ಹಿಂದಿ ಕಿರುತೆರೆ ನಟಿ ತುನಿಶಾ ಶರ್ಮಾ ನಿಧನದ ಬಳಿಕ ಮಾಜಿ ಪ್ರಿಯಕರ ಶೀಜಾನ್ ಖಾನ್ ಅವರಿಗೆ ಕಾನೂನಿನ ಸಂಕಷ್ಟ ಎದುರಾಗಿದೆ. ತುನಿಶಾ ಶರ್ಮಾ ಅವರ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪದ ಮೇಲೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಡಿಸೆಂಬರ್ 30ರ ತನಕ ಪೊಲೀಸ್ ಕಸ್ಟಡಿಗೆ ಶ್ರೀಜಾನ್ ಅವರನ್ನು ಒಪ್ಪಿಸಲಾಗಿದೆ.ತುನಿಶಾ ಶರ್ಮಾ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಕೆಲವೇ ನಿಮಿಷಗಳ ಮುಂಚೆ ಶೀಜಾನ್ ಖಾನ್ ಜೊತೆ ಮಾತನಾಡಿದ್ದರು ಎಂಬುದು ಇದೀಗ ತಿಳಿದುಬಂದಿದೆ. ಡಿ.24ರಂದು ‘ಅಲಿಬಾಬಾ’ ಧಾರಾವಾಹಿಯ ಚಿತ್ರೀಕರಣದ ಸ್ಟುಡಿಯೋದಲ್ಲಿ ತುನಿಶಾ ಶರ್ಮಾ ನೇಣಿಗೆ ಶರಣಾದರು. ಅದಕ್ಕೂ ಕೇವಲ 15 ದಿನ ಮುಂಚೆ ಅವರ ಜೊತೆ ಶೀಜಾನ್ ಖಾನ್ ಬ್ರೇಕಪ್ ಮಾಡಿಕೊಂಡಿದ್ದರು. ಆದರೂ ನೇಣು ಬಿಗಿದುಕೊಳ್ಳುವ ಕೆಲವೇ ನಿಮಿಷಗಳ ಮುನ್ನ ಶೀಜಾನ್ ಖಾನ್ ಜೊತೆ ತುನಿಶಾ ಶರ್ಮಾ ಮಾತುಕತೆ ನಡೆಸಿದ್ದರು ಎಂಬುದು ತನಿಖೆ ವೇಳೆ ತಿಳಿದುಬಂದಿದೆ. ಅವರಿಬ್ಬರ ನಡುವೆ ಯಾವ ವಿಚಾರ ಚರ್ಚೆ ಆಯಿತು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.ಪೊಲೀಸರ ವಿಚಾರಣೆ ಸಂದರ್ಭದಲ್ಲಿ ಶೀಜಾನ್ ಖಾನ್ ಅವರು ಪದೇಪದೇ ತಮ್ಮ ಹೇಳಿಕೆ ಬದಲಿಸುತ್ತಿದ್ದರು ಎಂಬ ಮಾಹಿತಿ ಕೇಳಿಬಂದಿದೆ. ಅವರಿಗೆ ಮತ್ತೋರ್ವ ಹುಡುಗಿ ಜೊತೆ ಆಪ್ತತೆ ಬೆಳೆದಿತ್ತು. ಆ ಯುವತಿಗೆ ಕಳಿಸಿದ್ದ ವಾಟ್ಸಪ್ ಮೆಸೇಜ್ಗಳನ್ನು ಡಿಲೀಟ್ ಮಾಡಿಕೊಂಡಿದ್ದಾರೆ. ಅದಕ್ಕೆ ಕಾರಣ ಏನು ಎಂಬುದನ್ನು ಕೂಡ ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. ವಿಚಾರಣೆಗೆ ಶೀಜಾನ್ ಖಾನ್ ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಕೂಡ ವರದಿ ಆಗಿದೆ.ತುನಿಶಾ ಶರ್ಮಾ ಸಾವಿಗೆ ನ್ಯಾಯ ಸಿಗಬೇಕು ಎಂದು ಕುಟುಂಬದವರು ಮತ್ತು ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ. ಈ ನಡುವೆ ಕೆಲವರು ಶೀಜಾನ್ ಖಾನ್ ಪರವಾಗಿಯೂ ವಾದ ಮಂಡಿಸುತ್ತಿದ್ದಾರೆ. ತನಿಖೆ ಪೂರ್ಣಗೊಂಡ ಬಳಕವಷ್ಟೇ ತುನಿಶಾ ಶರ್ಮಾ ಅವರ ಆತ್ಮಹತ್ಯೆಗೆ ನಿಜವಾದ ಕಾರಣ ಏನೆಂಬುದು ತಿಳಿಯಲಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: