ಬಾಗಲಕೋಟೆ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ವ್ಯಾಪ್ತಿಯ 528 ಎಕರೆ ಪ್ರದೇಶದಲ್ಲಿರುವ ಶ್ರೀಗಂಧದ ಮರಗಳಲ್ಲಿ ಇತ್ತೀಚೆಗೆ 8 ರಿಂದ 10 ಮರಗಳ ಕಳ್ಳತನವಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದ ಏಳು ಜನರ ತಂಡ ಪೂಜಾವನ ಹಿಂಭಾಗದ ಸಿಬ್ಬಂದಿ ವಸತಿ ಗೃಹದ ಹಿಂದೆ ಹುವುಗಳ ಬನದ ಬಳಿ ಇದ್ದ ಶ್ರೀಗಂಧದ ಮರಗಳನ್ನು ಯಂತ್ರದ ಸಹಾಯದಿಂದ ಕತ್ತರಿಸಿ ಕಳುವು ಮಾಡಿದೆ.
ಭದ್ರತೆಗೆ ಇದ್ದ ಮೂವರು ಸಿಬ್ಬಂದಿ ಕಳ್ಳರನ್ನು ನೋಡಿ ಮಂಡಳಿಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಲು ದೂರವಾಣಿ ಕರೆ ಮಾಡಿದರೂ ಯಾರೂ ಕರೆ ಸ್ವೀಕರಿಸಿಲ್ಲ. ಕಳ್ಳರು ಬಂದಿದ್ದಾರೆ ಬನ್ನಿ ಎಂದು ಭದ್ರತಾ ಸಿಬ್ಬಂದಿ ಕೂಗಿದರೂ ವಸತಿ ಗೃಹದ ಸಿಬ್ಬಂದಿ ಸಹಾಯಕ್ಕೆ ಬಂದಿಲ್ಲದ ಕಾರಣ ಈ ಘಟನೆ ನಡೆದಿದೆ ಎನ್ನಲಾಗಿದೆ. ಅಲ್ಲದೇ ಇಷ್ಟೆಲ್ಲಾ ಶ್ರೀಗಂಧದ ಮರಗಳು ಕಳ್ಳತನವಾಗುತ್ತಿದ್ದರೂ ಪ್ರಾಧಿಕಾರದ ಅಧಿಕಾರಗಳು ಪ್ರಕರಣ ದಾಖಲಿಸಿಲ್ಲದಿರುವುದು ಸಂಶಯಕ್ಕೆ ಎಡೆ ಮಾಡಿ ಕೊಟ್ಟಿದೆ.