ಪ್ರೊ ಕಬಡ್ಡಿ ಲೀಗ್ ನ ಎಂಟನೇ ಆವೃತ್ತಿ ಡಿಸೆಂಬರ್ 22 ರಿಂದ ಮತ್ತೆ ಆರಂಭವಾಗುತ್ತಿದೆ. ಕೊರೊನಾ ಹಿನ್ನಲೆಯಲ್ಲಿ ಎಲ್ಲ ಆಟಗಳನ್ನ ಒಂದೆ ಮೈದಾನದಲ್ಲಿ ನಡೆಸಲು ನಿರ್ಧರಿಸಲಾಗಿದ್ದು ಎಲ್ಲಾ ಆಟಗಳು ಬೆಂಗಳೂರಿನ ಕಂಠಿರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿವೆ ಎಂದು ಕ್ರೀಡಾಕೂಟದ ಆಯೋಜಕರಾದ ಮಾಶಾಲ್ ಸ್ಪೋರ್ಟ್ಸ್ ತಿಳಿಸಿದೆ. ಆದರೆ ಕೊರೊನಾ ಅಲೆಯ ಭೀತಿ ಇದ್ದು, ಆಟಗಾರರು ಮತ್ತು ಎಲ್ಲಾ ಪಾಲುದಾರರ ಆರೋಗ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮುಂಜಾಗೃತಾ ಕ್ರಮವಾಗಿ, ಪಂದ್ಯಗಳು ಕ್ರೀಡಾಂಗಣದಲ್ಲಿ ಯಾವುದೇ ಪ್ರೇಕ್ಷಕರಿಲ್ಲದೆ ನಡೆಯಲಿವೆ.
ಪಿಕೆಎಲ್ ಸೀಸನ್ 8 ರ ಕುರಿತು ಮಾಶಾಲ್ ಸ್ಪೋರ್ಟ್ಸ್ ಸಿಇಒ ಅನುಪಮ್ ಗೋಸ್ವಾಮಿ ಮಾತನಾಡಿ “ಉತ್ತಮ ಸುರಕ್ಷತೆಯೊಂದಿಗೆ ಸ್ಪರ್ಧಾತ್ಮಕ ಕ್ರೀಡಾಕೂಟಗಳನ್ನ ನಡೆಸಲು ಬೆಂಗಳೂರಿನಲ್ಲಿ ಎಲ್ಲಾ ಸೌಲಭ್ಯಗಳಿದ್ದು, ಈ ಬಾರಿಯ ಪಿಕೆಎಲ್ ಸೀಸನ್ 8 ರ ಆವೃತ್ತಿಯನ್ನ ಬೆಂಗಳೂರಿನಲ್ಲೆ ನಡೆಸಲು ನಿರ್ಧರಿಸಿ, ಕ್ರೀಡಾಕೂಟಕ್ಕಾಗಿ ಎದುರು ನೋಡುತ್ತಿದ್ದೇವೆ ” ಎಂದು ಹೇಳಿದರು.
ಇದರ ಕುರಿತು ಮುಖ್ಯಮಂತ್ರಿ ಬೊಮ್ಮಾಯಿ “ಕಬಡ್ಡಿ ಭಾರತದ ನಿಜವಾದ ಸ್ಥಳೀಯ ಕ್ರೀಡೆಯಾಗಿದೆ. ಅಲ್ಲದೆ ಇದು ಕರ್ನಾಟಕದಲ್ಲಿ ಬಹಳ ಜನಪ್ರಿಯವಾಗಿದೆ. ನಮ್ಮ ರಾಜ್ಯದಲ್ಲಿ ಮುಂಬರುವ ಪ್ರೊ ಕಬಡ್ಡಿ ಸೀಸನ್ 8 ರ ಪಂದ್ಯಾಟವನ್ನು ನಾವು ಸ್ವಾಗತಿಸುತ್ತೇವೆ ಮತ್ತು ಬೆಂಬಲಿಸುತ್ತೇವೆ” ಎಂದಿದ್ದಾರೆ.