ಬಲಗಿರ್: ನೀವು ಹಲವಾರು ಲವ್ ಸ್ಟೋರಿಗಳನ್ನು ನೋಡಿರುತ್ತೀರಿ. ಅವುಗಳಲ್ಲಿ ಕೆಲವೊಂದು ಯಶಸ್ಸಿನ ಹಾದಿ ಹಿಡಿದರೆ, ಇನ್ನು ಕೆಲವು ಲವ್ ಸ್ಟೋರಿಗಳು ವಿವಿಧ ಕಾರಣಗಳಿಂದ ವಿಫಲ ಹಾದಿ ಹಿಡಿಯುತ್ತವೆ. ಆದರೆ, ಇದೀಗ ನಾವು ಹೇಳಲು ಹೊರಟಿರುವ ಈ ಲವ್ ಸ್ಟೋರಿ ತುಂಬಾ ವಿಭಿನ್ನವಾಗಿದ್ದು, ಪ್ರೀತಿ ಕುರುಡು ಎಂಬ ಮಾತಿಗೆ ನಿಜವಾದ ಅರ್ಥವನ್ನು ನೀಡುತ್ತದೆ.
ಒಡಿಶಾದ ಬಲಗಿರ್ ಜಿಲ್ಲೆಯ ಮಂದಮಹುಲ್ ಗ್ರಾಮದ ದಿಲೀಪ್ ತಂಡಿ ಮತ್ತು ಅದೇ ಜಿಲ್ಲೆಯ ಬುರುಡಾ ಗ್ರಾಮದ ಚಾಂದಿನಿ ಬಾಘ್ ನಡುವೆ ಮಿಸ್ ಕಾಲ್ ಮೂಲಕ ಲವ್ ಶುರುವಾಗಿತ್ತು. ಆದರೆ, ದಿಲೀಪ್ ಅಂಧನಾಗಿದ್ದರೂ ಕೂಡ ಚಾಂದಿನಿ ಆತನನ್ನು ಮದುವೆ ಆಗಲು ನಿರ್ಧರಿಸುವ ಮೂಲಕ ನಿಜವಾದ ಪ್ರೀತಿ ಏನೆಂಬುದನ್ನು ನಿರೂಪಿಸಿದ್ದಾರೆ.
ಇಂದಿನ ಆಧುನಿಕ ಯುಗದಲ್ಲಿ ದೈಹಿಕ ಸಾಮರ್ಥ್ಯ, ಹಣ, ಸಂಪತ್ತು, ಘಟನೆ ಮತ್ತು ಸ್ಥಾನವನ್ನು ನೋಡಿ ಪ್ರೀತಿ ಮಾಡುವವರ ನಡುವೆ ಚಾಂದಿನಿ ತಾನು ಪ್ರೀತಿ ಮಾಡುತ್ತಿರುವ ಯುವಕ, ಅಂಧ ಅಂತಾ ಗೊತ್ತಿದ್ದರೂ ಆತನ ಜತೆಗೆ ಮದುವೆಗೆ ಒಪ್ಪಿಕೊಂಡಿರುವುದು ನಿಜವಾದ ಪ್ರೀತಿಗೆ ತಾಜಾ ಉದಾಹರಣೆಯಾಗಿದೆ.ಚಾಂದಿನಿ ಮತ್ತು ದಿಲೀಪ್ ಅವರ ಪ್ರೀತಿಯನ್ನು ಕಂಡು ಮೂಕವಿಸ್ಮಿತರಾಗಿರುವ ಎರಡು ಕುಟುಂಬದವರು ಇಬ್ಬರ ಮದುವೆಗೆ ಹಸಿರು ನಿಶಾನೆ ಸಹ ತೋರಿದ್ದಾರೆ. ಇದೀಗ ಮದುವೆ ಮೂಲಕ ಇಬ್ಬರ ಪ್ರೀತಿಯನ್ನು ಮತ್ತಷ್ಟು ಗಟ್ಟಿಗೊಳಿಸಲು ಇಬ್ಬರು ನಿರ್ಧರಿಸಿದ್ದು, ಅಂಧ ಅಂತಾ ಗೊತ್ತಿದ್ದರೂ ಆತನನ್ನು ಒಪ್ಪಿಕೊಂಡಿರುವ ಚಾಂದಿನಿ ನಿರ್ಧಾರಕ್ಕೆ ಗ್ರಾಮದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.(ಏಜೆನ್ಸೀಸ್)
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada