ಚಿತ್ರರಂಗದಲ್ಲಿ ಅನೇಕ ವಿವಾದಾತ್ಮಕ ವಿಚಾರಗಳಿವೆ. ಅವುಗಳಲ್ಲಿ ಇತ್ತೀಚಿನದ್ದು, ನಟ ದರ್ಶನ್ ಅವರ ಮೇಲೆ ಕಿಡಿಗೇಡಿಯೊಬ್ಬ ಚಪ್ಪಲಿ ಎಸೆದ ಪ್ರಕರಣ. ಕ್ರಾಂತಿ ಸಿನಿಮಾದ ಸಾಂಗ್ ರಿಲೀಸ್ ಇವೆಂಟ್ ವೇಳೆ ನಡೆದ ಈ ದರ್ಘಟನೆ ಸ್ಯಾಂಡಲ್ವುಡ್ ಮಂದಿಗೆ ಕಹಿ ನೆನಪಾಗಿ ಉಳಿಯುವಂಥದ್ದು.
ಆದರೆ ಹೀಗೆ ನಟರ ಮೇಲೆ ಚಪ್ಪಲಿ ಎಸೆದ ಘಟನೆ ಇದೇ ಮೊದಲಲ್ಲ. ಕನ್ನಡದ ಕಣ್ಮಣಿ, ನಟ ಸಾರ್ವಭೌಮ ಡಾ.ರಾಜ್ಕುಮಾರ್ ಕೂಡ ಇದಕ್ಕೆ ಹೊರತಾಗಿಲ್ಲ.
ಡಾ. ರಾಜ್ಕುಮಾರ್ ಹಾಗೂ ವಿಷ್ಣುವರ್ಧನ್ ನಡುವೆ ಒಂದು ಆತ್ಮೀಯತೆ ಇತ್ತು ಎನ್ನುವುದು ಎಷ್ಟು ಸತ್ಯವೋ, ಇಬ್ಬರು ಅಭಿಮಾನಿಗಳ ನಡುವೆ ಪದೇ ಪದೇ ಸಂಘರ್ಷ ನಡೆಯುತ್ತಿತ್ತು ಎಂಬುದು ಕೂಡ ಅಷ್ಟೇ ನಿಜ. ಅಭಿಮಾನಿಗಳ ನಡುವೆ ಇದ್ದ ಶೀತಲ ಸಮರ ಸಣ್ಣ ಪುಟ್ಟ ಕಿರಿಕ್ಗಳಿಗೆ ಕೊನೆಗೊಳ್ಳದೇ ಒಂದು ದುರ್ಘಟನೆಗೆ ಕಾರಣವಾಯಿತು.
ಹತ್ತಾರು ವರ್ಷಗಳ ಹಿಂದೆ ರಾಜ್ಯೋತ್ಸವ ಸಮಾರಂಭಕ್ಕೆ ಡಾ. ರಾಜ್ಕುಮಾರ್ ಮತ್ತು ವಿಷ್ಣುವರ್ಧನ್ ಮುಖ್ಯ ಅತಿಥಿಗಳಾಗಿ ಒಂದೇ ವೇದಿಕೆ ಮೇಲೆ ಇದ್ದರು. ಇಬ್ಬರು ವೇದಿಕೆ ಮೇಲೆ ಇದ್ದ ವೇಳೆಯೇ ಚಪ್ಪಲಿಯೊಂದು ಬಂದು ಅಣ್ಣಾವ್ರ ಮೇಲೆ ಬಿದ್ದಿತ್ತು. ಈ ಕಹಿ ಘಟನೆಯನ್ನು ಹಿರಿಯ ಸಿನಿಮಾ ವಿತರಕ ಮುನಿರಾಜು ಎಂ. ಅವರು ಕನ್ನಡ ಮಾಣಿಕ್ಯ ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿದ್ದಾರೆ.
ಮಾಗಡಿ ರಸ್ತೆಯ ರೈಲ್ವೆ ಕ್ವಾಟರ್ಸ್ ಹಿಂದೆ ಮೈದಾನದಲ್ಲಿ ಕನ್ನಡ ರಾಜೋತ್ಸವ ಕಾರ್ಯಕ್ರಮದಲ್ಲಿ ಈ ಘಟನೆ ಸಂಭವಿಸಿತ್ತಂತೆ. ತಮ್ಮ ಮೇಲೆ ಚಪ್ಪಲಿ ಬಿದ್ದ ಕೂಡಲೇ ರಾಜ್ಕುಮಾರ್ ಎದ್ದು ನಿಂತು, ಕೈ ಮುಗಿಯುತ್ತಾ, “ನಾವೆಲ್ಲಾ ಕಲಾವಿದರು, ನಾವೆಲ್ಲರೂ ಒಂದೇ, ಹೀಗೆಲ್ಲಾ ಮಾಡಬಾರದು” ಎಂದಿದ್ದರಂತೆ. ಆದರೆ ಈ ಘಟನೆಯಿಂದ ಮುಜುಗರಗೊಂಡ ವಿಷ್ಣುವರ್ಧನ್ ಅವರು, ಬೇಸರದಿಂದ ಹೊರಡುತ್ತೇನೆ ಎಂದು ಹೇಳಿ ಅಲ್ಲಿಂದ ಹೊರನಡೆದರಂತೆ.
https://play.google.com/store/apps/details?id=com.speed.newskannada