ಮೈಸೂರು: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ 2006ರಲ್ಲಿ ನಡೆದ ಉಪ ಚುನಾವಣೆಯನ್ನು ನೆನಪಿಸಿದರೆ ಸಾಕು, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಈಗಲೂ ಸುಸ್ತು ಹೊಡೆಯುತ್ತಾರೆ. ಸಾಕಪ್ಪ ಸಾಕು ಉಪ ಚುನಾವಣೆಯ ಸಹವಾಸ ಎನ್ನುತ್ತಾರೆ.ಸಿದ್ದರಾಮಯ್ಯ ಅವರು 2006ರಲ್ಲಿ ಜೆಡಿಎಸ್ನಿಂದ ಉಚ್ಛಾಟನೆಯಾದ ಅನಂತರ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿ ಉಪ ಚುನಾವಣೆ ಎದುರಿಸಿದರು.
ಆಗ ರಾಜ್ಯದಲ್ಲಿ ಜೆಡಿಎಸ್ನ ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರೆ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಉಪ ಮುಖ್ಯಮಂತ್ರಿ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್, ಬಿಜೆಪಿ ಸೇರಿ ಜೆಡಿಎಸ್ನಿಂದ ಶಿವಬಸಪ್ಪ ಅವರನ್ನು ಕಣಕ್ಕೆ ಇಳಿಸಿತು. ಶಿವಬಸಪ್ಪ ಅವರು ಕ್ಷೇತ್ರದಲ್ಲಿ ಅಷ್ಟಾಗಿ ಮತದಾರರಿಗೆ ಪರಿಚಯವಿರಲಿಲ್ಲ. ಆಗ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರಕಾರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರ ಸೋಲಿಗೆ ಪಣತೊಟ್ಟು ಕೆಲಸ ಮಾಡಿತು. ಸಿದ್ದರಾಮಯ್ಯ ಅವರು ಕೊನೆಯ ಸುತ್ತಿನಲ್ಲಿ 257 ಮತಗಳ ಕೂದಲೆಳೆಯ ಅಂತರದಲ್ಲಿ ಜಯ ಸಾಧಿಸಿ ನಿಟ್ಟುಸಿರುಬಿಟ್ಟರು. ರಾಜಕೀಯವಾಗಿ ಪುನರ್ಜನ್ಮ ಪಡೆದರು. ಈ ಉಪ ಚುನಾವಣೆ ದೇಶದ ಗಮನ ಸೆಳೆದಿತ್ತು.
ವಿಶೇಷವೆಂದರೆ ಇದೇ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರು 1983ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಇದೇ ಕ್ಷೇತ್ರದಿಂದಲೇ ಗೆದ್ದು ರಾಜಕೀಯ ಆರಂಭಿಸಿದ್ದರು. 1983ರಿಂದ 2006ರ ವರೆಗೆ ಏಳು ಬಾರಿ ವಿಧಾನಸಭೆ ಚುನಾವಣೆ ನಡೆದಿದ್ದು ಇದರಲ್ಲಿ ಐದು ಬಾರಿ ಸಿದ್ದರಾಮಯ್ಯ ಆಯ್ಕೆಯಾಗಿದ್ದಾರೆ. ಎರಡು ಬಾರಿ ಸೋತಿದ್ದಾರೆ. ಅಲ್ಲದೆ 2018ರಲ್ಲಿ ಮತ್ತೆ ಇಲ್ಲಿಂದಲೇ ಸ್ಪರ್ಧಿಸಿ, ಸೋತರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada