ರಾಜ್ಯ ಸರ್ಕಾರ ಕಳಪೆ ಬಿತ್ತನೆ ಬೀಜ ಮಾರಾಟ ಮಾಡುವ ಮೂಲಕ ರೈತರನ್ನು ಏಮಾರಿಸುತ್ತಿದ್ದ ಆಂಧ್ರಪ್ರದೇಶ ಮೂಲದ ಮಾಫಿಯಾವನ್ನು ಬಯಲು ಮಾಡಿದೆ. ಅಲ್ಲದೆ, ಈ ಮಾಫಿಯಾ ವಿರುದ್ಧ 8 ಕ್ರಿಮಿನಲ್ ಮೊಕದ್ದಮೆಯನ್ನು ದಾಖಲು ಮಾಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, “ಆಂಧ್ರದಲ್ಲಿ ರಿಜೆಕ್ಟ್ ಆಗಿದ್ದ ಬೀಜಗಳನ್ನು ರಾಜ್ಯದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಆಂಧ್ರಪ್ರದೇಶದ ಮೂಲದ ಕೆಲವರು ಈ ಮಾಫಿಯಾದಲ್ಲಿ ತೊಡಗಿದ್ದರು. ಈ ಎಲ್ಲರನ್ನೂ ವಶಕ್ಕೆ ಪಡೆಯಲಾಗಿದೆ.ಇವರಿಂದ ಮುಸುಕಿನ ಜೋಳ, ಸೂರ್ಯಕಾಂತಿ, ಹತ್ತಿ ಇತ್ಯಾದಿ ಕಳಪೆ ಬೀಜಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಎಲ್ಲಾ ಸೇರಿ ಅಂದಾಜು 10 ಸಾವಿರಕ್ಕೂ ಹೆಚ್ಚು ಕ್ವಿಂಟಾಲ್ ವಶಕ್ಕೆ ಪಡೆದು 8 ಕ್ರಿಮಿನಲ್ ಕೇಸ್ ದಾಖಲಿಸಿಕೊಂಡಿದ್ದೇವೆ. ಹೀಗಾಗಿ ಈ ವರ್ಷ ರೈತರು ಕಳಪೆ ಬೀಜದ ಬಗ್ಗೆ ಆತಂಕಕ್ಕೆ ಒಳಗಾಗುವ ಅಗತ್ಯತೆ ಇಲ್ಲ. ರಾಜ್ಯ ಸರ್ಕಾರ ಘೋಷಿಸಿದ್ದ ವಿಶೇಷ ಪ್ಯಾಕೇಜ್ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, “ಕಳೆದ ಒಂದು ತಿಂಗಳಿನಿಂದ ಎಲ್ಲಾ 30 ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ. ಈ ಸಂದರ್ಭದಲ್ಲಿ ರೈತರ ಸಮಸ್ಯೆ ಆಲಿಸಿ ಸಿಎಂಗೆ ರೈತರ ನೆರವಿಗೆ ಬರುವಂತೆ ವರದಿ ರೂಪದಲ್ಲಿ ಮನವಿ ಮಾಡಿದ್ದೆ. ಇದಕ್ಕೆ ಸಂಬಂಧಿಸಿ ಸಿಎಂ ನಿನ್ನೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಮುಖ್ಯವಾಗಿ ಹೂ ಬೆಳೆಗಾರರಿಗೆ ಸಿಎಂ ನೆರವಿಗೆ ಬಂದಿದ್ದಾರೆ. ಸದ್ಯದಲ್ಲೇ ತರಕಾರಿ ಮತ್ತು ಹಣ್ಣು ಬೆಳೆಗಾರರಿಗೂ ಸಿಎಂ ಪ್ಯಾಕೇಜ್ ಪ್ರಕಟ ಮಾಡಲಿದ್ದಾರೆ. ಪ್ರಸ್ತುತ ತರಕಾರಿ ಮತ್ತು ಹಣ್ಣಿನ ಡಿಮ್ಯಾಂಡ್ ಕಮ್ಮಿ ಆಗಿದೆ. ಮದುವೆ ಕಾರ್ಯಕ್ರಮಗಳು, ಫ್ರೂಟ್ಸ್ ಜ್ಯೂಸ್ ಶಾಪ್ ಇತ್ಯಾದಿ ಇಲ್ಲದ ಕಾರಣ ಹೀಗಾಗಿದೆ. ಆದರೂ, ಸರ್ಕಾರ ಬೆಳೆಗಾರರ ಸಂಕಷ್ಟಕ್ಕೆ ನೆರವಾಗಲಿದೆ. ಅಲ್ಲದೆ, ಶೀಘ್ರದಲ್ಲಿ ಸಿಎಂ ಪರಿಹಾರ ಘೋಷಣೆ ಮಾಡಲಿದ್ದಾರೆ ಎಂದು ಹೇಳಿದರು.
ವರದಿ:ಪೊಲಿಟಿಕಲ್ ಬ್ಯೂರೋ ಸ್ಪೀಡ್ ನ್ಯೂಸ್ ಕನ್ನಡ