ಅರಣ್ಯ ಪ್ರದೇಶಗಳಲ್ಲಿ ರಣಹದ್ದುಗಳ ಸಂಖ್ಯೆ ಗಣನೀಯವಾಗಿ ಕುಸಿತವಾಗುತ್ತಿರುವುದು ಇದೀಗ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.ಕರ್ನಾಟಕದ ಬಂಡೀಪುರ, ನಾಗರಹೊಳೆ, ಬಿಆರ್ಟಿ ತಮಿಳುನಾಡಿನ ಮಧುಮಲೈ ಹಾಗೂ ಕೇರಳದ ವೈನಾಡು ಅರಣ್ಯ ಪ್ರದೇಶದಲ್ಲಿ ೮೦ರ ದಶಕದಲ್ಲಿ ಸುಮಾರು ೧೦ ಸಾವಿರದಷ್ಟಿದ್ದ ರಣಹದ್ದುಗಳ ಸಂಖ್ಯೆ ಗಣನೀಯವಾಗಿ ಕುಸಿತವಾಗಿದೆ. ರಣಹದ್ದುಗಳು ಅಳಿವಿನಂಚಿಗೆ ತಲುಪಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿ.
ಇದರಿಂದ ಎಚ್ಚೆತ್ತ ಅರಣ್ಯ ಸಚಿವಾಲಯ ರಣಹದ್ದುಗಳ ಸರ್ವೇಗೆ ಮುಂದಾಗಿದೆ. ರಾಜ್ಯ ಸೇರಿದಂತೆ ವಿವಿಧೆಡೆ ೮೦ರ ದಶಕದಲ್ಲಿ ಸರಿ ಸುಮಾರು ೧೦ ಸಾವಿರದಷ್ಟಿದ್ದ ರಣಹದ್ದುಗಳ ಸಂಖ್ಯೆ ಗಣನೀಯವಾಗಿ ಕುಸಿದಿದ್ದು, ಈಗ ಕೇವಲ ಇವುಗಳ ಸಂಖ್ಯೆ ೨೫೦ ಇರಬಹುದು ಎಂದು ಅಂದಾಜಿಸಲಾಗಿದೆ.ರಣಹದ್ದುಗಳ ಉಳಿಸಿಕೊಳ್ಳಲೇ ಬೇಕಾದ ತುರ್ತು ಎದುರಿಗಿರುವ ಹಿನ್ನೆಲೆ ನೀಲಗಿರಿ ಶ್ರೇಣಿಯಲ್ಲಿ ಫೆ ೨೫ ಹಾಗೂ ೨೬ ರಂದು ಸರ್ವೇ ನಡೆಯಲಿದೆ. ಬಂಡೀಪುರದಲ್ಲಿ ರಣಹದ್ದು ಸರ್ವೇಕ್ಷಣೆ ಬಗ್ಗೆ ಸಿಬ್ಬಂದಿಗೆ ತರಬೇತಿ ಕೊಡಲಾಗಿದೆ. ಕರ್ನಾಟಕ ಅರಣ್ಯ ಇಲಾಖೆ ಹಾಗೂ ಡಬ್ಲ್ಯೂಸಿಎಸ್( ವನ್ಯಜೀವಿ ಸಂರಕ್ಷಣಾ ಸಂಸ್ಥೆ) ಸಂಸ್ಥೆಯ ಸಹಭಾಗಿತ್ವದಲ್ಲಿ ಸಮೀಕ್ಷೆ ನಡೆಯಲಿದೆ.
ಕಾಡಂಚಿನಲ್ಲಿ ಸತ್ತ ಪ್ರಾಣಿಗಳನ್ನು ತಿಂದು ಬದುಕುವುದರಿಂದ ಕಾಡಿನ ಪರಿಸರ ಸ್ವಚ್ಛತೆಗೆ ರಣಹದ್ದುಗಳು ಬೇಕೇಬೇಕು. ರಣಹದ್ದುಗಳನ್ನು ಉಳಿಸಿಕೊಳ್ಳಲು ೨೦೨೫ ರವರೆಗೆ ಕೇಂದ್ರ ಪರಿಸರ ಸಚಿವಾಲಯ ಯೋಜನೆ ಹಾಕಿಕೊಂಡಿದೆ. ಮೊದಲ ಹಂತವೇ ಈ ಸರ್ವೇಕ್ಷಣೆ. ಕಾಡಿನ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ರಣಹದ್ದುಗಳನ್ನು ಉಳಿಸಲೇ ಬೇಕಿದೆ.ರಾಸುಗಳಿಗೆ ನೀಡುತ್ತಿದ್ದ ಡೈಕ್ಲೋಫೆನಾಕ್ ಎಂಬ ಚುಚ್ಚುಮದ್ದು ರಣಹದ್ದುಗಳ ಅವನತಿಗೆ ಕಾರಣ ಎನ್ನಲಾಗಿದೆ. ಈ ಚುಚ್ಚುಮದ್ದು ೨೦೦೬ರಲ್ಲಿ ನಿಷೇಧಕ್ಕೆ ಒಳಪಟ್ಟಿದೆ. ಡೈಕ್ಲೋಫೆನಾಕ್ ಚುಚ್ಚುಮದ್ದು ಪಡೆದಿದ್ದ ಸತ್ತ ದನಗಳು,ಜಾನುವಾರುಗಳನ್ನು ತಿಂದ ರಣಹದ್ದುಗಳು ಕಿಡ್ನಿ ಸಮಸ್ಯೆಗೆ ಒಳಗಾಗಿ ಗುಂಪುಗುಂಪಾಗಿ ಮೃತಪಟ್ಟಿದ್ದರಿಂದ ಜಟಾಯುಗಳ ಸಂತತಿಗೆ ದೊಡ್ಡ ಹೊಡೆತ ಕೊಟ್ಟಿದೆ. ಕಾಡಿಗೆ ಬೆಂಕಿ ಬೀಳುವುದು ಕೂಡ ಇವುಗಳ ಅವನತಿಗೆ ಮುಖ್ಯ ಕಾರಣ. ಇವೆಲ್ಲ ಕಾರಣಗಳಿಂದ ಕಾಡಿನ ಪ್ರಮುಖ ಪಕ್ಷಿಯೊಂದು ಈಗ ಅವನತಿಗೆ ತಲುಪುತ್ತಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada