ಭೋಪಾಲ್: ಸ್ವಾಮಿ ವಿವೇಕಾನಂದ ಮತ್ತು ಲೋಕಮಾನ್ಯ ತಿಲಕರಿಗೆ ಸ್ಫೂರ್ತಿ ನೀಡಿದ ಸನಾತನ ಧರ್ಮವನ್ನು ಈ ಇಂಡಿಯಾ ಮೈತ್ರಿಕೂಟದ (INDIA Alliance) ಜನರು ಅಳಿಸಿ ಹಾಕಲು ಬಯಸುತ್ತಿದ್ದಾರೆ. ಈ ಒಕ್ಕೂಟವು ಸನಾತನ ಧರ್ಮವನ್ನು (Sanatan Dharma Row) ನಾಶ ಮಾಡಲು ಬಯಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ವಿಪಕ್ಷಗಳ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಒಕ್ಕೂಟದ ನಾಯಕರು ಬಹಿರಂಗವಾಗಿ ಸನಾತನ ಧರ್ಮವನ್ನು ಗುರಿಯಾಗಿಸಲು ಆರಂಭಿಸಿದ್ದಾರೆ. ನಾಳೆ ನಮ್ಮ ಮೇಲೆ ದಾಳಿಯನ್ನು ಹೆಚ್ಚಿಸುತ್ತಾರೆ. ದೇಶದಾದ್ಯಂತ ಎಲ್ಲಾ ಸನಾತನಿಗಳು ಮತ್ತು ನಮ್ಮ ದೇಶವನ್ನು ಪ್ರೀತಿಸುವ ಜನರು ಎಚ್ಚೆತ್ತುಕೊಳ್ಳಬೇಕು. ಅಂತಹವರನ್ನು ನಾವು ತಡೆಯಬೇಕು ಎಂದು ಕರೆ ನೀಡಿದರು.
NDIA ಒಕ್ಕೂಟಕ್ಕೆ INDI ಎಂದು ಕರೆದ ಪ್ರಧಾನಿ ಮೋದಿ, INDI ಒಕ್ಕೂಟಕ್ಕೆ ನಾಯಕರಿಲ್ಲ. ಭಾರತದ ಸಂಸ್ಕೃತಿಯ ಮೇಲೆ ದಾಳಿ ಮಾಡಲು ಗುಪ್ತ ಕಾರ್ಯಸೂಚಿಯನ್ನು ಮಾಡಿದೆ. ಸನಾತನ ಸಂಸ್ಕೃತಿಯನ್ನು ಕೊನೆಗೊಳಿಸುವ ನಿರ್ಣಯದೊಂದಿಗೆ ಮೈತ್ರಿ ಅನುಷ್ಠಾನಕ್ಕೆ ಬಂದಿದೆ. ದೇಶ ಮತ್ತು ಸಮಾಜವನ್ನು ವಿಭಜನೆ ಮಾಡುವ ಕೆಲಸ ಮಾಡ್ತಿದೆ. ಭಾರತದ ಸಂಸ್ಕೃತಿ ಮೇಲೆ ದಾಳಿ ಮಾಡುವ ಕುತಂತ್ರ ಮಾಡಿದೆ. ಸಾವಿರಾರು ವರ್ಷಗಳ ನಂಬಿಕೆ ಮುಗಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಇದಕ್ಕೂ ಮುನ್ನ ಸನಾತನ ಧರ್ಮದ ವಿರುದ್ಧ ನೀಡುವ ಹೇಳಿಕೆಗಳನ್ನು ನೋಡಿಕೊಂಡು ಸುಮ್ಮನಿರದಂತೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಕ್ಯಾಬಿನೆಟ್ ಸಚಿವರಿಗೆ ಸೂಚನೆ ನೀಡಿದ್ದರು. ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಬಳಿಕ ಬಿಜೆಪಿ ನಾಯಕರು ಇಂಡಿಯಾ ಒಕ್ಕೂಟವನ್ನು ಟಾರ್ಗೆಟ್ ಮಾಡಲು ಆರಂಭಿಸಿದ್ದರು.