ನಟ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿರಬಹುದು ಆದರೆ ಹತ್ತಿದ ಏಣಿಯನ್ನು ಮರೆತಿಲ್ಲ. ತನಗೆ ಸಹಾಯ ಮಾಡಿದವರು, ತನ್ನ ಆಪ್ತ ಸ್ನೇಹಿತರನ್ನು ಯಶ್ ಹತ್ತಿರದಲ್ಲಿಯೇ ಇಟ್ಟುಕೊಂಡಿದ್ದಾರೆ.
‘ಕೆಜಿಎಫ್ 2’ ಸಿನಿಮಾದ ಪ್ರಚಾರ ಸಂದರ್ಭದಲ್ಲಿ ಹಿಂದಿಯ ಚಾನೆಲ್ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ಯಶ್ ಮೈಸೂರಿನಲ್ಲಿ ನನಗೆ ಹಲವಾರು ಮಂದಿ ಗೆಳೆಯರಿದ್ದಾರೆ.
ಬಾಲ್ಯ, ಯೌವ್ವನದಲ್ಲಿ ನನಗೆ ಸ್ನೇಹಿತರಾದವರು ಈಗಲೂ ನನ್ನ ಸ್ನೇಹಿತರಾಗಿಯೇ ಮುಂದುವರೆಯುತ್ತಿದ್ದಾರೆ. ನನ್ನ ಆತ್ಮೀಯ ಸ್ನೇಹಿತರು ಈಗಲೂ ನನ್ನ ಸುತ್ತ-ಮುತ್ತಲೇ ಇರುತ್ತಾರೆ. ನನ್ನ ಬೆಳವಣಿಗೆಗೆ ಸಹಾಯ ಮಾಡುತ್ತಿದ್ದಾರೆ ಎಂದಿದ್ದರು.
ಇದೀಗ ನಟ ಯಶ್ ತಮ್ಮ ಸ್ನೇಹಿತರ ಮೇಲೆ ತಮಗೆಷ್ಟು ಪ್ರೇಮ ಎಂಬುದನ್ನು ತೋರಿಸಿದ್ದಾರೆ. ನಿನ್ನೆ ರಾತ್ರಿ ಹಠಾತ್ತನೆ ತಮ್ಮ ಬಾಲ್ಯದ ಗೆಳೆಯನ ಮದುವೆ ಸಮಾರಂಭದಲ್ಲಿ ಪತ್ನಿಯೊಂದಿಗೆ ಹಾಜರಾಗಿದ್ದಾರೆ.
ಯಶ್ರ ಬಾಲ್ಯ ಸ್ನೇಹಿತ ಚೇತನ್ ಎಂಬುವರ ಮದುವೆ ಮೈಸೂರಿನಲ್ಲಿ ನಿನ್ನೆ ಸಾರಾ ಕಲ್ಯಾಣ ಮಂಟಪದಲ್ಲಿ ನೆರವೇರಿತು ಈ ಮದುವೆಗೆ ಯಶ್ ಹಾಗೂ ರಾಧಿಕಾ ಪಂಡಿತ್ ಇಬ್ಬರೂ ಹಾಜರಾಗಿ, ನವ ವಧು ವರರಿಗೆ ಶುಭ ಹಾರೈಸಿದರು. ಈ ಸಮಯದಲ್ಲಿ ಯಶ್ ಅನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು. ಸೆಲ್ಫಿ ತೆಗೆದುಕೊಳ್ಳಲು ನೂಕಾಟ ಸಹ ಏರ್ಪಟ್ಟಿತು. ಇದೇ ಕಾರಣಕ್ಕೆ ಕೆಲ ಕಾಲವಷ್ಟೆ ಕಲ್ಯಾಣ ಮಂಟಪದಲ್ಲಿದ್ದ ಯಶ್ ಹಾಗೂ ರಾಧಿಕಾ ಅಲ್ಲಿಂದ ಹೊರಟರು.
ಗೆಳೆಯರ ಕಾರ್ಯಕ್ರಮಗಳಿಗೆ ತಪ್ಪದೆ ಭಾಗವಹಿಸುತ್ತಾರೆ. ಕೆಲವು ತಿಂಗಳ ಹಿಂದೆ ಯಶ್ರ ಆಪ್ತ ಸ್ನೇಹಿತ ಹಾಗೂ ಟ್ರೇನರ್ ಹೊಸ ರೆಸ್ಟೊರೆಂಟ್ ಪ್ರಾರಂಭಿಸಿದಾಗ ಅದರ ಉದ್ಘಾಟನೆ ಸಮಾರಂಭದಲ್ಲಿ ಯಶ್ ಭಾಗವಹಿಸಿದ್ದರು. ಯಶ್ರ ಕೆಲವು ಆಪ್ತ ಗೆಳೆಯರು ಈಗ ಯಶ್ ಜೊತೆಗೆ ಇದ್ದು ಅವರೊಟ್ಟಿಗೆ ಕೆಲಸ ಮಾಡುತ್ತಿದ್ದಾರೆ ಸಹ.
ಯಶ್ರ ಬಾಲ್ಯದ ಗೆಳೆಯ ಚೇತನ್ ಮದುವೆಗೆ ಸಿನಿಮಾ ರಂಗದ ಇನ್ನೂ ಕೆಲವು ಗೆಳೆಯರು ಆಗಮಿಸಿದ್ದರು. ನಟ ಅಭಿಷೇಕ್ ಅಂಬರೀಶ್ ಸಹ ಈ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada