ಅವರ ಮಾತಿನ ಪ್ರಕಾರ ಏರ್ಟೆಲ್ನ ಎಲ್ಲಾ ರೀಚಾರ್ಜ್ ಪ್ಲಾನ್ಗಳೂ ಬೆಲೆ ಏರಿಕೆ ಕಾಣಬಹುದು. ಭಾರೀ ಮಟ್ಟದಲ್ಲಲ್ಲವಾದರೂ ಸ್ವಲ್ಪ ಸ್ವಲ್ಪವಾಗಿ ಏರ್ಟೆಲ್ ದರಗಳ ಏರಿಕೆಯಾಗುವ ಸಾಧ್ಯತೆ ಇದೆ.
ರಿಲಾಯನ್ಸ್ ಜಿಯೋ ಮಾರುಕಟ್ಟೆಗೆ ಕಾಲಿಡುವ ಮುಂಚೆ ಭಾರತದಲ್ಲಿ ಟೆಲಿಕಾಂ ದರಗಳು ಹೆಚ್ಚಿನ ಮಟ್ಟದಲ್ಲಿದ್ದವು. ಜಿಯೋ ಕಡಿಮೆ ಬೆಲೆಗೆ ಡಾಟಾ ಪ್ಲಾನ್ಗಳನ್ನು ಬಿಡುಗಡೆ ಮಾಡಿ ಮಾರುಕಟ್ಟೆಯಲ್ಲಿ ಅಲೆಯನ್ನೇ ಎಬ್ಬಿಸಿತ್ತು. ಏರ್ಟೆಲ್, ವೊಡಾಫೋನ್ ಐಡಿಯಾ ಕಂಪನಿಗಳೂ ಅನಿವಾರ್ಯವಾಗಿ ಬೆಲೆ ಇಳಿಕೆ ಮಾಡಿದ್ದವು. ಆಗಲೇ ಏರ್ಟೆಲ್ ಮತ್ತು ವೊಡಾಫೋನ್ ಕಂಪನಿಗಳು ನಷ್ಟದ ಹಾದಿ ತುಳಿಯತೊಡಗಿದ್ದವು. ವೊಡಾಫೋನ್ ಐಡಿಯಾ ಕಂಪನಿಯಂತೂ ಮುಚ್ಚುವ ಮಟ್ಟಕ್ಕೆ ಇಳಿದುಹೋಗಿದ್ದು ಹೌದು. ಇದೀಗ 5ಜಿ ಬಂದ ಬಳಿಕ ಜಿಯೋ ಸೇರಿದಂತೆ ಎಲ್ಲಾ ಟೆಲಿಕಾಂ ಕಂಪನಿಗಳೂ ಬೆಲೆ ಏರಿಕೆಯ ಸುಳಿವನ್ನು ನೀಡಿವೆ.
ಏರ್ಟೆಲ್ ಕಂಪನಿ ಜನವರಿ ತಿಂಗಳಲ್ಲಿ 28 ದಿನಗಳ ವ್ಯಾಲಿಡಿಟಿ ಇರುವ ಆರಂಭಿಕ ರೀಚಾರ್ಜ್ ಪ್ಲಾನ್ ಅನ್ನು ಶೇ. 57ರಷ್ಟು ಏರಿಕೆ ಮಾಡಿತ್ತು. ಇದೀಗ ಎಲ್ಲಾ ಸ್ತರದ ರೀಚಾರ್ಜ್ ಪ್ಲಾನ್ಗಳಲ್ಲೂ ಅಷ್ಟೇ ಮಟ್ಟದಲ್ಲಿ ಏರಿಕೆ ಆಗುವ ನಿರೀಕ್ಷೆ ಇದೆ.
ಭಾರತದಲ್ಲಿ ಜನರು ಯಾವ್ಯಾವುದಕ್ಕೂ ವೆಚ್ಚ ಮಾಡುತ್ತಾರೆ. ಆದರೆ, ಟೆಲಿಕಾಂ ಬೆಲೆ ಮಾತ್ರ ಏರಿಕೆ ಕಾಣದೇ ಉಳಿದುಬಿಟ್ಟಿವೆ. ಜನರು ಬೇರೆ ವಸ್ತುಗಳಿಗೆ ಮಾಡುತ್ತಿರುವ ವೆಚ್ಚಕ್ಕೆ ಹೋಲಿಸಿದರೆ ಟೆಲಿಕಾಂ ದರಗಳ ಏರಿಕೆ ಕಡಿಮೆಯೇ ಎಂದು ಏರ್ಟೆಲ್ ಬೆಲೆ ಏರಿಕೆಯ ನಿರ್ಧಾರಕ್ಕೆ ಸುನೀಲ್ ಭಾರ್ತಿ ಮಿಟ್ಟಲ್ ಕಾರಣ ಬಿಚ್ಚಿಟ್ಟಿದ್ದಾರೆ.
ಸಂಬಳಗಳು ಹೆಚ್ಚಾಗಿವೆ. ಬಾಡಿಗೆಗಳು ಹೆಚ್ಚಾಗಿವೆ. ಯಾರೂ ಕೂಡ ಬೇಸರಗೊಂಡಿಲ್ಲ. ಜನರು ಹೆಚ್ಚೂಕಡಿಮೆ ಏನನ್ನೂ ತೆರದೆಯೇ 30 ಜಿಬಿ ಬಳಸುತ್ತಿದ್ದಾರೆ. ವೊಡಾಫೋನ್ನಂತಹ ಇನ್ನೊಂದು ನಿದರ್ಶನ ಕಾಣುವುದು ಬೇಡ ಎಂದು ವರ್ಲ್ಡ್ ಮೊಬೈಲ್ ಕಾಂಗ್ರೆಸ್ ಸಭೆಯಲ್ಲಿ ಸುನೀಲ್ ಭಾರ್ತಿ ಮಿತ್ತಲ್ ಹೇಳಿದ್ದಾರೆ.
ದೇಶದಲ್ಲಿ ಒಂದು ಒಳ್ಳೆಯ ಮತ್ತು ಸುದೃಢ ಟೆಲಿಕಾಂ ಕಂಪನಿಯ ಅಗತ್ಯವಿದೆ. ಡಿಜಿಟಲ್ ಮತ್ತು ಆರ್ಥಿಕ ಪ್ರಗತಿ ಸಂಪೂರ್ಣ ಸಾಕಾರವಾಗಬೇಕೆನ್ನುವುದು ಭಾರತದ ಕನಸು. ಸರ್ಕಾರಕ್ಕೂ ಇದರ ಅರಿವಿದೆ. ಟೆಲಿಕಾಂ ಪ್ರಾಧಿಕಾರಕ್ಕೂ ಅರವಿದೆ. ಜನರಿಗೂ ಅರಿವಿದೆ ಎಂದು ಏರ್ಟೆಲ್ ಮುಖ್ಯಸ್ಥರು ಅಭಿಪ್ರಾಯಪಟ್ಟಿದ್ದಾರೆ.
ಆದಾಯ ಹೆಚ್ಚಿಸಿಕೊಳ್ಳುವತ್ತ ಏರ್ಟೆಲ್
ಜನವರಿ ತಿಂಗಳಲ್ಲಿ ಏರ್ಟೆಲ್ ಕಂಪನಿ ತನ್ನ ರೂ 99ರ ಕನಿಷ್ಠ ರೀಚಾರ್ಜ್ ಪ್ಲಾನ್ ಅನ್ನು ನಿಲ್ಲಿಸಿತ್ತು. ಈ ಪ್ಲಾನ್ನಲ್ಲಿ 200 ಎಂಬಿ ಡಾಟಾ ಹಾಗೂ ಸೆಕೆಂಡ್ಗೆ 2.5 ಪೈಸೆ ಕಾಲ್ ದರ ಒಳಗೊಳ್ಳಲಾಗಿತ್ತು. ಅದರ ಬದಲು ಕನಿಷ್ಠ ರೀಚಾರ್ಜ್ ಪ್ಲಾನ್ ಅನ್ನು 157 ರೂಗೆ ಏರಿಕೆ ಮಾಡಿತ್ತು.
ಏರ್ಟೆಲ್ ಸಂಸ್ಥೆ ತನ್ನ ಗ್ರಾಹಕರಿಂದ ಕಿರು ಅವಧಿಯ ಎಆರ್ಪಿಯು ಗುರಿಯಾಗಿ ಸರಾಸರಿ 200 ರೂ ಎಂದು ಇಟ್ಟುಕೊಂಡಿದೆ. ಮುಂದೆ ಇದು ಹಂತ ಹಂತವಾಗಿ 300 ರೂಗೆ ಏರಿಕೆ ಆಗಬಹುದು. ಇಲ್ಲಿ ಎಆರ್ಪಿಯು ಎಂದರೆ ಪ್ರತೀ ಗ್ರಾಹಕರಿಂದ ಬರುವ ಸರಾಸರಿ ಆದಾಯ.
ಮೂರು ಶಕ್ತಿಯುತ ಟೆಲಿಕಾಂ ಕಂಪನಿಗಳ ಅಗತ್ಯತೆ:
ದಿವಾಳಿಯಾಗುವ ಹಂತದಲ್ಲಿದ್ದ ವೊಡಾಫೋನ್ ಐಡಿಯಾ ಕಂಪನಿಗೆ ಸರ್ಕಾರ ಉತ್ತೇಜನ ನೀಡುತ್ತಿರುವ ಕ್ರಮವನ್ನು ಏರ್ಟೆಲ್ ಮುಖ್ಯಸ್ಥರು ಸ್ವಾಗತಿಸಿದ್ದಾರೆ.
ಭಾರತದಂತಹ ದೊಡ್ಡ ಗಾತ್ರದ ದೇಶಕ್ಕೆ ಮೂರು ಟೆಲಿಕಾಂ ಆಪರೇಟರ್ಗಳು ಬೇಕು ಎಂದು ನಾವು ಯಾವಾಗಲೂ ಹೇಳುತ್ತಾ ಬಂದಿದ್ದೆವು. ಈಗ ಮೂರನೇ ಟೆಲಿಕಾಂ ಆಪರೇಟರ್ ಆಗಿ ಬಿಎಸ್ಸೆನ್ನೆಲ್ ಬರಬಹುದು. ಅಥವಾ ವೊಡಾಫೋನ್ ಕೂಡ ಈ ಸ್ಥಾನದಲ್ಲಿ ಮುಂದುವರಿಯಬಹುದು. ಸರ್ಕಾರ ತನ್ನ ಕೈಲಾಗಿದ್ದನ್ನು ಮಾಡಿದೆ. ಇದರ ಅನುಕೂಲತೆಯನ್ನು ಪಡೆಯುವುದು ವೊಡಾಫೋನ್ ಕೈಯಲ್ಲೇ ಇದೆ ಎಂದೂ ಸುನೀಲ್ ಭಾರ್ತಿ ಮಿಟ್ಟಲ್ ತಿಳಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada