ಆಧುನಿಕ ಭಗೀರಥ ಕಾಮೇಗೌಡರಿಗೆ ಈಗ ಕೇಂದ್ರ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಸಕ್ಕರೆ ನಾಡು ಮಂಡ್ಯದ ಈ ಇಳಿವಯಸ್ಸಿನ ಅಜ್ಜ ಈಗ ಸುದ್ದಿಯ ಕೇಂದ್ರಬಿಂದು. ಅದಕ್ಕೆ ಕಾರಣ ಮೊನ್ನೆ ಭಾನುವಾರ ಆಕಾಶವಾಣಿಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಇವರ ಹೆಸರು ಮತ್ತು ಸಾಧನೆಗಳನ್ನು ಪ್ರಸ್ತಾಪಿಸಿದ್ದು. ಇದಾದ ಬಳಿಕ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ವಿಡಿಯೊ ಕರೆ ಮಾಡಿ ಮಾತನಾಡಿಸಿದ್ದು. ಆದರೆ ಈ ಬಡ ಕಾಮೇಗೌಡರಿಗೆ ಯಾವುದರ ಆಕಾಂಕ್ಷೆಯೇ ಇಲ್ಲ, ಅವರಿಗೆ ಬೇಕಾಗಿದ್ದು ಒಂದು ಉಚಿತ ಬಸ್ ಪಾಸ್. ಬಸ್ ಪಾಸ್ ಸಿಕ್ಕಿದರೆ ಅಕ್ಕಪಕ್ಕ ಜಿಲ್ಲೆಗಳ ದೇವಸ್ಥಾನಕ್ಕೆ ಹೋಗಿಬರಬಹುದು ಎಂಬ ಮುಗ್ಧ ಆಲೋಚನೆ ಕಾಮೇಗೌಡರದ್ದು.