ಉತ್ತರಾಖಂಡ, ಸೆಪ್ಟೆಂಬರ್ 08: ಹಾಲಿ ಬಿಜೆಪಿ ಶಾಸಕರ ನಿಧನದಿಂದ ತೆರವಾಗಿದ್ದ ಉತ್ತರಾಖಂಡದ ಬಾಗೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ಸೆಪ್ಟೆಂಬರ್ 5ರಂದು ಉಪಚುನಾವಣೆ ನಡೆದಿತ್ತು. ಇಂದು (ಸೆಪ್ಟೆಂಬರ್ 08) ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಭರ್ಜರಿ ಗೆಲವು ಸಾಧಿಸಿದೆ.
ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಅಭ್ಯರ್ಥಿಯಾಗಿ ಪಾರ್ವತಿ ದಾಸ್ ಬಾಗೇಶ್ವರ ವಿಧಾನಸಭಾ ಕ್ಷೇತ್ರದ ನೂತನ ಶಾಸಕಿಯಾಗಿ ಆಯ್ಕೆ ಆಗಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಯಾಗಿ ಬಸಂತ್ ಕುಮಾರ್ ಸ್ಪರ್ಧಿಸಿದ್ದರೆ, ಹಿಂದೆ 2014ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದ ರೈತ ಭಗವತಿ ಪ್ರಸಾದ್ ತ್ರಿಕೋಟಿ ಅವರನ್ನು ಸಮಾಜವಾದಿ ಪಕ್ಷ ಕಣಕ್ಕಿಳಿಸಿತ್ತು.
ಸದ್ಯ ಬಿಜೆಪಿ ಹಿಡಿತದಲ್ಲಿರುವ ಬಾಗೇಶ್ವರ ವಿಧಾನಸಭಾ ಕ್ಷೇತ್ರವನ್ನು ಗೆಲ್ಲಲು ಕಾಂಗ್ರೆಸ್ ಹರಸಾಹಸ ಪಟ್ಟಿತ್ತು, ಆದರೆ ಬಿಜೆಪಿ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳುವಲ್ಲಿ ಯಶ್ವಸಿಯಾಗಿದೆ. ಇನ್ನು ಉತ್ತರಾಖಂಡದಲ್ಲಿ ಇದುವರೆಗೆ ಒಟ್ಟು 14 ವಿಧಾನಸಭಾ ಉಪಚುನಾವಣೆಗಳು ನಡೆದಿದ್ದು, ಈ ಪೈಕಿ ಆಡಳಿತಾರೂಢ ಬಿಜೆಪಿ 13 ಬಾರಿ ಗೆಲುವು ಸಾಧಿಸಿತ್ತು.
ಬಾಗೇಶ್ವರ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದ ಚಂದನ್ ರಾಮದಾಸ್ ಏಪ್ರಿಲ್ 23 ರಂದು ಹೃದಯಾಘಾತದಿಂದ ನಿಧನರಾಗಿದ್ದು, ಅಂದಿನಿಂದ ಬಾಗೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕರ ಸ್ಥಾನ ತೆರವುಗೊಂಡಿತ್ತು. ಇದೀಗ ಅವರ ಪತ್ನಿಯೇ ಕ್ಷೇತ್ರದಲ್ಲಿ ಗೆಲವು ಸಾಧಿಸಿದ್ದಾರೆ.