ನಿನ್ನೆ ನೈಸ್ ರಸ್ತೆಯಲ್ಲಿ 5000ಕ್ಕೂಹೆಚ್ಚು ಕೂಲಿ ಕಾರ್ಮಿಕರು ಅಲ್ಲಿ ಜಮಾವಣೆಯಾಗಿದ್ದರು. ಅವರನ್ನು ಬಲವಂತವಾಗಿ ತಡೆಹಿಡಿಯಲಾಗಿದೆ ಎಂಬ ಸುಳ್ಳು ಸುದ್ದಿ ಹರಡಿತ್ತು. ನಾವು ಯಾರನ್ನೂ ಕೂಡಿಕಾಕಿಲ್ಲ. ಬೇರೆ ರಾಜ್ಯಗಳಿಗೆ ಹೋಗುವ ಯಾರನ್ನೂ ತಡೆಯುವುದಿಲ್ಲ. ತಡೆಯುವ ಪ್ರಯತ್ನವನ್ನೂ ಮಾಡಿಲ್ಲ ಎಂದು ಸಚಿವ ಆರ್. ಅಶೋಕ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಅಲ್ಲಿಗೆ ಬಂದ ಕಾರ್ಮಿಕರು ಫ್ಯಾಕ್ಟರಿ ಮತ್ತು ಕಟ್ಟಡ ನಿರ್ಮಾಣ ಕಾರ್ಮಿಕರಾಗಿದ್ದು, ಅವರಲ್ಲಿ ಬಹಳಷ್ಟು ತುಮಕೂರಿನ ವಿಮಲ್ ಎಂಬ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ವೇತನ ಕೊಟ್ಟಿಲ್ಲ ಎಂದು ಅವರು ಅಲ್ಲಿಂದ ಬಂದಿದ್ದರು.]
ಈ ವಿಷಯ ತಿಳಿದ ತಕ್ಷಣ ನಾವು ಕಾರ್ಖಾನೆಯ ಮಾಲೀಕರನ್ನು ಸಂಪರ್ಕಿಸಿದ್ದೆವು. ಆಗ ಅವರು ಇಂದು ಸಂಜೆಯೊಳಗೆ ಪ್ರತಿಯೊಬ್ಬರಿಗೂ 20 ಸಾವಿರ ರೂ. ವೇತನ ನೀಡುವುದಾಗಿ ಭರವಸೆ ನೀಡಿದರು. ಅದರಂತೆ ಅವರು ತುಮಕೂರಿಗೆ ಹೋಗಿದ್ದಾರೆ. ಇನ್ನು ಕೆಲವರು ತಮ್ಮ ಊರುಗಳಿಗೆ ಹೋದರೆ 14 ದಿನ ಕ್ವಾರಂಟೈನ್ನಲ್ಲಿರಬೇಕಾಗುತ್ತದೆ ಎಂಬ ಆತಂಕದಿಂದ ಕೆಲವರು ಇಲ್ಲೇ ಉಳಿದಿದ್ದಾರೆ. ಹಾಗಾಗಿ ಕೆಲಸ ಆರಂಭವಾದರೆ ಕೆಲಸಕ್ಕೆ ಹಾಜರಾಗುತ್ತೇವೆ. ಅಲ್ಲಿಯವರೆಗೆ ಇಲ್ಲಿಯೇ ಇರುತ್ತೇವೆ ಎಂದು ಹೇಳಿದ್ದಾರೆ.