ನಾಸಿಕ್, ಸೆ.21 -ಈರುಳ್ಳಿ ಮೇಲಿನ ರಫ್ತು ಸುಂಕವನ್ನು ಶೇ.40ಕ್ಕೆ ಹೆಚ್ಚಿಸುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ಈರುಳ್ಳಿ ವ್ಯಾಪಾರಸ್ಥರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿನ ಹರಾಜುಗಳನ್ನು ಸ್ಥಗಿತಗೊಳಿಸಿ ಡಿಸೆಂಬರ್ 31 ರವರೆಗೆ ಜಾರಿಯಲ್ಲಿರುವಂತೆ ಪ್ರತಿಭಟನೆ ಮುಂದುವರೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕೇಂದ್ರದ ಈ ರಫ್ತು ಸುಂಕ ಹೆಚ್ಚಳದ ನಿರ್ಧಾರದಿಂದ ಈರುಳ್ಳಿ ರಫ್ತು ಕಷ್ಟವಾಗುತ್ತದೆ. ರೈತರಿಗೆ ಅಪಾರ ನಷ್ಟವಾಗುತ್ತದೆ. ಆದ್ದರಿಂದ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಎಲ್ಲಾ ಎಪಿಎಂಸಿಗಳಲ್ಲಿ ಈರುಳ್ಳಿ ಹರಾಜು ಅನಿರ್ದಿಷ್ಟಾವಗೆ ಸ್ಥಗಿತಗೊಳಿಸಲು ನಾವು ನಿರ್ಧರಿಸಿದ್ದೇವೆ ಎಂದು ಪ್ರತಿಭಟನಾನಿರತರು ದೂರಿದ್ದಾರೆ.
ಈಗಾಗಲೇ ಆಗಸ್ಟ್ 20ರಂದು ಭಾರತದ ಅತಿದೊಡ್ಡ ಸಗಟು ಈರುಳ್ಳಿ ಮಾರುಕಟ್ಟೆಯಾದ ಲಾಸಲ್ಗಾಂವ್ ಸೇರಿದಂತೆ ನಾಸಿಕ್ ಜಿಲ್ಲೆಯ ಬಹುತೇಕ ಎಪಿಎಂಸಿಗಳಲ್ಲಿ ಈರುಳ್ಳಿಯ ಹರಾಜುಗಳನ್ನು ಮುಚ್ಚಲಾಗಿದೆ. ನಮ್ಮ ಬೇಡಿಕೆಗಳಿಗೆ ಪರಿಹಾರ ಕಂಡುಕೊಳ್ಳಲು ನಾವು ಸೆಪ್ಟೆಂಬರ್ 19ರವರೆಗೆ ಸರ್ಕಾರಕ್ಕೆ ಕಾಲಾವಕಾಶ ಕೊಟ್ಟಿದ್ದೇವೆ. ಆದರೆ ನಮ್ಮ ಬೇಡಿಕೆಗಳು ಇನ್ನೂ ಒಪ್ಪದ ಕಾರಣ, ನಾವು ಈರುಳ್ಳಿ ಹರಾಜು ಅನಿರ್ದಿಷ್ಟಾವಗೆ ಸ್ಥಗಿತಗೊಳಿಸಲು ನಿರ್ಧರಿಸಿದ್ದೇವೆ ಎಂದಿದ್ದಾರೆ.
ಈರುಳ್ಳಿ ಮೇಲಿನ ರಫ್ತು ಸುಂಕವನ್ನು ರದ್ದುಗೊಳಿಸುವುದು, ಮಾರುಕಟ್ಟೆ ಶುಲ್ಕದಲ್ಲಿ ಶೇ.50ರಷ್ಟು ಕಡಿತ, ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ ಮತ್ತು ಭಾರತೀಯ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ ಹರಾಜಿನಲ್ಲಿ ಭಾಗವಹಿಸುವುದು ಸೇರಿದಂತೆ ಈರುಳ್ಳಿ ಸಾಗಣೆಯಲ್ಲಿ ಶೇ.50ರಷ್ಟು ಸಬ್ಸಿಡಿ ಇತರೆ ಬೇಡಿಕೆಗಳನ್ನು ವ್ಯಾಪಾರಿಗಳು ಮುಂದಿಟ್ಟಿದ್ದಾರೆ.
ಬಂದ್ ಆಚರಿಸುವುದು (ಈರುಳ್ಳಿ ಹರಾಜು ಸ್ಥಗಿತಗೊಳಿಸುವುದು) ಸರಿಯಲ್ಲ . ಸಹಕಾರ ಮತ್ತು ಮಾರುಕಟ್ಟೆ ಇಲಾಖೆಗಳ ಕಾರ್ಯದರ್ಶಿಗಳು ನಿಯಮಗಳ ಪ್ರಕಾರ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿ ನಾಸಿಕ್ ಜಿಲ್ಲಾಧಿಕಾರಿಗಳು ಅಗತ್ಯ ಕ್ರಮವನ್ನು ತೆಗೆದುಕೊಳ್ಳುತ್ತಾರೆ ಎಂದು ಮಹಾರಾಷ್ಟ್ರದ ಮಾರುಕಟ್ಟೆ ಸಚಿವ ಅಬ್ದುಲ್ ಸತ್ತಾರ್ ಹೇಳಿದ್ದರು.
ನಾಸಿಕ್ ಜಿಲ್ಲಾ ಈರುಳ್ಳಿ ವರ್ತಕರ ಸಂಘದ ಅಧ್ಯಕ್ಷ ಖಂಡು ದೇವರೆ ಅವರು ಸೆ.13ರಂದು ಸಚಿವ ಸತ್ತಾರ್ ಅವರಿಗೆ ಪತ್ರ ಬರೆದು ನಾಲ್ಕು ಬೇಡಿಕೆಗಳನ್ನು ಪ್ರಸ್ತಾಪಿಸಲಾಗಿದೆ. ಈ ಹಿನ್ನಲೆಯಲ್ಲಿ ಸಚಿವರು ಸೆ.26ರಂದು ಮಾರುಕಟ್ಟೆ ವಿಭಾಗದ ಅಧಿಕಾರಿಗಳ ಸಭೆ ಆಯೋಜಿಸಿದ್ದಾರೆ.
ವ್ಯಾಪಾರಸ್ಥರು ಪ್ರತಿಭಟನೆಯನ್ನು ಮುಂದೂಡುವಂತೆ ಮನವಿ ಮಾಡಿದ್ದಾರೆ. ಹೀಗಿದ್ದರೂ ವರ್ತಕರು ಮತ್ತು ದಲ್ಲಾಳಿಗಳು ಮುಷ್ಕರಕ್ಕೆ ಮುಂದಾಗಿದ್ದರಿಂದ ರೈತರಿಗೆ ವಿವಿಧ ಕೃಷಿ ಉತ್ಪನ್ನಗಳ ಮಾರಾಟದಲ್ಲಿ ಸಮಸ್ಯೆ ಉಂಟಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ನಿನ್ನೆ (ಸೆ.20) ಸರಕಾರ ನಡೆಸಿದ ಸಭೆಯಲ್ಲೂ ವರ್ತಕರು ಮತ್ತು ದಲ್ಲಾಳಿಗಳು ತಮ್ಮ ನಿಲುವಿಗೆ ಅಚಲವಾಗಿದ್ದು, ಪರಿಣಾಮ ತಕ್ಷಣ ಕಾನೂನು ಕ್ರಮದ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಸುಪ್ರೀಂ ಆದೇಶದ ಬೆನ್ನಲ್ಲೇ ರಾಜ್ಯಾದ್ಯಂತ ತೀವ್ರಗೊಂಡ ಕಾವೇರಿ ಕಿಚ್ಚು
ಅದರಂತೆ ಮಹಾರಾಷ್ಟ್ರ ಕೃಷಿ ಉತ್ಪನ್ನ ಮಾರುಕಟ್ಟೆ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯಿದೆ, 1963ರ ಪ್ರಕಾರ, ಎಲ್ಲಾ ಎಪಿಎಂಸಿಗಳು ಐಚ್ಛಿಕ ವ್ಯವಸ್ಥೆಗಳನ್ನು ಮಾಡಬೇಕು ಮತ್ತು ಕೃಷಿ ಉತ್ಪನ್ನಗಳ ಮಾರಾಟ ಮತ್ತು ಖರೀದಿ ವ್ಯವಹಾರಗಳನ್ನು ಮುಂದುವರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು.
ಅಂತಹ ವ್ಯಾಪಾರಿಗಳ ಪರವಾನಗಿಯನ್ನು ಅಮಾನತುಗೊಳಿಸುವ ಅಥವಾ ರದ್ದುಗೊಳಿಸುವ ಹಕ್ಕು ಎಪಿಎಂಸಿಗಳಿಗೆ ಇದೆ. ನಿಬಂಧನೆಯ ಪ್ರಕಾರ, ಎಪಿಎಂಸಿಗಳು ಅಂತಹ ವ್ಯಾಪಾರಿಗಳ ಪರವಾನಗಿಯನ್ನು ತಕ್ಷಣವೇ ಅಮಾನತುಗೊಳಿಸಬೇಕು ಅಥವಾ ರದ್ದುಗೊಳಿಸಬೇಕು. ಜತೆಗೆ ಎಪಿಎಂಸಿಗಳಲ್ಲಿ ಸರಕು ಖರೀದಿಸಲು ಬಯಸುವ ಹೊಸ ಖರೀದಿದಾರರಿಗೆ ಪರವಾನಗಿ ನೀಡಲು ಅಗತ್ಯ ಪ್ರಕ್ರಿಯೆ ಜಾರಿಗೊಳಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಎಪಿಎಂಸಿ ಆದೇಶ ಪಾಲಿಸಲು ವಿಫಲವಾದರೆ ಆಡಳಿತ ಮಂಡಳಿ ಹಾಗೂ ಕಾರ್ಯದರ್ಶಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.