ತಾಲೂಕಿನ ಕುಟ್ರುಪಾಡಿ ಗ್ರಾಮದ ಮೀನಾಡಿ ಬಳಿ ಸೋಮವಾರ ಬೆಳ್ಳಂಬೆಳಿಗ್ಗೆ ಆನೆಯೊಂದು ಅಟ್ಟಹಾಸ ಮೆರೆದಿದ್ದು ಇಬ್ಬರು ಅಮಾಯಕರನ್ನು ಬಲಿಪಡೆದಿದೆ. ಮೃತಪಟ್ಟವರನ್ನು ಕಡಬ ತಾಲೂಕಿನ ರೆಂಜಲಾಡಿ ಗ್ರಾಮದ ನೈಲ ನಿವಾಸಿ ರಂಜಿತಾ (21) ಹಾಗೂ ನೈಲ ನಿವಾಸಿ ರಮೇಶ್ ರೈ(55)ಎಂದು ತಿಳಿದು ಬಂದಿದೆ.ಯುವತಿ ರಂಜಿತಾ ಪೇರಡ್ಕ ಹಾಲು ಸೊಸೈಟಿಯಲ್ಲಿ ಉದ್ಯೋಗಿಯಾಗಿದ್ದು, ಬೆಳಗ್ಗಿನ ಜಾವ ಕರ್ತವ್ಯಕ್ಕೆ ಮನೆಯಿಂದ ಹೊರಟಾಗ ಮೀನಾಡಿ ಬಳಿ ರಸ್ತೆಯಲ್ಲಿ ಆನೆ ಅಡ್ಡ ಬಂದು ದಾಳಿ ನಡೆಸಿದೆ. ಯುವತಿಯ ಆರ್ತನಾದ ಕೇಳಿದ ಆಕೆಯ ನೆರೆಯವರಾದ ರಮೇಶ್ ರೈ ಓಡಿ ಬಂದಿದ್ದಾರೆ. ಅಷ್ಟೊತ್ತಿಗಾಗಲೇ ಯುತಿಯನ್ನು ಹೊಡೆದುರುಳಿಸಿದೆ. ರಮೇಶ್ ರೈ ಅವರನ್ನು ಕಂಡ ಆನೆ ಯುವತಿಯನ್ನು ಬಿಟ್ಟು ರಮೇಶ್ ರೈ ಮೇಲೆ ಅಟ್ಯಾಕ್ ಮಾಡಿದೆ.ಬಳಿಕ ಆನೆ ಅಲ್ಲಿಂದ ಪರಾರಿಯಾಗಿದ್ದು, ರಮೇಶ್ ರೈ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟರೆ. ಗಾಯಾಳು ರಂಜಿತಾ ನೆಲ್ಯಾಡಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಕಳೆದ ಕೆಲವು ತಿಂಗಳುಗಳಿಂದ ಈ ಭಾಗದಲ್ಲಿ ಕಾಡಾನೆಗಳ ಹಾವಳಿ ತೀವ್ರವಾಗಿತ್ತು. ಈ ಬಗ್ಗೆ ಹಲವಾರು ದಿನಗಳಿಂದ ಈ ಪ್ರಾಂತ್ಯದ ಜನರು, ಅರಣ್ಯಾಧಿಕಾರಿಗಳಿಗೆ ದೂರು ನೀಡುತ್ತಲೇ ಬಂದಿದ್ದರು. ಸೋಮವಾರ ನಡೆದಿರುವ ಈ ಘಟನೆಯು ಅರಣ್ಯಾಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಲೇ ಜರುಗಿರುವಂಥದ್ದು ಎಂಬುದು ಜನರ ಆರೋಪವಾಗಿದೆ.ಘಟನೆ ನಡೆದ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಬಂದಾಗ ಸ್ಥಳೀಯರು, ಅಧಿಕಾರಿಗಳ ಜೊತೆಗೆ ವಾಗ್ವಾದಕ್ಕಿಳಿದರು. ಇದರಿಂದಾಗಿ, ಪ್ರಕ್ಷಬ್ದ ವಾತಾವರಣ ನಿರ್ಮಾಣವಾಗಿತ್ತು. ಈ ಹಿಂದೆ, ಸ್ಥಳೀಯ ಯುವಕನೊಬ್ಬ ಆನೆಗಳ ಹಿಂಡುಗಳು ಜನರು ವಾಸಿರುವ ತಾಣಗಳ ಆಸುಪಾಸಿನಲ್ಲೇ ಓಡಾಡುತ್ತಿರುವುದನ್ನು ತನ್ನ ಮೊಬೈಲಿನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ. ಇದನ್ನು ಸ್ಥಳೀಯ ಪೊಲೀಸರು ಡಿಲೀಟ್ ಮಾಡಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada