ಮೈಸೂರು: ರಾಜ್ಯದಲ್ಲಿ ಸೂಪರ್ ಸಿಎಂ ವಿಜಯೇಂದ್ರ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಎಸ್.ಟಿ.ಸೋಮಶೇಖರ್, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅವರ ಮಗ ಕಡ್ಲೆಪುರಿ ತಿನ್ನುತ್ತಿದ್ದನಾ? ಎಂದು ಏಕವಚನದಲ್ಲೇ ಪ್ರಶ್ನಿಸಿದ್ದಾರೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿಯ ಪ್ರಯುಕ್ತ ನಗರದ ಕೆ.ಆರ್.ವೃತ್ತದಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ನಾನು ಮಂತ್ರಿಯಾಗಿ 3 ತಿಂಗಳಾಗಿದ್ದು, ಇದುವರೆಗೂ ವಿಜಯೇಂದ್ರ ಒಂದು ಬಾರಿಯೂ ನಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ ಎಂದರು. ವಿಧಾನ ಪರಿಷತ್ ಸ್ಥಾನಗಳನ್ನು ಭರ್ತಿ ಮಾಡುವ ಬಗ್ಗೆ ಹೈಕಮಾಂಡ್ ಹಾಗೂ ಕೋರ್ ಕಮಿಟಿ ತೀರ್ಮಾನ ತೆಗೆದುಕೊಳ್ಳುತ್ತದೆ. ಕಳೆದ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳಿಗೆ ಸ್ಥಾನ ನೀಡುವ ಬಗ್ಗೆ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳು ನಿರ್ಧರಿಸುತ್ತಾರೆ ಎಂದರು.
ಈ ಮಧ್ಯೆ ನನ್ನ ಸೋಲಿಗೆ ಬಿಜೆಪಿಯವರೇ ಕಾರಣ ಎಂದು ಎಂಟಿಬಿ ನಾಗರಾಜ್ ಹೇಳುವುದು ಸರಿಯಲ್ಲ. ಹೀಗೆ ಹೇಳಿ ಹೇಳಿ ಕಳೆದ ಚುನಾವಣೆಯಲ್ಲಿ ಎಂಟಿಬಿ ಸೋತರು ಎಂದು ಸಚಿವ ಸೋಮಶೇಖರ್ ಹೇಳಿದರು.ನಗರದಲ್ಲಿ ಕೊರೊನಾ ಹತೋಟಿಗೆ ಬರುತ್ತಿದ್ದು, ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಸಚಿವರು ಸಾರ್ವಜನಿಕರಲ್ಲಿ ಧೈರ್ಯ ತುಂಬಿದರು.