ಡಿ. ಎಸ್. ನಾಗಭೂಷಣ ಆಕಾಶವಾಣಿ ಬಲ್ಲ ಕನ್ನಡಿಗರಿಗೆಲ್ಲ ಬಲು ಆಪ್ತ ಹೆಸರು. ಅವರೊಂದು ಸುಸ್ಪಷ್ಟ ಮಧುರ ಕನ್ನಡ ವಾಣಿಯಾಗಿದ್ದರು. ಅವರೊಬ್ಬ ಸಿದ್ಧಾಂತಗಳ ಪರಿಧಿಯ ಮೇರೆ ಮೀರಿದ ಸಹಜ ಸಮಾಜವಾದಿಯಾಗಿದ್ದ ಅದ್ಭುತ ಲೇಖಕರೂ ಆಗಿದ್ದರು.ಡಿ.ಎಸ್.ನಾಗಭೂಷಣ 1952ರ ಫೆಬ್ರವರಿ 1 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕಿನ ತಿಮ್ಮಸಂದ್ರದಲ್ಲಿ ಜನಿಸಿದರು. ಅವರು ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಸೆಂಟ್ರಲ್ ಕಾಲೇಜಿನಲ್ಲಿ ಓದುವಾಗ ಗಣಿತದ ತರಗತಿಗಳನ್ನು ತಪ್ಪಿಸಿಕೊಂಡು ಸಾಹಿತ್ಯದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದ ಸಾಹಿತ್ಯಪ್ರಿಯರಾಗಿದ್ದರು.
ದೆಹಲಿ ಆಕಾಶವಾಣಿಯಲ್ಲಿ ಕನ್ನಡ ವಾರ್ತಾ ವಾಚಕರಾಗಿ 1975ರಿಂದ 1981ರವರೆ ಸೇವೆ ಸಲ್ಲಿಸಿದ್ದ ನಾಗಭೂಷಣ ಆನಂತರದಲ್ಲಿ ಸಹಾಯಕ ನಿಲಯ ನಿರ್ದೇಶಕರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 2005ರಲ್ಲಿ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದರು.
ಓದು, ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿದ್ದ ನಾಗಭೂಷಣ ‘ಇಂದಿಗೆ ಬೇಕಾದ ಗಾಂಧಿ’, ‘ಲೋಹಿಯಾ ಜೊತೆಯಲ್ಲಿ’, ‘ರೂಪ ರೂಪಗಳನು ಧಾಟಿ’, ‘ಕುವೆಂಪು ಒಂದು ಪುನರನ್ವೇಷಣೆ’, ‘ಕುವೆಂಪು ಸಾಹಿತ್ಯ ದರ್ಶನ’, ‘ಜಯ ಪ್ರಕಾಶ ನಾರಾಯಣ ಒಂದು ಅಪೂರ್ಣ ಕ್ರಾಂತಿಯ ಕಥೆ’, ‘ನಮ್ಮ ಶಾಮಣ್ಣ’, ‘ಕನ್ನಡದ ಮನಸು ಮತ್ತು ಇತರ ಲೇಖನಗಳು’, ‘ಕಾಲಕ್ರಮ’, ‘ಗಮನ’, ‘ಅನೇಕ’, ‘ಈ ಭೂಮಿಯಿಂದ ಆ ಆಕಾಶದವರೆಗೆ’, ‘ಮರಳಿ ಬರಲಿದೆ ಸಮಾಜವಾದ’, ‘ವಸಿಷ್ಠರು ಮತ್ತು ವಾಲ್ಮೀಕಿಯರು’, ‘ಹಣತೆ’(ಜಿಎಸ್ಸೆಸ್ ಅಭಿನಂದನೆ ಗ್ರಂಥ), ‘ಗಾಂಧಿ ಕಥನ’, ‘ವಿಧವಿಧ’, ‘ಸಮಾಜವಾದದ ಸಾಲುದೀಪಗಳು’ ಸೇರಿದಂತೆ ಹಲವು ಮಹತ್ವದ ಕೃತಿಗಳನ್ನು ಮೂಡಿಸಿದರು.ಡಿ. ಎಸ್. ನಾಗಭೂಷಣ ಅವರ ‘ಗಾಂಧಿ ಕಥನ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ 2021ರ ಸಾಲಿನ ವರ್ಷದ ಪುಸ್ತಕ ಪ್ರಶಸ್ತಿ ಸಂದಿತು. ಮಹಾತ್ಮ ಗಾಂಧಿ ಅವರ ಬದುಕಿನ ವಿವರಗಳನ್ನು ನಿರುದ್ವಿಗ್ನವಾಗಿ ಕಟ್ಟಿಕೊಡುವ ಈ ಕೃತಿಯು ಈವರೆಗೆ ಹಲವು ಬಾರಿ ಪುನರ್ ಮುದ್ರಣಗೊಂಡಿದೆ.ಡಿ. ಎಸ್. ನಾಗಭೂಷಣರ ಒಡನಾಡಿಯಾಗಿದ್ದ ಡಾ. ರಾಜೇಂದ್ರ ಚೆನ್ನಿ ಅವರ ಮಾತುಗಳು ಇಲ್ಲಿ ಅತ್ಯಂತ ಸ್ಮರಣೀಯ: “ಡಿ. ಎಸ್. ನಾಗಭೂಷಣ ಕನ್ನಡದ ಶ್ರೇಷ್ಠ ವಿಮರ್ಶಕ. ಅವರ ಸಮಾಜ, ಸಾಹಿತ್ಯ, ರಾಜಕೀಯ ದೃಷ್ಟಿಕೋನ ಅತ್ಯಂತ ಪ್ರಖರ. ಯಾವುದೇ ರೀತಿಯ ಹೊಂದಾಣಿಕೆ ಮಾಡಿಕೊಳ್ಳದ ವೈಚಾರಿಕ ಬದ್ಧತೆಯುಳ್ಳ ವ್ಯಕ್ತಿ. ಒಂದು ವಿರೋಧಪಕ್ಷ ಮಾಡಬೇಕಾದ ಕೆಲಸವನ್ನು ಇಡೀ ಬದುಕಿನುದ್ದಕ್ಕೂ ಮಾಡುತ್ತ ಬಂದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: