ಬೆಂಗಳೂರು, ಮಾರ್ಚ್ 02: ನಾಗರಿಕರ ಭಾರೀ ವಿರೋಧದ ನಂತರ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸ್ಯಾಂಕಿ ಟ್ಯಾಂಕ್ ಉದ್ದಕ್ಕೂ ಮೇಲ್ಸೇತುವೆ ನಿರ್ಮಿಸುವ ವಿವಾದಾತ್ಮಕ ಯೋಜನೆಗೆ ವಿರಾಮ ನೀಡಿದೆ. ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರದ (ಬಿಎಂಎಲ್ಟಿಎ) ಅನುಮೋದನೆ ಪಡೆಯುವವರೆಗೆ ಮೇಲ್ಸೇತುವೆ ನಿರ್ಮಾಣ ತಡೆಹಿಡಿಯುವುದಾಗಿ ಭರವಸೆ ನೀಡಿದೆ.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ಬುಧವಾರ ಭೇಟಿ ಮಾಡಿದ ಸಿಟಿಜನ್ಸ್ ಫಾರ್ ಸ್ಯಾಂಕಿ ಸದಸ್ಯರಿಗೆ ಈ ಭರವಸೆ ನೀಡಲಾಗಿದೆ. ಅರಣ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಕಚೇರಿಯಲ್ಲಿ ಮರಗಳ ತೆರವಿಗೆ ಅನುಮೋದನೆ ಕೋರುವ ಕಡತ ಬಾಕಿ ಉಳಿದಿದ್ದು, ಅದನ್ನು ಮುಂದುವರಿಸದಂತೆ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
“30 ಮರಗಳನ್ನು ತೆರವು ಮಾಡುವ ಪ್ರಸ್ತಾವನೆ ಇದೆ. ನಾವು ಇನ್ನೂ ವಿಸ್ತರಣೆ ಮಾಡುವುದನ್ನು ಪರಿಶೀಲಿಸಿ, ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಿದ್ದೇವೆ. ಆದರೆ, ಅದನ್ನು ತಡೆಹಿಡಿಯುವಂತೆ ಮುಖ್ಯ ಆಯುಕ್ತರು ಆದೇಶ ನೀಡಿದ್ದಾರೆ” ಎಂದು ರಣ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಸರೀನಾ ಸಿಕ್ಕಲಿಗಾರ್ ಮಾಹಿತಿ ನೀಡಿದ್ದಾರೆ.
ಬುಧವಾರ ಗಿರಿನಾಥ್ ಅವರನ್ನು ಭೇಟಿ ಮಾಡಿದ ಮಲ್ಲೇಶ್ವರಂ, ಸದಾಶಿವನಗರ ಮತ್ತು ವೈಯಾಲಿಕಾವಲ್ ನಿವಾಸಿಗಳ ಸಾಮೂಹಿಕ ಸಿಟಿಜನ್ಸ್ ಫಾರ್ ಸ್ಯಾಂಕಿ ಸದಸ್ಯರು ವೃಕ್ಷ ಫೌಂಡೇಶನ್ ಮತ್ತು ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯ ಸಿದ್ಧಪಡಿಸಿದ ಪರಿಸರ ಪ್ರಭಾವದ ಮೌಲ್ಯಮಾಪನ (ಇಐಎ) ವರದಿಯನ್ನೂ ಸಲ್ಲಿಸಿದರು. ಸ್ಯಾಂಕಿ ಮೇಲ್ಸೇತುವೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
“ನಗರದ ಹಸಿರನ್ನು ಕಾಪಾಡಲು ನಾಗರಿಕರು ಮತ್ತು ಸರ್ಕಾರಿ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡಬೇಕೆಂಬುದು ನಮ್ಮ ಅಭೀಪ್ರಾಯ. ಈ ಮೇಲ್ಸೇತುವೆ ಮತ್ತು ರಸ್ತೆ ಅಗಲೀಕರಣ ಯೋಜನೆಯನ್ನು ಸಂಪೂರ್ಣವಾಗಿ ರದ್ದುಪಡಿಸುವವರೆಗೆ ಮತ್ತು ಸ್ಯಾಂಕಿ ಟ್ಯಾಂಕ್ ಸರೋವರವನ್ನು ಅವೈಜ್ಞಾನಿಕ ಯೋಜನೆ ಮತ್ತು ನಿರ್ಮಾಣದಿಂದ ರಕ್ಷಿಸುವವರೆಗೆ ನಾವು ನಮ್ಮ ಪ್ರಯತ್ನಗಳನ್ನು ನಿಲ್ಲಿಸುವುದಿಲ್ಲ” ಎಂದು ಸಿಟಿಜನ್ಸ್ ಫಾರ್ ಸ್ಯಾಂಕಿ ಸದಸ್ಯರಾದ ಕಿಮ್ಸುಕಾ ಹೇಳಿದ್ದಾರೆ.
ಇನ್ನು, ಬಿಎಂಎಲ್ಟಿಎ ಅಧ್ಯಕ್ಷರಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೊದಲ ಸಭೆಯನ್ನು ಕೂಡ ಕರೆದಿಲ್ಲ. ಅದಕ್ಕಿಂತ ಮುಖ್ಯವಾಗಿ, ಸರ್ಕಾರವು ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರಕ್ಕೆ ಸದಸ್ಯರನ್ನು ನೇಮಿಸಿಲ್ಲ. ಹೀಗಾಗಿ ಈ ಅರ್ಜಿಗಳ ಬಗ್ಗೆ ಹೇಗೆ ನಿರ್ಧಾರ ತೆಗೆದುಕೊಲ್ಳಬೇಕು ಎಂಬ ಬಗ್ಗೆ ಇನ್ನು ಸ್ಪಷ್ಟತೆ ಸಿಕ್ಕಿಲ್ಲ.
ವಿಧಾನಸಭಾ ಚುನಾವಣೆ ಹತ್ತಿರವಿರುವ ಕಾರಣ ಹೊಸ ಸರ್ಕಾರ ರಚನೆಯಾದ ನಂತರವೇ ಬಿಎಂಎಲ್ಟಿಎ ಪೂರ್ಣ ಸ್ವರೂಪ ಪಡೆದುಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ. ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ಅನಗತ್ಯ ವಿವಾದಗಳಿಗೆ ಕಾರಣವಾಗುವ ಹಿನ್ನೆಲೆ ಸದ್ಯಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು ಬಿಎಂಎಲ್ಟಿಎಗೆ ಸದಸ್ಯರನ್ನು ನೇಮಿಸುವ ಸಾಧ್ಯತೆಯಿಲ್ಲ. ಹೀಗಾಗಿ ಸ್ಯಾಂಕಿ ಮೇಲ್ಸೇತುವೆ ಯೋಜನೆ ಈಗಲೇ ಆರಂಭವಾಗುವ ಆತಂಕ ಸಿಟಿಜನ್ಸ್ ಫಾರ್ ಸ್ಯಾಂಕಿ ಸದಸ್ಯರಿಗಿಲ್ಲ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada