ಮಿಷನ್ 123 ಅಂತಾ H.D ಕುಮಾರಸ್ವಾಮಿ ರಾಜ್ಯ ಸಂಚಾರ ಮಾಡ್ತಿದ್ದಾರೆ. ಈ ನಡುವೆ ಇದೇ ನನ್ನ ಕೊನೇ ಚುನಾವಣೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದರು. ಈ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಯಾಗ್ತಿದ್ದಂತೆ ಉಲ್ಟಾ ಹೊಡೆದಿದ್ದಾರೆ. ನಾನು ಚನ್ನಪಟ್ಟಣ ಕ್ಷೇತ್ರ ಬಿಟ್ಟುಕೊಡುವ ಬಗ್ಗೆ ಮಾತಾಡಿದ್ದೇನೆ ಅಂದಿದ್ದಾರೆ. ಮೈತ್ರಿ ಸರ್ಕಾರದಲ್ಲಿ 2 ಬಾರಿ ಸಿಎಂ ಆಗಿರುವ ಕುಮಾರಸ್ವಾಮಿ, ಈ ಬಾರಿ ಪೂರ್ಣ ಬಹುಮತದೊಂದಿಗೆ ಮತ್ತೊಮ್ಮೆ ಸಿಎಂ ಆಗುವ ಆಸೆಯೊಂದಿಗೆ, ಜೆಡಿಎಸ್ ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತರಲು ದಳಪತಿ ಹೋರಾಟ ಮಾಡ್ತಿದ್ದಾರೆ. ಇದರ ನಡುವೆ ಮಾಜಿ ಸಿಎಂ ಹೆಚ್ಡಿಕೆ ನೀಡಿರುವ ಅದೊಂದು ಹೇಳಿಕೆ ರಾಜಕೀಯದಲ್ಲಿ ಸಂಚಲನವನ್ನೇ ಸೃಷ್ಟಿಸಿದೆ. ಚನ್ನಪಟ್ಟಣದಲ್ಲಿ ಬಮುಲ್ ಉತ್ಸವದಲ್ಲಿ ಪಾಲ್ಗೊಂಡಿದ್ದ ಹೆಚ್ಡಿಕೆ ಅಚ್ಚರಿ ಹೇಳಿಕೆ ನೀಡಿದ್ದಾರೆ. 2028ರಲ್ಲಿ ಚನ್ನಪಟ್ಟಣದಿಂದ ಸ್ಪರ್ಧಿಸುವುದಿಲ್ಲ. ಇಲ್ಲಿನ ಕಾರ್ಯಕರ್ತರಿಗೆ ಟಿಕೆಟ್ ನೀಡುತ್ತೇನೆ. ಚನ್ನಪಟ್ಟಣದ ಅಭ್ಯರ್ಥಿಯಾಗಿ ವಿಧಾನಸಭೆಗೆ 2023ರ ಚುನಾವಣೆ ನನ್ನ ಕೊನೆಯ ಚುನಾವಣೆ. ಮುಂದಿನದ್ದು ದೈವ ಇಚ್ಛೆಯಂತೆ ಆಗುತ್ತೆ ಎಂದು ಮಾರ್ಮಿಕವಾಗಿ ನುಡಿದ್ರು. ಚನ್ನಪಟ್ಟಣ ಬಿಟ್ಟು ನಾನು ಎಲ್ಲೂ ಹೋಗೋ ಪ್ರಶ್ನೆಯಿಲ್ಲ. 2028ಕ್ಕೆ ನಮ್ಮ ಕಾರ್ಯಕರ್ತರಲ್ಲಿ ಒಬ್ಬರು ಎಲೆಕ್ಷನ್ಗೆ ತಯಾರು ಆಗಬೇಕು. 2023 ವಿಧಾನಸಭೆಗೆ ನನ್ನದು ಕೊನೆ ಚುನಾವಣೆ. ಮುಂದಿನ ದಿನಗಳಲ್ಲಿ ಭಗವಂತ ಬರೆದಂಗೆ ಆಗುತ್ತದೆ. ಇದು ಕೊನೆ ಚುನಾವಣೆ. ಹೆಚ್ಡಿ ಕುಮಾರಸ್ವಾಮಿ, ಮಾಜಿ ಸಿಎಂ ತಂದೆಯನ್ನು ನೆನೆದು ಭಾವುಕರಾದ ಕುಮಾರಸ್ವಾಮಿ ತಮ್ಮ ಕೊನೆಯ ದಿನದಲ್ಲೂ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂಬ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹೋರಾಟ ಅಜರಾಮರವಾಗಿದೆ. ಪ್ರಸ್ತುತ ಅವರು ಯಾವ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುವ ಮಟ್ಟಿಗೆ ಇಲ್ಲ. ಅವರ ಜೀವನದುದ್ದಕ್ಕೂ ಹೋರಾಟ ಮಾಡಿಕೊಂಡು ಬಂದಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಂದೆಯ ಹಿಂದಿನ ದಿನಗಳನ್ನು ನೆನೆದು ಭಾವುಕರಾದರು. ದೇವೇಗೌಡರನ್ನ ದೇಶದ ಪ್ರಧಾನಮಂತ್ರಿ ಮಾಡಬೇಕಾದರೇ, ದೇವರು ಹೋಗಿ ಆ ಜಾಗಕ್ಕೆ ಕೂರಿಸಿದೆ. ನನ್ನ ಹಳ್ಳಿಯ ರೈತರು ಆ ಜಾಗಕ್ಕೆ ಅವರನ್ನ ಕೂರಿಸಿದ್ದು. ಇವತ್ತು ಹೇಳುತ್ತೇನೆ ನಾನು ಯಾರಿಗೂ ಸಲಾಂ ಹೊಡೆಯಲ್ಲ. ಹೆಚ್ಡಿ ಕುಮಾರಸ್ವಾಮಿ, ಮಾಜಿ ಸಿಎಂ ರಾಷ್ಟ್ರ ರಾಜಕಾರಣದ ಅಖಾಡಕ್ಕೆ ಇಳೀತಾರಾ ಹೆಚ್ಡಿಕೆ?ಇನ್ನು ತಮ್ಮ ಹೇಳಿಕೆ ಬಗ್ಗೆ ಸಮರ್ಥನೆ ನೀಡಿರುವ ಹೆಚ್ಡಿಕೆ ನಾನು ರಾಜಕೀಯಕ್ಕೆ ವಿದಾಯ ಹೇಳುತ್ತಿಲ್ಲ. ಚನ್ನಪಟ್ಟಣದಲ್ಲಿ ಮಾತ್ರ 2023ಕ್ಕೆ ಕೊನೆಯ ಸ್ಪರ್ಧೆ. ಈ ಬಾರಿ 5 ವರ್ಷದ ಸರ್ಕಾರ ತಂದು ಜನತೆಯ ಬದುಕಿಗೆ ಭರವಸೆ ಈಡೇರಿಸುತ್ತೇನೆ. ನಂತರ ನಾನು ರೆಸ್ಟ್ ತೆಗೆದುಕೊಳ್ಳಬೇಕಲ್ಲಾ. ಅದಕ್ಕೆ ಕೊನೆಯ ವಿಧಾನಸಭೆ ಚುನಾವಣೆ ಅಂದೆ. ಮುಂದೆ ದೇವರ ಇಚ್ಛೆಯಂತೆ ಆಗುತ್ತೆ ಎಂದು ಸ್ಪಷ್ಟನೆ ನೀಡಿದರು. ಇನ್ನು ಇದೇ ವೇಳೆ ಹಾಸನ ಟಿಕೆಟ್ ಗೊಂದಲದ ಬಗ್ಗೆಯೂ ಪ್ರತಿಕ್ರಿಯಿಸಿದ ಹೆಚ್ಡಿಕೆ, ಇನ್ನೆರಡು ದಿನದಲ್ಲಿ ಎಲ್ಲವೂ ಬಗೆಹರಿಯಲಿದೆ ಎಂದ್ರು. ರಾಜಕೀಯಕ್ಕೆ ವಿದಾಯ ಹೇಳಿಲ್ಲ ರಾಜಕೀಯ ಬಿಡುತ್ತೇನೆ ಎಂದು ಹೇಳಿದ್ದೇನಾ? ವಿಧಾನಸಭೆಗೆ ಇದು ಕೊನೆ ಚುನಾವಣೆ ಅಂತಾ ಹೇಳಿದ್ದೀನಿ. ರಾಜಕೀಯ ಬಿಡುತ್ತೇನೆ ಅಂತಲ್ಲ ಅದರರ್ಥ. ಬೇರೆ ರೀತಿಯ ಆಯಕ್ಟಿವಿಟಿಸ್ ಇರುತ್ತಾವೆ. ಅದು ನನ್ನ ಹಣೆಯಲ್ಲಿ ಏನು ಬರೆದಿರುತ್ತೋ ಗೊತ್ತಿಲ್ಲ ನನಗೆ. ದೇವರು ಏನು ಮಾಡ್ತಾನೆ ಅಂತಾ ನೋಡೋಣ. 2 ಪಟ್ಟಿಯಲ್ಲಿ ಹಾಸನ ಟಿಕೆಟ್ ಘೋಷಣೆ ದೇವೇಗೌಡರ ಆರೋಗ್ಯದ ಪರಿಸ್ಥಿತಿಗಳಲ್ಲಿ ಅವರು ಸ್ವಂತ ನಿರ್ಧಾರ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲ. ಕೂತು ಎಲ್ಲರೂ ಸೇರಿ ತೀರ್ಮಾನ ಮಾಡುತ್ತೇವೆ. 2 ಲಿಸ್ಟ್ನಲ್ಲಿ ಹಾಸನದ ಟಿಕೆಟ್ ಬಗ್ಗೆಯು ಇರುತ್ತೆ. ಹೆಚ್ಡಿ.ಕುಮಾರಸ್ವಾಮಿ, ಮಾಜಿ ಸಿಎಂ ರಾಜ್ಯ ರಾಜಕೀಯದಲ್ಲಿ ದಳಪತಿ ಹೊಸ ದಾಳ ಉರುಳಿಸಿದ್ದು, ರಾಷ್ಟ್ರ ರಾಜಕಾರಣದತ್ತ ಮುಖ ಮಾಡಲು ಮುಂದಾಗಿದ್ದಾರಾ ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada