ದಾವಣಗೆರೆ, ಸೆಪ್ಟೆಂಬರ್ 14: ಸ್ವಲ್ಪ ಯಾಮಾರಿದ್ದರೂ ಜೀವ ಹೋಗುತಿತ್ತು. ರೈಲಿನ ಕೆಳಗೆ ಬಿದ್ದರೂ ಪ್ರಾಣಾಪಾಯದಿಂದ ಪಾರಾಗಿರುವುದು ನಿಜಕ್ಕೂ ರೋಚಕವೇ. ರೈಲ್ವೆ ಹಳಿಯೊಳಗೆ ಬಿದ್ದ ಶಿಕ್ಷಕರೊಬ್ಬರು ಪವಾಡಸದೃಶವಾಗಿ ಪಾರಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆ ನಗರದ ರೈಲ್ವೆ ನಿಲ್ದಾಣದಲ್ಲಿ ಬಿ.ದುರ್ಗಕ್ಕೆ ಹೊರಟಿದ್ದ ಮುಖ್ಯ ಶಿಕ್ಷಕ ಶಿವಕುಮಾರ್ ಪ್ರಾಣಾಪಾಯದಿಂದ ಪಾರಾದವರು.
ದಾವಣಗೆರೆ ರೈಲ್ವೆ ನಿಲ್ದಾಣದ ಒಂದನೇ ಫ್ಲಾಟ್ ಫಾರಂನಿಂದ 2 ನೇ ಫ್ಲಾಟ್ ಫಾರಂ ಕಡೆಗೆ ರೈಲು ಹೊರಟಿತ್ತು. ಈ ವೇಳೆ ಏಕಾಏಕಿ ಗೂಡ್ಸ್ ರೈಲು ಬಂದಿದೆ. ರೈಲ್ವೆ ಟ್ರ್ಯಾಕ್ ದಾಟಲಾಗದೇ ಶಿಕ್ಷಕ ಶಿವಕುಮಾರ್ ಕೆಳಗಡೆ ಬಿದ್ದಿದ್ದಾರೆ. ಮೇಲೆ ಏಳಲು ಯತ್ನಿಸಿದರೂ ಸಾಧ್ಯವಾಗಲಿಲ್ಲ.
ಅಲ್ಲಿಂದ ತಪ್ಪಿಸಿಕೊಂಡು ಹೊರ ಬರಲು ಪರದಾಟ ನಡೆಸಿದ ವಿಡಿಯೋ ವೈರಲ್ ಆಗಿದೆ. ಹಳಿ ಮೇಲೆ ಬಿದ್ದಿದ್ದ ಶಿವಕುಮಾರ್ ಅವರು ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ವಿಡಿಯೋ ವೈರಲ್ ಆಗಿದೆ. ಬೆಳಿಗ್ಗೆ 8.30ಕ್ಕೆ ಬಿ. ದುರ್ಗಕ್ಕೆ ಹೋಗುವಾಗ ಈ ದುರ್ಘಟನೆ ನಡೆದಿದೆ.
ರೈಲ್ವೆ ನಿಲ್ದಾಣದಲ್ಲಿದ್ದ ಸ್ಥಳೀಯರು ಶಿವಕುಮಾರ್ ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಶಿವಕುಮಾರ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಘಟನೆ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.
ಮಹಿಳೆ ಮೇಲೆ ಹಲ್ಲೆ: ಆರೋಪಿ ಸಿಸಿ ಟಿವಿಯಲ್ಲಿ ಸೆರೆ
ಮಹಿಳೆಯೊಬ್ಬರು ಮನೆಯಲ್ಲಿ ಒಬ್ಬರೇ ಇರುವುದನ್ನು ಗಮನಿಸಿ ಕಳ್ಳನೊಬ್ಬ ಹಲ್ಲೆ ಮಾಡಿ 5 ಲಕ್ಷ ರೂಪಾಯಿ ದರೋಡೆ ಮಾಡಿಕೊಂಡು ಹೋದ ಘಟನೆ ನಗರದ ಕುಂದವಾಡ ರಸ್ತೆಯಲ್ಲಿನ ಲೇಕ್ ವೀವ್ ಬಡಾವಣೆಯಲ್ಲಿ ನಡೆದಿದೆ.
ಯೋಗೇಶ್ವರಿ ಹಲ್ಲೆಗೊಳಗಾದ ಮಹಿಳೆ. ಶ್ರೀನಾಥ್ ಎಂಬುವವರ ಪತ್ನಿಯಾದ ಯೋಗೇಶ್ವರಿ ಅವರು, ಮನೆಯಲ್ಲಿ ಒಬ್ಬರೇ ಇದ್ದರು. ಕಸ ಹಾಕಲು ಮನೆಯಿಂದ ಹೊರಗಡೆ ಬಂದಿದ್ದಾರೆ. ಈ ವೇಳೆ ಮನೆಯೊಳಗೆ ಹೋದ ಕಳ್ಳನೊಬ್ಬ ಅಲ್ಲೇ ಅವಿತು ಕುಳಿತಿದ್ದಾನೆ. ಯೋಗೇಶ್ವರಿ ತಲೆಗೆ ಕಲ್ಲಿನಿಂದ ಹೊಡೆದಿದ್ದಾನೆ. ಆಮೇಲೆ ಮಹಿಳೆ ಬರುತ್ತಿದ್ದಂತೆ ಮನಬಂದಂತೆ ಥಳಿಸಿ ಮನೆಯಲ್ಲಿದ್ದ 5 ಲಕ್ಷ ರೂಪಾಯಿ ದೋಚಿ ಪರಾರಿಯಾಗಿದ್ದಾನೆ.
ಶ್ರೀನಾಥ್ ಅವರು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ನಿಮಿತ್ತ ಹೊರಗಡೆ ಹೋಗಿದ್ದರು. ಮನೆಯ ಬಾಗಿಲು ತೆಗೆದು ಕಸ ಹಾಕಲು ಹೊರಗಡೆ ಹೋಗುತ್ತಿದ್ದಂತೆ ಒಳನುಗ್ಗಿದ್ದ ಕಳ್ಳನು ಯೋಗೇಶ್ವರಿ ಹಾಗೂ ಅವರ 8 ವರ್ಷದ ಪುತ್ರನನ್ನು ಕೊಠಡಿಯಲ್ಲಿ ಕೂಡಿ ಹಾಕಿದ್ದಾನೆ. ಹೊರಗಡೆ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಚಾಕು ತೋರಿಸಿ ಹಣ, ಒಡವೆ ನೀಡುವಂತೆ ಬೆದರಿಕೆ ಹಾಕಿದ್ದಾನೆ. ಇಲ್ಲದಿದ್ದರೆ ಪರಿಣಾಮ ನೆಟ್ಟಗಿರದು ಎಂದು ಬೆದರಿಸಿದ್ದಾನೆ ಎನ್ನಲಾಗಿದೆ.
ಪುತ್ರನ ಚಿಕಿತ್ಸೆಗಾಗಿ ಹಣವನ್ನು ಮನೆಯಲ್ಲಿಟ್ಟಿದ್ದರು. ಕಳ್ಳ ಮನೆಯ ಒಳಗೆ ಹಾಗೂ ಹೊರಗೆ ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ದೃಶ್ಯಗಳನ್ನು ಆಧರಿಸಿ ವಿದ್ಯಾನಗರ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
ಮನೆಯಲ್ಲಿ ಒಬ್ಬಂಟಿಯಾಗಿರುವ ಮಹಿಳೆಯರು ಎಚ್ಚರದಿಂದ ಇರಬೇಕು. ಮನೆಯ ಸುತ್ತಮುತ್ತ ಯಾರಾದರೂ ಇದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು. ಮನೆ ಬಾಗಿಲು ತೆಗೆದು ಹೋಗುವುದಕ್ಕಿಂತ ಮುಂಚೆ ಪರಿಶೀಲಿಸಿ. ಮಾತ್ರವಲ್ಲ, ಅಪರಿಚಿತರು ಬಂದರೆ ಎಚ್ಚರದಿಂದ ಇರಿ. ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.