ಬಾಗಲಕೋಟೆಯಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಇಳಕಲ್ಲು ತಾಲೂಕಿನ ಸಿದ್ದನಕೊಳ್ಳ ಕಿರು ಜಲಪಾತ ಧುಮ್ಮಿಕ್ಕುತ್ತಿದ್ದು, ಪ್ರವಾಸಿಗರು ಮತ್ತು ಸಿದ್ದನಕೊಳ್ಳದ ಸಿದ್ದೇಶ್ವರ ಮಠಕ್ಕೆ ಭೇಟಿ ನೀಡುವ ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ. ಧಾರ್ಮಿಕ ಸ್ಥಳ ಸಿದ್ದೇಶ್ವರ ಮಠವು ಐಹೊಳೆಯಿಂದ 10 ಕಿ.ಮೀ. ದೂರದಲ್ಲಿದೆ. ಪಕ್ಕದಲ್ಲೇ ಇರುವ ಜಲಪಾತವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಮತ್ತು ಭಕ್ತರ ದಂಡೇ ಹರಿದು ಬರುತ್ತದೆ. ಬೆಟ್ಟದ ಮೇಲೆ ಹಸಿರಿನ ಮಧ್ಯೆ ಜಾರಿ ಬರುವ ನೀರನ್ನು ನೋಡಲು ನಯನ ಮನೋಹರವಾಗಿರುತ್ತದೆ.
ಕೆಳಗಡೆ ಹಾಸು ಬಂಡೆಗಳಿರುವುದರಿಂದ ಚಾರಣಿಗರಿಗೆ ಸ್ನಾನ ಮಾಡಲು ಯೋಗ್ಯವಾದ ಸ್ಥಳವಾಗಿದೆ. ಮಕ್ಕಳು ಆಗದವರು ಇಲ್ಲಿಗೆ ಬಂದು ಪೂಜೆ ಸಲ್ಲಿಸಿದರೆ ಸಂತಾನ ಭಾಗ್ಯ ಸಿಗಲಿದೆ ಎಂಬ ನಂಬಿಕೆ ಇದೆ. ಭಕ್ತರು ಪ್ರತೀ ಅಮಾವಾಸ್ಯೆ ದಿನದಂದು ಬೇರೆ ಬೇರೆ ಪ್ರದೇಶದಿಂದ ಆಗಮಿಸಿ ವಿಶೇಷ ಪೂಜೆ ನೆರವೇರಿಸುತ್ತಾರೆ. ಮಠದಲ್ಲಿ ನಿರಂತರ ದಾಸೋಹ ಇರಲಿದೆ. ಸದ್ಯದ ಮಟ್ಟಿಗೆ ಕೊರೊನಾ ಭಯದಿಂದ ಪ್ರವಾಸಿಗರ ಸಂಖ್ಯೆ ವಿರಳವಾಗಿದೆ.