ನೀತೀಶ್ ಕುಮಾರ್ ದೇಶ ಕಂಡ ನಿಷ್ಠಾವಂತ ರಾಜಕಾರಣಿಗಳಲ್ಲಿ ಒಬ್ಬರು. ಒಂದು ಕಾಲದಲ್ಲಿ ಭವ್ಯತೆಗೆ ಹೆಸರಾಗಿದ್ದು ಸ್ವಾತಂತ್ರ್ಯಾ ನಂತರದಲ್ಲಿ ನಿರಂತರ ಢಕಾಯಿತಿ, ಗೂಂಢಾಗಿರಿ, ಭ್ರಷ್ಟತೆ, ಅರಾಜಕತೆಗಳನ್ನು ನಿರಂತರವಾಗಿ ಕಂಡ ಬಿಹಾರವನ್ನು, ತಮ್ಮ ಶ್ರದ್ಧೆ ನಿಷ್ಠೆಗಳ ಮೂಲಕ ಸಮಾಧಾನಕಾರ ಹಾದಿಗೆ ತಂದ ನೀತೀಶ್ ಕುಮಾರ್ ಅವರ ಕೆಲಸ ಅಸಾಮಾನ್ಯವಾದದ್ದು.
ಸಾಮಾನ್ಯವಾಗಿ ರಾಜಕೀಯದಲ್ಲಿ ಧರ್ಮ, ಜಾತೀಯತೆ, ಎಡ, ಬಲ ಮುಂತಾದ ವಾದಗಳಲ್ಲಿ ಬುದ್ಧಿವಂತ ಜನಾಂಗ ಸಿಲುಕಿ ಏನೂ ಮಾಡದೆ ನಿಲ್ಲುವಾಗ, ನೀತೀಶ್ ಕುಮಾರ್ ಇಂಥ ವಾದಗಳಿಗೆ ಸಿಲುಕದೆ ತಮ್ಮ ಜನರಿಗೆ ಸಾಧ್ಯವಾದಷ್ಟೂ ಉತ್ತಮ ಆಡಳಿತ ನೀಡಬೇಕು ಎಂಬ ನಿಟ್ಟಿನಲ್ಲಿ ವಿರೋಧ ಮತ್ತು ಕಾಂಪ್ರೊಮೈಸ್ ಎರಡೂ ರೀತಿಯ ನೀತಿಯನ್ನು ಅನುಸರಿಸಿ ತಮ್ಮ ಹೆಸರಿಗೆ ತಕ್ಕಂತೆ ‘ನೀತೀ’ಶ ಕುಮಾರರಾಗಿ ರಾಷ್ಟ್ರ ರಾಜಕಾರಣದಲ್ಲಿ ಎದ್ದು ಕಾಣುವವರಾಗಿದ್ದಾರೆ.
ನಿತೀಶ್ ಕುಮಾರ್ ಪಟ್ನಾ ಸಮೀಪದ ಭಕ್ತಿಪುರದಲ್ಲಿ 1951ರ ಮಾರ್ಚ್ 1ರಂದು ಜನಿಸಿದರು. ತಂದೆ ಕವಿರಾಜ ಲಖನ್ ಸಿಂಗ್ ತಾಯಿ ಪರಮೇಶ್ವರಿ ದೇವಿ. ಪಟ್ನಾದ ಬಿಹಾರ್ ಕಾಲೇಜ್ ಆಫ್ ಇಂಜಿನಿಯರಿಂಗ್ನಿಂದ ಮೆಕಾನಿಕಲ್ ಇಂಜಿನಿರಿಂಗ್ ಪದವಿ ಪಡೆದ ನಿತೀಶ್ ಜಯಪ್ರಕಾಶ್ ನಾರಾಯಣರ ಅನುಯಾಯಿಯಾಗಿ 1974-76ರ ಅವಧಿಯಲ್ಲಿ ನಡೆದ ಬಿಹಾರ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. 1975ರ ತುರ್ತು ಪರಿಸ್ಥಿತಿಯ ಸಂಧರ್ಭದಲ್ಲಿ ಬಂಧಿತರಾರು.
1985ರಲ್ಲಿ ಪ್ರಥಮ ಬಾರಿಗೆ ಬಿಹಾರ ವಿಧಾನಸಭೆಗೆ ಆಯ್ಕೆಯಾದ ನಿತೀಶ್, 1987ರಲ್ಲಿ ಯುವ ಲೋಕದಳದ ಅಧ್ಯಕ್ಷರಾಗಿ ಆಯ್ಕೆಯಾದರು. 1989ರಲ್ಲಿ ಬಿಹಾರ ಜನತಾದಳದ ಪ್ರಧಾನ ಕಾರ್ಯದರ್ಶಿಯಾದ ನಿತೀಶ್, ಅದೇ ವರ್ಷ ಮೊದಲ ಬಾರಿ ಲೋಕಸಭೆಗೆ ಚುನಾಯಿತರಾದರು. 1990ರಲ್ಲಿ ಕೇಂದ್ರದಲ್ಲಿ ಕೃಷಿ ಮತ್ತು ಸಹಕಾರ ಖಾತೆಯ ರಾಜ್ಯ ಸಚಿವ ಸ್ಥಾನ ಪಡೆದರು. 1991ರಲ್ಲಿ ಪುನಃ ಲೋಕಸಭೆಗೆ ಆಯ್ಕೆಯಾದ ನಿತೀಶ್ ಜನತಾದಳದ ರಾಷ್ಟ್ರಮಟ್ಟದ ಕಾರ್ಯದರ್ಶಿಯಾಗಿ ಮತ್ತು ಲೋಕಸಭೆಯಲ್ಲಿ ಜನತಾದಳದ ಉಪನಾಯಕರಾದರು.
1998-2000 ಅವಧಿಯಲ್ಲಿ ಕೆಂದ್ರ ಮಂತ್ರಿಮಂಡಲದಲ್ಲಿ ರೈಲು, ರಸ್ತೆ ಸಾರಿಗೆ ಮತ್ತು ಕೃಷಿ ಖಾತೆಗಳನ್ನು ವಹಿಸಿದ ನಿತೀಶ್, 2001ರಲ್ಲಿ ಕೇವಲ 7 ದಿನಗಳ ಕಾಲ ಬಿಹಾರದ ಮುಖ್ಯಮಂತ್ರಿಯಾದರು. ಅದೇ ವರ್ಷ ಮತ್ತೆ ಕೇಂದ್ರ ಸಂಪುಟ ಸೇರಿದ ನಿತೀಶ್, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರದ ಮಂತ್ರಿಮಂಡಲದಲ್ಲಿ 2001ರಿಂದ 2004ರ ವರೆಗೆ ಕೇಂದ್ರ ರೈಲು ಮಂತ್ರಿಯಾಗಿದ್ದರು. 2004ರ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟ ಸೋಲು ಕಂಡರೂ, ನಿತೀಶ್ 6ನೆ ಭಾರಿ ಲೋಕಸಭೆಗೆ ಆಯ್ಕೆಯಾಗಿ ಸಂಸತ್ತಿನಲ್ಲಿ ಸಂಯುಕ್ತ ಜನತಾದಳ ಶಾಸನ ಸಭೆಯ ನಾಯಕರಾದರು.
ನವೆಂಬರ್ 2005ರಲ್ಲಿ ನೆಡೆದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟವನ್ನು ಗೆಲುವಿನೆಡೆ ಕೊಂಡೊಯ್ದ ನೀತೀಶ್ ಕುಮಾರ್ ಲಾಲೂ ಪ್ರಸಾದ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾದಳದ 15 ವರ್ಷದ ಆಡಳಿತವನ್ನು ಕೊನೆಗೊಳಿಸಲು ಕಾರಣಕರ್ತರಾದರು. ಪ್ರಸಕ್ತದಲ್ಲಿ ನೀತೀಶ್ ಕುಮಾರ್ 6ನೇ ಬಾರಿ ಮುಖ್ಯಮಂತ್ರಿಗಳಾಗಿ ಬಿಹಾರ ರಾಜ್ಯದ ನಿರ್ವಹಣೆಯನ್ನು ನಡೆಸುತ್ತಿದ್ದಾರೆ.
ನೀತೀಶ್ ಕುಮಾರ್ ವಿದ್ಯಾಭ್ಯಾಸಕ್ಕೆ ಮಹತ್ವ ನೀಡಿ ಲಕ್ಷಾಂತರ ಶಾಲಾ ಶಿಕ್ಷಕರ ನೇಮಕ ಮಾಡಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರುಗಳು ಕೆಲಸ ಮಾಡುವುದನ್ನು ವ್ಯವಸ್ಥೆಗೊಳಿಸಿದ್ದಾರೆ. ಹಳ್ಳಿಗಳ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದಾರೆ. ಹಿಂಸಾತ್ಮಕ ಜನರ ನಡೆಗಳಿಗೆ ತಡೆ ಒಡ್ಡಿ ಕಾರ್ಮಿಕರ ವೇತನ ಹೆಚ್ಚಾಗಿ ಅವರು ನೆಮ್ಮದಿಯ ಜೀವನ ನಡೆಸಲು ಪ್ರೇರಣೆ ನೀಡುತ್ತಾ ಸಾಗಿದ್ದಾರೆ.
ನಮ್ಮ ದೇಶದ ಬುದ್ಧಿ ಜೀವಿಗಳು ಆ ಪಾರ್ಟಿ ಸರಿಯಿಲ್ಲ, ಅವನು ಈ ವಾದಿ, ಮತ್ತೊಬ್ಬ ಆ ವಾದಿ, ಅವನು ಎಡ, ಇವನು ಬಲ ಮತ್ತೊಬ್ಬ, ಅವನು ಜಾತ್ಯಾತೀತ, ಮತ್ತೊಬ್ಬ ಕೋಡಂಗಿ ಎಂಬಂತಹ ವಾದಗಳನ್ನು ಕೊಳಕು ರೀತಿಯಲ್ಲಿ ಮಾಡುತ್ತಾ ಸಾಗಿದ್ದೇವೆ. ರಾಜಕಾರಣಿಗಳೆಂದರೆ ಅಧಿಕಾರಕ್ಕಾಗಿ ಏನನ್ನೂ ಮಾಡುವವರು ಎಂದು ಬೇಜಬಾಬ್ದಾರಿ ತೀರ್ಮಾನ ಕೊಡುತ್ತ ಇರುತ್ತೇವೆ. ಈ ಮಧ್ಯೆ ಈ ರಾಜಕಾರಣದಲ್ಲಿರುವ ಕೆಲವು ಮಂದಿ ಹಗಲಿರುಳೂ ದೇಶಕ್ಕಾಗಿ ಶ್ರಮಿಸುತ್ತಿರುವುದನ್ನು ಗಮನಕ್ಕೆ ತಂದುಕೊಳ್ಳುವುದು ಮುಖ್ಯ.
ನಾನು ದೇಶದಲ್ಲಿ ಇವರ ಆಡಳಿತದಲ್ಲಿ ಎಲ್ಲವೂ ಸರಿ ಇದೆ. ಇನ್ನೊಬ್ಬರು ಸರಿ ಇಲ್ಲ. ಮುಂದೆ ಎಲ್ಲವೂ ಸರಿ ಹೋಗುತ್ತದೆ ಎಂದು ಎಂದೂ ನಂಬುವುದಿಲ್ಲ. ನೀತೀಶ್ ಕುಮಾರ್, ನರೇಂದ್ರ ಮೋದಿ ಅಂತಹ ನಿಷ್ಟಾಂತರ ದುಡಿಮೆಯನ್ನು ಅಪಾರವಾಗಿ ಗೌರವಿಸುತ್ತೇನೆ.
ನೀತೀಶ್ ಕುಮಾರ್ ಅವರ ನಿಷ್ಟಾವಂತ ಶ್ರಮ ದೇಶಿಗರಿಗೆ ಹೆಚ್ಚು ಉಪಯುಕ್ತವಾಗಲಿ. ಅಂತಹವರ ಪೀಳಿಗೆ ಮುಂದೂ ಉದಿಸುವಂತಹ ವಾತಾವರಣ ದೇಶದಲ್ಲಿ ಮತ್ತು ನಮ್ಮ ಹೃದಯಗಳಲ್ಲಿ ಮೂಡಲಿ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada
Please follow and like us: