಹಿಡಿದ ಮಂಗ್ಲಿ ‘ಅಂದರಿಕಿ ನಮಸ್ಕಾರಂ’ ಎಂದು ತೆಲುಗಿನಲ್ಲಿ ಹೇಳಿದರು. ಇನ್ನು ಕನ್ನಡಿಗರೂ ಸಹ ಇದ್ದಾರೆ, ಕನ್ನಡದಲ್ಲಿ ಎಲ್ಲರಿಗೂ ನಮಸ್ಕಾರ ಎಂದು ಹೇಳಿ ಎಂದಾಗ ಪ್ರತಿಕ್ರಿಯಿಸಿದ ಮಂಗ್ಲಿ ‘ಪಕ್ಕದಲ್ಲಿಯೇ ಅನಂತಪುರ ಇದೆ ಅಲ್ವಾ, ಎಲ್ಲರಿಗೂ ತೆಲುಗು ಬರುತ್ತೆ ಎಂದುಕೊಳ್ತೇನೆ’ ಎಂದು ತೆಲುಗಿನಲ್ಲಿಯೇ ಹೇಳಿಕೆ ನೀಡಿದರು. ಸದ್ಯ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಂಗ್ಲಿ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ.ಹೀಗೆ ಮಂಗ್ಲಿ ಇಲ್ಲಿನ ಜನರಿಗೆ ತೆಲುಗು ಬರುತ್ತೆ ಎಂದಾಗ ಸುಮ್ಮನಾಗದ ಅನುಶ್ರೀ ಮತ್ತೆ ಕನ್ನಡಿಗರೂ ಸಹ ಇದ್ದಾರೆ ಕನ್ನಡದಲ್ಲಿ ಹೇಳಿ ಎಂದರು. ಹೀಗೆ ಎರಡನೇ ಬಾರಿಗೆ ಒತ್ತಾಯಿಸಿದ್ದಕ್ಕೆ ಕನ್ನಡ ಬಳಸಿದ ಮಂಗ್ಲಿ ‘ಕನ್ನಡದವರಿಗೆ ನಮಸ್ಕಾರ’ ಎಂಬುದನ್ನೂ ಸಹ ತೆಲುಗಿನಲ್ಲಿ ‘ಕನ್ನಡವಾಳಕಿ ನಮಸ್ಕಾರ’ ಎಂದು ಹೇಳಿದರು. ಇನ್ನು ಮಂಗ್ಲಿ ವಿಡಿಯೊವನ್ನು ಹಂಚಿಕೊಳ್ಳುತ್ತಿರುವ ಕನ್ನಡಿಗರು ಸಾಮಾಜಿಕ ಜಾಲತಾಣದಲ್ಲಿ ದುರಹಂಕಾರಿ ಎಂದು ಬರೆದುಕೊಂಡು ಮಂಗ್ಲಿ ಹೇಳಿಕೆ ವಿರುದ್ಧ ಕಿಡಿಕಾರಿದ್ದಾರೆ. ಅನಂತಪುರ ಪಕ್ಕದಲ್ಲೇ ಇದೆ ಎನ್ನುವುದಾದರೆ ಅಲ್ಲಿಯೇ ಹೋಗಿ ಹಾಡನ್ನು ಹಾಡು, ಇಲ್ಲಿ ಕನ್ನಡ ಮಾತಾಡು ಎಂದು ಬರೆದುಕೊಂಡಿದ್ದಾರೆ. ಈ ರೀತಿ ದೊಡ್ಡ ಸಂಖ್ಯೆಯಲ್ಲಿಯೇ ಕನ್ನಡಿಗರು ಮಂಗ್ಲಿ ವಿರುದ್ಧ ಕಿಡಿಕಾರಿದ್ದಾರೆ. ಈ ಹಿಂದೆ ಹಲವಾರು ಬಾರಿ ಕನ್ನಡಿಗರಿಗೆ ಇಷ್ಟವಾಗಿದ್ದ ಮಂಗ್ಲಿ ಇದೊಂದು ಹೇಳಿಕೆಯಿಂದ ಇದ್ದ ಪ್ರೀತಿಯನ್ನು ಕಳೆದುಕೊಂಡಿರುವುದಂತೂ ನಿಜ.
https://play.google.com/store/apps/details?id=com.speed.newskannadaz