ನ್ಯಾಯಾಲಯದಿಂದ ಹಲವು ಎಚ್ಚರಿಕೆಗಳನ್ನು ನೀಡಲಾದ ಬಳಿಕ, ಬಂಧನದಿಂದ ತಪ್ಪಿಸಿಕೊಳ್ಳಲು ಕೊನೆಗೂ ಕಂಗನಾ ರನೌತ್ ಮುಂಬೈ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ರೈತರನ್ನು ಭಯೋತ್ಪಾದಕರಿಗೆ ಹೋಲಿಸಿ ಮಾಡಿದ್ದ ಟ್ವೀಟ್ಗೆ ವಿರುದ್ಧವಾಗಿ ಕಂಗನಾ ವಿರುದ್ಧ ಹಲವು ದೂರುಗಳು ದಾಖಲಾಗಿದ್ದವು.
ಮುಂಬೈನಲ್ಲಿ ದಾಖಲಾಗಿದ್ದ ದೂರಿನ ವಿಚಾರಣೆಗೆ ಇಂದು ಕಂಗನಾ ರನೌತ್ ಹಾಜರಾಗಿದ್ದರು.
ಕಂಗನಾ ಪೊಲೀಸ್ ಠಾಣೆಗೆ ಬಂದ ವಿಡಿಯೋ ಬಹಳ ವೈರಲ್ ಆಗಿದ್ದು, ಪೊಲೀಸ್ ಠಾಣೆಗೆ ಹಾಜರಾದ ಕಂಗನಾರ ಬಿಂಕ, ‘ಆಟಿಟ್ಯೂಡ್’ ಬಗ್ಗೆ ಜೋರು ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿವೆ.
ಬಣ್ಣದ ಸೀರೆ, ಮುತ್ತಿನ ಹಾರ ಧರಿಸಿ, ಕಪ್ಪು ಕನ್ನಡಕ ಧರಿಸಿ ಅಪ್ಪಟ ‘ಹೀರೋಯಿನ್’ ಮಾದರಿಯಲ್ಲಿ ಹಲವು ಖಾಸಗಿ ಬಾಡಿಗಾರ್ಡ್ಗಳ ಜೊತೆಗೆ ಕಂಗನಾ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಕೆಲ ಸಮಯದಲ್ಲಿಯೇ ವಿಚಾರಣೆ ಎದುರಿಸಿ ವಾಪಸ್ಸಾದರು ನಟಿ.
ಪೊಲೀಸ್ ಠಾಣೆಯಿಂದ ಹೊರ ಬಂದ ಬಳಿಕ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ನಟಿ ಕಂಗನಾ, ”ಮತ್ತೊಂದು ದಿನ, ಮತ್ತೊಂದು ಬಾರಿ ಪೊಲೀಸ್ ಠಾಣೆ ಭೇಟಿ, ನೂರಾರು ರಾಜಕೀಯ ಪ್ರೇರಿತ ಎಫ್ಐಆರ್ಗಳು, ಗಂಟೆಗಟ್ಟಲೆ ವಿಚಾರಣೆಗಳು” ಎಂದು ಬರೆದುಕೊಂಡಿದ್ದಾರೆ.
”ಈ ದೇಶ ದೇಶಪ್ರೇಮಿಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಲೇ ಇದೆ. ರಾಷ್ಟ್ರೀಯವಾದಿಗಳನ್ನು ಅಪಮೌಲ್ಯಗೊಳಿಸುತ್ತಲೇ ಬರುತ್ತಿದೆ. ದೊಡ್ಡ ಶತ್ರುವಿನ ವಿರುದ್ಧ ನಡೆಯುವ ಈ ಹೋರಾಟದಲ್ಲಿ ರಾಷ್ಟ್ರಪ್ರೇಮಿಗಳು ಒಂಟಿಗರು. ಅಧಿಕಾರದಲ್ಲಿರುವವರು ಮತಬ್ಯಾಂಕ್ಗೋಸ್ಕರ ಭಯೋತ್ಪಾದಕರಿಗೂ ಬೆಂಬಲ ನೀಡುತ್ತಾರೆ. ಹಾಗಾಗಿ ಈ ಕಠಿಣ ರಸ್ತೆಯಲ್ಲಿ ನಾನು ಒಬ್ಬಂಟಿ, ಆದರೂ ಪರ್ವಾಗಿಲ್ಲ. ಜೈ ಹಿಂದ್” ಎಂದು ಬರೆದುಕೊಂಡಿದ್ದಾರೆ ಕಂಗನಾ.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಯ ವಿರುದ್ಧ ಪಂಜಾಬ್ ರೈತರ ಮುಂದಾಳತ್ವದಲ್ಲಿ ನಡೆದ ಪ್ರತಿಭಟನೆಗೆ ಮಣಿದು ಪ್ರಧಾನಿ ಮೋದಿಯವರು ಕೃಷಿ ಕಾಯ್ದೆಗಳನ್ನು ಹಿಂಪಡೆದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಕಂಗನಾ, ”ಇಂದು ಖಲಿಸ್ಥಾನಿ ಉಗ್ರರು ಸರ್ಕಾರದ ಕೈ ತಿರುವಿದ್ದಾರೆ (ಬಲವಂತವಾಗಿ ಕಾಯ್ದೆ ಹಿಂಪಡೆಯುವಂತೆ ಮಾಡಿದ್ದಾರೆ ಎಂಬರ್ಥದಲ್ಲಿ). ಆದರೆ ಒಂದನ್ನು ಮರೆಯದಿರೋಣ, ಒಬ್ಬ ಮಹಿಳೆ, ಭಾರತದ ಏಕೈಕ ಮಹಿಳಾ ಪ್ರಧಾನಿ ಇದೇ ಖಲಿಸ್ಥಾನಿ ಉಗ್ರರನ್ನು ತನ್ನ ಶೂ ಕಾಲಿನಿಂದ ಹೊಸಕಿ ಹಾಕಿದ್ದಳು” ಎಂದಿದ್ದರು. ಕಂಗನಾರ ಈ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಸಿಖ್ ಸಮುದಾಯದವರು ಕಂಗನಾ ವಿರುದ್ಧ ದೂರು ದಾಖಲಿಸಿದ್ದರು.
ಅದಕ್ಕೂ ಮುನ್ನ ಶಾಹಿನ್ ಭಾಗ್ ಹೋರಾಟಗಾರರು, ದೆಹಲಿಯ ರೈತ ಹೋರಾಟದ ಬಗ್ಗೆಯೂ ಕಂಗನಾ ಅವಾಚ್ಯವಾಗಿ ಟ್ವೀಟ್ ಮಾಡಿದ್ದರು. ದೆಹಲಿಯ ರೈತ ಹೋರಾಟದಲ್ಲಿ ಭಾಗವಹಿಸಿದ್ದ ವೃದ್ಧೆಯೊಬ್ಬರ ಚಿತ್ರ ಪ್ರಕಟಿಸಿ 100 ರುಪಾಯಿ ಕೊಟ್ಟರೆ ಎಲ್ಲಿಗೆ ಬೇಕಾದರು ಬರುತ್ತಾಳೆ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ನ ವಿರುದ್ಧ ಪಂಜಾಬಿಗಳು, ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ರೈತರನ್ನು ಭಯೋತ್ಪಾದಕರಿಗೆ ಹೋಲಿಸಿ ಕಂಗನಾ ಮಾಡಿದ್ದ ಟ್ವೀಟ್ನ ವಿರುದ್ಧ ದೇಶದ ಹಲವು ರಾಜ್ಯಗಳಲ್ಲಿ ದೂರು ದಾಖಲಿಸಲಾಗಿತ್ತು. ಕರ್ನಾಟಕದ ತುಮಕೂರು ಹಾಗೂ ಬೆಳಗಾವಿಗಳಲ್ಲಿಯೂ ದೂರು ದಾಖಲಾಗಿತ್ತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: