ಬೀದರ್ ಬಿದ್ರಿ ಕಲೆಯಿಂದಾಗಿಯೂ ರಾಷ್ಟ್ರಮಟ್ಟದಲ್ಲಿ ಹೆಸರಾಗಿದೆ. ಹಲವಾರು ದಶಕಗಳಿಂದಲೂ ಬಿದ್ರಿ ಕಲಾಕೃತಿಗಳ ರಚನೆ ಕಾರ್ಯದಲ್ಲಿ ತೊಡಗಿಸಿಕೊಂಡ ಅನೇಕರು ಕರ್ನಾಟಕ ಸರ್ಕಾರದ ಪ್ರಶಸ್ತಿ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಗಿಟ್ಟಿಸಿ ಬೀದರ ಜಿಲ್ಲೆಯ ಕೀರ್ತಿ ಹಬ್ಬಿಸಿದ್ದಾರೆ.
ಇಂತಹ ಮಹತ್ವದ ಪಾರಂಪರಿಕ ಕಲೆಗಳಲ್ಲೊಂದಾದ ಪ್ರಸಿದ್ಧ ಬಿದ್ರಿ ಕಲೆಗೆ ಪುನಶ್ಚೇತನ ಮತ್ತು ಈ ಬಿದ್ರಿ ಕಲೆಯ ಕರಕುಶಲಗಾರರಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸುವ ಕುರಿತಂತೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರತ್ನಪ್ರಭ ಅವರು ಹಾಗೂ ಬೀದರ್ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಇತ್ತೀಚೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಸಿದ ವಿಡಿಯೋ ಸಂವಾದ ಮತ್ತು ಸಭೆಯಲ್ಲಿ ಸಮಗ್ರ ಚರ್ಚೆ ನಡೆಸಿದರು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಗಡಿನಾಡು ಬೀದರ್ ಜಿಲ್ಲೆಗೆ ಬಿದ್ರಿ ಕಲೆಯಿಂದಲೂ ವಿಶೇಷ ಮಾನ್ಯತೆ ಸಿಕ್ಕಿದೆ. ಹೀಗಾಗಿ ಈ ಕಲೆಗೆ ಪುನಶ್ವೇತನ ಕೊಡಲು ಮತ್ತು ಬಿದ್ರಿ ಕಲೆಯಂತಹ ಕಸುಬನ್ನೇ ನಂಬಿ ಬದುಕು ನಡೆಸುವಂತಹ ಕರಕುಶಲಗಾರರ ಕಲ್ಯಾಣದ ಹಿನ್ನೆಲೆಯಲ್ಲಿ ಕಾರ್ಯಯೋಜನೆ ರೂಪಿಸಿಕೊಳ್ಳುವುದು ಎಂದರು.